ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಫೈಟ್- ರಾಜಧಾನಿಯಲ್ಲಿ ಬೀಡುಬಿಟ್ಟ ರಾಯಚೂರು ಕಾಂಗ್ರೆಸ್ ಮುಖಂಡರು
ರಾಯಚೂರು ಜುಲೈ 16: ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆ ಬಳಿಕ ನಾನಾ ನಿಗಮ ಮಂಡಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಪ್ರಕ್ರಿಯೆ ನಡೆಯಲಿದೆ ಎಂಬ ಸುಳಿವು ನೀಡಿದ ಬೆನ್ನಲ್ಲಿಯೇ ಜಿಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು, ಹಿರಿಯ ಸದಸ್ಯರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಈಗಾಗಲೇ ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್ ಅವರು ರಾಯಚೂರು ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಬೆಂಬಲಿಗರಿಗೆ ಹಾಗೂ ಪಕ್ಷಕ್ಕಾಗಿ ದುಡಿದ ನಾಯಕರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಈಗ ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳ ನಾಮನಿರ್ದೇಶನಕ್ಕೆ ಜೋರು ಲಾಬಿ ನಡೆದಿದ್ದು, ಜಿಲ್ಲೆಯ ಹಿರಿಯ ಕಾಂಗ್ರೆಸಿಗರು ಶಾಸಕರು, ಸಚಿವರ ಮನೆ ಬಾಗಿಲಿಗಳಿಗೆ ಎಡತಾಕುತ್ತಿರುವುದು ಕಂಡು ಬಂದಿದೆ.

ಜಿಲ್ಲೆಯಲ್ಲಿ 70 ಜನ ಹಿರಿಯ ಕಾಂಗ್ರೆಸಿಗರಿದ್ದು ಎಲ್ಲರೂ ಲಾಬಿ ನಡೆಸುತ್ತಿದ್ದಾರೆ. ಬಣ ಸಂಘರ್ಷದ ನಡುವೆಯೂ ನಿಗಮ ಮಂಡಳಿಗಳಿಗೆ ಸ್ಪರ್ಧೆ ಏರ್ಪಟ್ಟಿದೆ. ಸರ್ಕಾರದ ನಾನಾ ನಿಗಮ ಮಂಡಳಿಗಳ ನೇಮಕಕ್ಕೆ ತಮ್ಮ ಹೆಸರು ಶಿಫಾರಸು ಮಾಡುವಂತೆ ಜಿಲ್ಲೆಯ ಕಾಂಗ್ರೆಸ್ ಆಕಾಂಕ್ಷಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟು ಪಕ್ಷದ ವರಿಷ್ಠರು, ಶಾಸಕರು, ಸಚಿವರು, ಪ್ರಭಾವಿ ನಾಯಕರ ಮನೆಗಳಿಗೆ ಹೋಗಿ ದುಂಬಾಲು ಬೀಳುತ್ತಿದ್ದಾರೆ.
ಕೆಲವರು ನಾನು ಪಕ್ಷದಲ್ಲಿ ಇಷ್ಟು ದಶಕಗಳ ಕಾಲ ದುಡಿದಿರುವೆ ನನ್ನ ಸೇವೆ ಪರಿಗಣಿಸಬೇಕು ಎಂದು ಒತ್ತಾಯಿಸಿದರೆ, ಇನ್ನೂ ಕೆಲವರು ನಾನು ಇವರೆಗೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪಕ್ಷ ಸಂಘಟಿಸಿರುವೆ, ವಿಧಾನಸಭೆ ,ಲೋಕಸಭೆ ಚುನಾವಣೆಗಳ ವೇಳೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದು ನನಗೊಂದು ಅವಕಾಶ ಕೊಡಿ ಎಂದು ಮೊರೆಯಿಟ್ಟಿದ್ದಾರೆ. ಪಕ್ಷದ ವರಿಷ್ಠರು ಪಕ್ಷಕ್ಕಾಗಿ ದುಡಿದವರಿಗೆ ನ್ಯಾಯ ಸಿಗಲಿದೆ ಎಂಬ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಒಂದು ನಿರ್ದಿಷ್ಟ ಪಕ್ಷ ಅಧಿಕಾರಕ್ಕೆ ಬಂದಾಗ, ಆ ಪಕ್ಷದ ನಾಯಕರು ಯಾವುದಾದರೂ ಮಂಡಳಿ ಅಥವಾ ನಿಗಮದ ಅಧ್ಯಕ್ಷರಾಗಲು ಬಯಸುವುದು ಸಹಜ. ಹೀಗಾಗಿ ಜಿಲ್ಲಾ ಕಾಂಗ್ರೆಸ್ನ ನಾಯಕರು ನಾನಾ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಅಥವಾ ನಾಮನಿರ್ದೇಶನ ಸದಸ್ಯ ಸ್ಥಾನಗಳಿಗೆ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರಿಂದ ಅಭಿಪ್ರಾಯ ವ್ಯಕ್ತವಾಗಿದೆ.

