ದಾವಣಗೆರೆ: ಶಂಕಿತ ಉಗ್ರ ಗ್ಯಾಂಗ್ ಅನ್ನ ಬಂಧಿಸಿದ್ದೇ ರೋಚಕ, ಮನೆ ಮಾಲೀಕರು ಫುಲ್ ಶಾಕ್
ದಾವಣಗೆರೆ, ಜೂನ್ 25: ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದರು ಎನ್ನಲಾದ ಉಗ್ರರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಅಡಗಿದ್ದ ಶಂಕಿತ ಉಗ್ರ ಸುಹೇಲ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಶಂಕಿತರಿಗೆ ಮನೆ ಬಾಡಿಗೆ ಕೊಟ್ಟಿದ್ದ ಮಾಲೀಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಶಂಕಿತ ಉಗ್ರ ಸುಹೇಲ್ಗೆ ಬಾಡಿಗೆ ಮನೆ ನೀಡಿದ್ದ ಬನ್ನಿಕೋಡು ಗ್ರಾಮದ ರೇಣುಕಮ್ಮ ಮತ್ತು ಗುತ್ಯಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಆತನ ಚಟುವಟಿಕೆಗಳ ವಿವರ ಹಾಗೂ ಪೊಲೀಸರು ದಾಳಿ ಮಾಡಿದ ರೋಚಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

10 ಜನರೊಂದಿಗೆ ಬಂದಿದ್ದ ಸುಹೇಲ್
ಮನೆ ಮಾಲೀಕರು ನೀಡಿರುವ ಮಾಹಿತಿಯ ಪ್ರಕಾರ, ಸುಮಾರು 15 ದಿನಗಳ ಹಿಂದೆಯಷ್ಟೇ ಸುಹೇಲ್ ಈ ಮನೆಗೆ ಬಾಡಿಗೆಗೆ ಬಂದಿದ್ದ. ಆತ ಒಬ್ಬನೇ ಇರದೆ, ಆತನ ಜೊತೆಯಲ್ಲಿ ಇನ್ನೂ 10 ಜನರು ಬಂದಿದ್ದರು. ತಿಂಗಳಿಗೆ 6,000 ರೂಪಾಯಿ ಬಾಡಿಗೆ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. 'ಅವರೆಲ್ಲರೂ ಸದಾ ತಮ್ಮತಮ್ಮಲ್ಲೇ ಹಿಂದಿ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ನಮ್ಮ ಬಳಿ ದಿನನಿತ್ಯ ಹಾಲು ಮತ್ತು ಮಜ್ಜಿಗೆಯನ್ನು ಪಡೆಯುತ್ತಿದ್ದರು. ಯಾರೊಂದಿಗೂ ಅಷ್ಟಾಗಿ ಬೆರೆಯದೆ, ತಾವು ಆಯಿತು ತಮ್ಮ ಕೆಲಸವಾಯಿತು ಎನ್ನುವಂತೆ ಇರುತ್ತಿದ್ದರು,' ಎಂದು ಮಾಲೀಕರು ತಿಳಿಸಿದ್ದಾರೆ.
ಸುಹೇಲ್ ಗ್ಯಾಂಗ್ಗೆ ಗಾಳ ಹಾಕಿದ ಪೊಲೀಸರು
ಜೂನ್ 23ರಂದು ಬೆಳಗಿನ ಜಾವ ಇಡೀ ಗ್ರಾಮವೇ ನಿದ್ರಿಸುತ್ತಿದ್ದಾಗ ಪೊಲೀಸರು ಈ ಮನೆಯ ಮೇಲೆ ಸದ್ದಿಲ್ಲದೆ ದಾಳಿ ನಡೆಸಿದ್ದಾರೆ. ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ 20ಕ್ಕೂ ಹೆಚ್ಚು ಪೊಲೀಸರು ಏಕಾಏಕಿ ಇಡೀ ಮನೆಯನ್ನು ಸುತ್ತುವರೆದಿದ್ದಾರೆ ಎಂದು ತಿಳಿದುಬಂದಿದೆ.
ಮನೆ ಮಾಲೀಕರು ಹೇಳಿದ್ದೇನು?
'ಪೊಲೀಸರು ಬಂದು ನಮಗೆ ಬಾಗಿಲು ತೆಗೆಯುವಂತೆ ಹೇಳಿದರು. ನಾವು ಬಾಗಿಲು ತೆರೆದ ತಕ್ಷಣವೇ ಕೆಲ ಅಧಿಕಾರಿಗಳು ಒಳಗೆ ಹೋಗಿ, ಅಲ್ಲಿ ಮಲಗಿದ್ದ ಸುಹೇಲ್ ಮತ್ತು ಆತನ ಜೊತೆಯಲ್ಲಿದ್ದ ಎಲ್ಲರನ್ನೂ ವಶಕ್ಕೆ ಪಡೆದು ಕರೆದುಕೊಂಡು ಹೋದರು. ನಾವು ಈ ಬಗ್ಗೆ ಪೊಲೀಸರನ್ನು ವಿಚಾರಿಸಿದಾಗ ಅವರು ಕೇವಲ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದರು. ಆದರೆ ಆತ ರಾಮಮಂದಿರದ ಮೇಲೆ ಕಣ್ಣಿಟ್ಟಿದ್ದ ಉಗ್ರ ಎಂಬ ಕಹಿ ಸತ್ಯ ನಮಗೆ ಟಿವಿಯಲ್ಲಿ ಸುದ್ದಿ ನೋಡಿದ ಮೇಲೆಯೇ ಗೊತ್ತಾಗಿದ್ದು,' ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಆತಂಕಕ್ಕೆ ಒಳಗಾದ ಮನೆ ಮಾಲೀಕರು
ಬಂಧಿತ ಸುಹೇಲ್ ನಡವಳಿಕೆ ಬಗ್ಗೆ ಮಾತನಾಡಿದ ಮಾಲೀಕರು, 'ಎಲ್ಲರ ಪೈಕಿ ಆತನೇ ಸ್ವಲ್ಪ ಹೆಚ್ಚು ಚಾಲಾಕಿಯಾಗಿದ್ದ. ಪದೇ ಪದೇ ನಮ್ಮ ಬಳಿ ಬಂದು ಬೈಕ್ ಕೀ ಕೇಳುತ್ತಿದ್ದ. ಅಲ್ಲದೆ ಪ್ರತಿ ಶುಕ್ರವಾರ ವಿಶೇಷವಾಗಿ ನಮಾಜ್ ಮಾಡಲು ಹೋಗುತ್ತಿದ್ದ. ಆತ ಇಂತಹ ದೇಶದ್ರೋಹಿ ಕೆಲಸದಲ್ಲಿ ತೊಡಗಿದ್ದಾನೆ ಎಂಬ ಸಣ್ಣ ಸುಳಿವು ನಮಗಿರಲಿಲ್ಲ. ಈ ವಿಚಾರ ನಮಗೆ ಮೊದಲೇ ಗೊತ್ತಿದ್ದರೆ ಖಂಡಿತಾ ಅವರಿಗೆ ಮನೆ ಬಾಡಿಗೆಗೆ ಕೊಡುತ್ತಿರಲಿಲ್ಲ,' ಎಂದು ಹೇಳಿದ್ದಾರೆ. ಸದ್ಯ ಈ ಘಟನೆಯಿಂದಾಗಿ ಬನ್ನಿಕೋಡು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಶಂಕಿತರ ತನಿಖೆಯನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications