ಅಭ್ಯರ್ಥಿ ನೋಡಿ ಮತಹಾಕಿ, ಮೋದಿ ನೋಡಿ ಅಲ್ಲ: ಸಿದ್ದರಾಮಯ್ಯ
ರಾಯಚೂರು, ಏಪ್ರಿಲ್ 19: ರಾಜ್ಯದ ಬಿಜೆಪಿ ಸಂಸದರ ಸಾಧನೆ ಶೂನ್ಯ ಹಾಗಾಗಿ ಅವರು ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಯಚೂರಿನಲ್ಲಿ ಆಯೋಜಿಸಿದ್ದ ಬೃಹತ್ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸಂಸದರಿಗೆ ಜನರಿಗೆ ಮುಖ ತೋರಿಸುವ ನೈತಿಕತೆ ಇಲ್ಲ, ಅದಕ್ಕೆ ಮೋದಿ ಮುಖ ನೋಡಿ ಮತ ಹಾಕಿ ಎಂದು ಅಂಗಲಾಚುತ್ತಿದ್ದಾರೆ ಎಂದು ಹೇಳಿದರು.
ಮೋದಿ ಮಾಡಿದ ಅನ್ಯಾಯ ನಾವು ಸರಿಮಾಡುತ್ತೇವೆ: ರಾಹುಲ್
ಮೋದಿ ಮುಖ ಮತ ಹಾಕಬೇಕೆಂದಿದ್ದರೆ ಅವರೇಕೆ ಚುನಾವಣೆಗೆ ನಿಲ್ಲಬೇಕಿತ್ತು, ಅಥವಾ ಕಳೆದ ಐದು ವರ್ಷಗಳಲ್ಲಿ ನಿಜವಾಗಿ ಕೆಲಸ ಮಾಡಿದ್ದರೆ ಬೇರೆಯವರ ಹೆಸರಲ್ಲಿ ಮತ ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅವಧಿಯಲ್ಲಿ 12 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು, ನಾಲ್ಕು ಯುದ್ಧಗಳು ನಡೆದಿದ್ದವು. ವಾಜಪೇಯಿ ಅವರು ಲೋಕಸಭೆಯಲ್ಲಿಯೇ ಇಂದಿರಾ ಅವರನ್ನು ದುರ್ಗೆ ಎಂದು ಹೊಗಳಿದ್ದರು, ಆದರೆ ಕಾಂಗ್ರೆಸ್ ಎಂದೂ ಮೋದಿಯಂತೆ ಸೈನಿಕರನ್ನು ಮತಕ್ಕಾಗಿ ಬಳಕೆ ಮಾಡಿಕೊಂಡಿರಲಿಲ್ಲ ಎಂದು ಹೇಳಿದರು.
ಮೋದಿ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ: ದೇವೇಗೌಡ
ಬಿಜೆಪಿ ಸಾಮಾಜಿಕ ನ್ಯಾಯಪರವಾದ ಪಕ್ಷವಲ್ಲ, ಅವರು ಈ ಚುನಾವಣೆಯಲ್ಲಿ ಒಬ್ಬ ಹಿಂದುಳಿದವರಿಗೂ ಟಿಕೆಟ್ ನೀಡಿಲ್ಲ, ಆದರೆ ಕಾಂಗ್ರೆಸ್ ಐದು ಮಂದಿ ಹಿಂದುಳಿದ ಜಾತಿಯವರಿಗೆ ಟಿಕೆಟ್ ನೀಡಿದೆ ಮತ್ತು ಜೆಡಿಎಸ್ ಮೂರು ಜನ ಹಿಂದುಳಿದವರಿಗೆ ಟಿಕೆಟ್ ನೀಡಿದೆ ಎಂದು ಹೇಳಿದರು.
ಈಶ್ವರಪ್ಪ ಉದ್ದನೆಯ ನಾಲಗೆ ಬಿಡುತ್ತಾರೆ, ಆದರೆ ಒಬ್ಬ ಕುರುಬರಿಗೆ ಟಿಕೆಟ್ ಕೊಡಿಸಲಿಲ್ಲ ಎಂದು ಜರಿದ ಅವರು, ಬಿಜೆಪಿ ಸಂವಿಧಾನ ವಿರೋಧಿ, ಪ್ರಜಾತಂತ್ರ ವಿರೋಧಿ, ಮೀಸಲಾತಿ ವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ, ಅಂತಹಾ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಸಿದ್ದರಾಮಯ್ಯ ಗುಡುಗಿದರು.