ಕಾಂಗ್ರೆಸ್ ಸರಕಾರದಲ್ಲಿ ಪಕ್ಷದೊಂದಿಗೆ ದೀರ್ಘ ಕಾಲದಿಂದ ಒಡನಾಟ ಇಟ್ಟುಕೊಂಡು ಕೆಲಸ ಮಾಡಿದವರಿಗೆ ಆದ್ಯತೆ ಸಿಗಲಿದೆ ಎಂಬ ಅಭಿಪ್ರಾಯವೂ ಇದೆ. ಇದುವರೆಗೂ ಸರಕಾರದಲ್ಲಿ ಯಾವುದೇ ಹುದ್ದೆ ಅನುಭವಿಸದೇ ಇರುವವರನ್ನು ಗುರುತಿಸಿ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಹಲವು ಸಮುದಾಯದ ಮುಖಂಡರು ನಮ್ಮ ನಾಯಕರಿಗೆ ನಿಗಮ ಮಂಡಳಿ ಸ್ಥಾನ ನೀಡಿ ಎಂದು ಮಾಧ್ಯಮಗಳ ಮೂಲಕವೂ ಒತ್ತಾಯಿಸುತ್ತ ಲಾಭಿ ನಡೆಸಿರುವುದು ಗೋಚರಿಸಿದೆ. ಇನ್ನೂ ಕೆಲವರು ತಮ್ಮ ಕ್ಷೇತ್ರಗಳ ಶಾಸಕರಲ್ಲಿ ಪ್ರೀತಿ ವಿಶ್ವಾಸ ಸಂಪಾದಿಸಿ ನಿಗಮ ಮಂಡಳಿಯಲ್ಲಿ ಸ್ಥಾನ ಪಡೆಯುವ ಪ್ರಯತ್ನ ನಡೆಸಿದ್ದಾರೆ.ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದವರ ಸೇವೆ ಪರಿಗಣಿಸುವ ಸಾಧ್ಯತೆಯಿದೆ.
ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಒಡೆದ ಮನೆಯಾಗಿದೆ. ಒಬ್ಬರಿಗೊಬ್ಬರಲ್ಲಿ ಹೊಂದಾಣಿಕೆ ಇಲ್ಲ, ಗುಂಪುಗಾರಿಕೆಯಿದ್ದು ಯಾರಿಗೆ ನಿಗಮ ಮಂಡಳಿ ಸ್ಥಾನ ದೊರೆಯಲಿದೆ ಎಂಬ ಕುತೂಹಲ ಹೆಚ್ಚಿದೆ. ರಾಜ್ಯ ಸಚಿವ ಸಂಪುಟಕ್ಕೆ ಹಲವು ಹೊಸ ಮುಖಗಳನ್ನು ಸೇರ್ಪಡೆ ಮಾಡಿರುವುದರಿಂದಾಗಿ ಕೆಲ ಜನಪ್ರಿಯ ಹಾಗೂ ಹಿರಿಯ ಶಾಸಕರು ಸಂಪುಟ ದರ್ಜೆ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಅಲ್ಲದೇ ಟಿಕೆಟ್ ವಂಚಿತರಾದವರಿಗೆ, ಸಚಿವ ಸ್ಥಾನ ಸಿಗದವರಿಗೆ ನಿಗಮ ಮಂಡಳಿ ಸ್ಥಾನ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದು ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ಸಿಗಲಿದೆ. ಪಕ್ಷದ ಹಿರಿಯರು ಮತ್ತು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಪಕ್ಷವೂ ನಿರಂತರವಾಗಿ ದುಡಿದವರಿಗೆ ಮಾತ್ರ ಪ್ರಮುಖ ಸ್ಥಾನ ನೀಡಲಿದೆ ಎಂದು ರಾಯಚೂರು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಎ. ವಸಂತ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications