ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.: ಸಿಎಂ ಬೊಮ್ಮಾಯಿ
ರಾಯಚೂರು ಅಕ್ಟೋಬರ್ 11: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಬಜೆಟ್ನಲ್ಲಿ 5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಗಿಲ್ಲೇಸುಗೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "371 ಜೆ ಬಂದಾಗ ಕಲ್ಯಾಣ ಕರ್ನಾಟಕದ ಕುರಿತು ಜನರು ಕನಸು ಕಂಡರು. ಆದರೆ, ಕಾಂಗ್ರೆಸ್ನವರು ಅನುದಾನ ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಗರಿಷ್ಠ ಅನುದಾನ ಕೊಟ್ಟಿದ್ದೇವೆ. 3 ಸಾವಿರ ಕೋಟಿಯನ್ನು ನಾನು ನೀಡಿದ್ದೇನೆ. ರಾಯಚೂರು ವಿವಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಂದು ಕ್ಷೇತ್ರಕ್ಕೆ ಅನುದಾನ ಕೊಡಲಾಗಿದೆ" ಎಂದರು.
ಇನ್ನು "ಮೀಸಲಾತಿ ಸಂಬಂಧ ಬಿಜೆಪಿ ದಿಟ್ಟ ನಿಲುವು ತೆಗೆದುಕೊಂಡಾಗ ಕಾಂಗ್ರೆಸ್ನವರಿಗೆ ದೀನದಲಿತರು ನೆನಪಾಗುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ ಎನ್ನುತ್ತಾರೆ. ರಾಜ್ಯದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಆಳ್ವಿಕೆ ಇತ್ತು. ಆಗ ನೀವು ದೀನದಲಿತರಿಗಾಗಿ ಮಾಡಿದ್ದೇನು..? ರಾಜ್ಯಕ್ಕೇ ದೌರ್ಭಾಗ್ಯ ಕೊಟ್ಟ ಕಾಂಗ್ರೆಸ್ಸಿಗರು, ಎಸ್.ಸಿ, ಎಸ್.ಟಿಗೆ ದೊಡ್ಡ ದೌರ್ಭಾಗ್ಯವನ್ನೇ," ಎಂದು ಕಾಂಗ್ರೆಸ್ ಅವರನ್ನು ಟೀಕಿಸಿದರು.

ದೀನದಲಿತರಿಗಾಗಿ ಭಾರತ್ ಜೋಡೋ ಯಾತ್ರೆ ಅಲ್ಲ
"ಕಾಂಗ್ರೆಸ್ ನಾಯಕ ಸಿದ್ದರಾಮಣ್ಣ ಸಮಾಜವಾದವನ್ನು ಮರೆತು ಬಿಟ್ಟಿದ್ದಾರೆ ಎಂಬುದು ದುಃಖದ ವಿಚಾರ. ಸಿದ್ದರಾಮಣ್ಣ ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ದಾರೆ. ರೀಲಾಂಚಿಂಗ್ ರಾಹುಲ್ ಗಾಂಧಿ ಹೊಸ ಚಿಂತನೆಯೊಂದಿಗೆ ರಾಜಕೀಯದಲ್ಲಿ ಪ್ರಸ್ತುತರಾಗಲು ಪಾದಯಾತ್ರೆ ಮಾಡುತ್ತಿದ್ದಾರೆ. ದೇಶ, ಜನರು, ಬಡವರು ಮತ್ತು ದೀನದಲಿತರಿಗಾಗಿ ಈ ಯಾತ್ರೆ ಅಲ್ಲ. ಅಂಥಹ ಭಾರತ್ ಜೋಡೋಗೆ ಸಿದ್ದರಾಮಯ್ಯ ಸಾಥ್ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದೆ," ಎಂದು ವ್ಯಂಗ್ಯ ಮಾಡಿದರು.

ಕಾಂಗ್ರೆಸ್ ಕನಸು ಕನಸಾಗಿಯೇ ಉಳಿಯಲಿದೆ
" ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಕೈ ಕೊಟ್ಟಿದೆ. ರೈತರಿಗೆ ಕೈ ಕೊಟ್ಟಿದೆ. ದೀನದಲಿತರಿಗೆ ಕೈ ಕೊಟ್ಟಿದೆ. ಇಡೀ ಕರ್ನಾಟಕದ ಜನತೆಗೆ ಸುಳ್ಳು ಹೇಳುತ್ತಿದೆ. ಒಂದು ಸುಳ್ಳನ್ನು ಹತ್ತಾರು ಬಾರಿ ಹೇಳಿದರೆ ಜನಮನ್ನಣೆ ಸಿಗುವ ಕನಸು ಕಾಂಗ್ರೆಸ್ ಪಕ್ಷದವರದು. ಕಾಂಗ್ರೆಸ್ ಕನಸು ಕನಸಾಗಿಯೇ ಉಳಿಯಲಿದೆ. ಕರ್ನಾಟಕದಲ್ಲಿ ಜನತೆ ಈಗಾಗಲೇ ಕಾಂಗ್ರೆಸ್ ದುರಾಡಳಿತವನ್ನು ನೋಡಿದ್ದಾರೆ. ಅದರಲ್ಲಿ ಇದ್ದವರು ಸ್ವಲ್ಪವೇ ದಿನದಲ್ಲಿ ಬಿಜೆಪಿ ಕಡೆ ಬರಲಿದ್ದಾರೆ," ಎಂದು ಹೇಳಿದರು.

ಭ್ರಷ್ಟ ನೌಕರಿ ಭಾಗ್ಯ ಕಾಂಗ್ರೆಸ್ ಸಾಧನೆ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿಎಂ ಬೊಮ್ಮಾಯಿ, "ಕಾಂಗ್ರೆಸ್ ಕಾಲದಲ್ಲಿ ಹಲವು ಹಗರಣಗಳಾಗಿವೆ. ಆದರೆ, ಕ್ರಮ ಕೈಗೊಂಡಿಲ್ಲ. ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಇದು ನಮ್ಮ ತಾಕತ್ತು. ಅರ್ಜಿ ಕೊಡದವರಿಗೆ ನೌಕರಿ ಕೊಟ್ಟಿದ್ದಾರೆ. ಭ್ರಷ್ಟ ನೌಕರಿ ಭಾಗ್ಯ ಕಾಂಗ್ರೆಸ್ ಸಾಧನೆ. ಕಾಂಗ್ರೆಸ್ ಅವಧಿಯಲ್ಲಿ ಕಾನೂನು ಮತ್ತು ಯೋಜನೆಗಳು ಕೇವಲ ಪುಸ್ತಕದಲ್ಲಷ್ಟೇ ಉಳಿದಿದ್ದವು. ಜನರಿಗೆ ಅದರ ಪ್ರಯೋಜನ ಸಿಗಲಿಲ್ಲ" ಎಂದು ಟೀಕಿಸಿದರು.

ಮತ್ತೊಮ್ಮೆ ಕಮಲವನ್ನು ಅರಳಿಸುವ ಸಂಕಲ್ಪ ಮಾಡಿ
"ನರೇಂದ್ರ ಮೋದಿ ಅವರ ಆಶೀರ್ವಾದದಿಂದ ರಾಯಚೂರಿಗೆ ಏಮ್ಸ್ ಬರಲಿದೆ ಎಂದು ವಿಶ್ವಾಸದಿಂದ ತಿಳಿಸಿದರು. ರಾಯಚೂರಿನ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವು ಕಂಕಣ ಬದ್ಧರಾಗಿದ್ದೇವೆ. ನಾವು, ರೈತರು, ರೈತರ ಮಕ್ಕಳು, ವಿದ್ಯಾರ್ಥಿಗಳು, ಹಾಲು ಉತ್ಪಾದಕರು ಸೇರಿ ಎಲ್ಲ ವರ್ಗದ ಜನರಿಗಾಗಿ ಯೋಜನೆಗಳನ್ನು ರೂಪಿಸಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಈ ಸಂಕಲ್ಪ ಯಾತ್ರೆ ಅಂತಿಮಗೊಂಡಾಗ ಇದು ವಿಜಯಯಾತ್ರೆಯಾಗಿ ಪರಿವರ್ತನೆಗೊಳ್ಳಲಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಸಂಕಲ್ಪವನ್ನು ನೀವು ಮಾಡಬೇಕೆಂದು" ಜನರಿಗೆ ಮನವಿ ಮಾಡಿದರು.












Click it and Unblock the Notifications