ಬಂಗಾರಪ್ಪನವರಂತೆ ನಿರ್ಧಾರ ತೆಗೆದುಕೊಂಡರೆ ಸಿಎಂ ಬೆನ್ನಿಗೆ ನಾವು ನಿಲ್ಲುತ್ತೇವೆ- ಮಧು ಬಂಗಾರಪ್ಪ
ರಾಯಚೂರು, ಸೆಪ್ಟೆಂಬರ್ 25: ಕಾವೇರಿ ವಿಚಾರದಲ್ಲಿ ಹಿಂದಿನ ಸಿಎಂ ಬಂಗಾರಪ್ಪನವರು ಕೈಗೊಂಡಿದ್ದ ದಿಟ್ಟ ನಿರ್ಧಾರವನ್ನೇನಾದರೂ ಇಂದಿನ ಸಿಎಂ ಸಿದ್ದರಾಮಯ್ಯ ಕೈಗೊಂಡರೆ, ಮುಂದೆ ಒದಗುವ ಎಲ್ಲಾ ಕಷ್ಟಕರ ಸಂದರ್ಭಗಳಲ್ಲಿ ನಾವು ಸಿಎಂ ಬೆನ್ನಿಗೆ ನಿಲ್ಲುತ್ತೇವೆ ಎಂದು ಮಾಜಿ ಸಿಎಂ ಬಂಗಾರಪ್ಪನವರ ಪುತ್ರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಕಾವೇರಿ ಸಮಸ್ಯೆಯು ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಬಂಗಾರಪ್ಪನವರ ಕಾಲದ ಕಾನೂನು ಬೇರೆ ಈಗಿನ ಕಾನೂನು ಬೇರೆ. ಆದರೆ, ಅಂದು ಸಿಎಂ ಆಗಿದ್ದ ಬಂಗಾರಪ್ಪನವರು ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು. ಈಗೇನಾದರೂ ನಮ್ಮ ಸಿಎಂ ಸಿದ್ದರಾಮಯ್ಯನವರು, ಅಂದು ಬಂಗಾರಪ್ಪನವರು ಕೈಗೊಂಡಿದ್ದ ನಿರ್ಧಾರವನ್ನೇ ಕೈಗೊಂಡರೆ ನಾವು ಸಿಎಂ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.

1991ರಲ್ಲಿ ಬಂಗಾರಪ್ಪನವರು ಸಿಎಂ ಆಗಿದ್ದಾಗಲೂ, ಕರ್ನಾಟಕಕ್ಕೆ ಇಂಥದ್ದೇ ಪರಿಸ್ಥಿತಿ ಬಂದೊಂದಗಿತ್ತು. ಅಣೆಕಟ್ಟುಗಳಲ್ಲಿ ನೀರಿನ ಕೊರತೆಯಿದ್ದಾಗಲೇ ಕಾವೇರಿ ಪ್ರಾಧಿಕಾರವು ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಆದೇಶಿಸಿತ್ತು. ಆದರೆ,ಇದರ ವಿರುದ್ಧ ಬಂಗಾರಪ್ಪ ಸೆಡ್ಡು ಹೊಡೆದರಲ್ಲದೆ, ತಮಿಳುನಾಡಿಗೆ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಘೋಷಿಸಿದ್ದರು. ಜೊತೆಗೆ, ಪ್ರಾಧಿಕಾರದ ಸೂಚನೆಯಂತೆ ನೀರು ಬಿಡದಿರಲು ಸುಗ್ರೀವಾಜ್ಞೆ ಹೊರಡಿಸಿದರು. ಆನಂತರ, ಈ ವಿಚಾರವನ್ನು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ಗೆ ವರ್ಗಾಯಿಸಿತ್ತು.
ಸಿದ್ದರಾಮಯ್ಯನವರು ಆಗ ವಿರೋದ ಪಕ್ಷದಲ್ಲಿದ್ದರು. ಬಂಗಾರಪ್ಪನವರು ಪ್ರಾಧಿಕಾರದ ಸೂಚನೆಯ ವಿರುದ್ಧ ಕ್ಯಾಬಿನೆಟ್ನಲ್ಲಿ ಸುಗ್ರೀವಾಜ್ಞೆ ತಂದಿದ್ದನ್ನು ಸಿದ್ದರಾಮಯ್ಯನವರೇ ವಿರೋಧಿಸಿದ್ದರು. ಪ್ರಾಧಿಕಾರದ ವಿರುದ್ದ ಹೋಗಿದ್ದಕ್ಕೆ ಹೈ ಕೋರ್ಟ್ಲ್ಲಿ ಆಗ ನಮಗೆ ಛೀಮಾರಿ ಹಾಕಿದ್ದರು. ಅಷ್ಟರೊಳಗೆ ನಮ್ಮ ತಂದೆಯವರು ಏನೇನ್ ಮಾಡಬೇಕೋ ಮಾಡಿ ಮುಗಿಸಿಬಿಟ್ಟಿದ್ದರು ಎಂದರು.

ಮಾತು ಮುಂದುವರಿಸಿದ ಅವರು, ಅಂದಿನ ಕಾಲ ಬೇರೆ, ಇಂದಿನ ಕಾಲ ಬೇರೆ. ಈಗ ಸಿದ್ದರಾಮಯ್ಯನವರು ನಮ್ಮ ತಂದೆಯವರು ಅನುಸರಿಸಿದ ಕ್ರಮಗಳನ್ನೇನಾದರೂ ಅನುಸರಿಸಿದರೆ, ಅದರಿಂದಾಗುವ ಎಲ್ಲಾ ಪರಿಣಾಮಗಳ ವೇಳೆ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.
ಬಂಗಾರಪ್ಪನವರನ್ನು ಸ್ಮರಿಸಿದ ಹೋರಾಟಗಾರರು
ಇತ್ತೀಚಿಗೆ ಮಂಡ್ಯದಲ್ಲಿ ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರರು ಮಾಧ್ಯಮಗಳ ಮುಂದೆ, ಬಂಗಾರಪ್ಪನವರಂಥ ನಾಯಕ ಹಾಗೂ ಸಿಎಂ ನಮಗೆ ಮತ್ತೆ ಸಿಗಲಿಲ್ಲ ಎಂದು ಅಲವತ್ತುಕೊಂಡಿದ್ದರು. ಬಂಗಾರಪ್ಪನವರು ಕಾವೇರಿ ನದಿ ನೀರನ್ನು ಕೊಡುವುದಿಲ್ಲ ಎಂದು ಕಾವೇರಿ ನೀರು ಹಂಚಿಕಾ ಪ್ರಾಧಿಕಾರಕ್ಕೆ ಸೆಡ್ಡು ಹೊಡೆದಿದ್ದರು ಎಂದು ಸ್ಮರಿಸಿಕೊಂಡಿದ್ದರು.
ಬಂಗಾರಪ್ಪನವರ ನಡೆಯು ಹೈಕೋರ್ಟ್, ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಅಷ್ಟರಮಟ್ಟಿಗೆ ನಮ್ಮ ನಾಡಿನ ನೆಲ, ಜಲದ ವಿಚಾರವಾಗಿ ಬಂಗಾರಪ್ಪನವರು ಹೋರಾಡಿದ್ದರಲ್ಲದೆ, ರೈತರ ಹಿತಕ್ಕಾಗಿ ಟೊಂಕ ಕಟ್ಟಿ ನಿಂತಿದ್ದರು. ತಮ್ಮ ನಡೆಗಳಿಂದ ಎಷ್ಟೇ ತೊಂದರೆಗಳು ಬಂದರೂ ಅದನ್ನು ಲೆಕ್ಕಿಸದೇ ರೈತರ ಹಿತ ಕಾಯ್ದರು. ಅಂಥ ಸಿಎಂ ಮತ್ತೆ ಬರಲಿಲ್ಲ ಎಂದು ಹೋರಾಟಗಾರರು ಹೇಳಿದ್ದರು.












Click it and Unblock the Notifications