ಭಾರತ್ ಜೋಡೋ ಯಾತ್ರೆ: ಆಕರ್ಷಕ ಟೀಶರ್ಟ್ನಲ್ಲಿ ಮಿಂಚಿದ ರಾಯಚೂರಿನ ಸ್ಥಳೀಯರು
ರಾಯಚೂರು, ಅಕ್ಟೋಬರ್, 21: ಭಾರತ್ ಜೋಡೋ ಯಾತ್ರೆಯಲ್ಲಿ ಕೆಲವರು ತಮ್ಮ ಶಕ್ತಿ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಿದ್ಧತೆ ಮಾಡಿಕೊಂಡಿರುವುದು ಕಂಡುಬಂದಿದೆ. ಶಾಸಕ ದದ್ದಲ್ ಬಸವನಗೌಡ ಮತ್ತು ಸೇವಾಕಾಂಕ್ಷಿ ಎಂದು ಬಿಂಬಿತವಾಗಿರುವ ಚಂದ್ರಶೇಖರ್ ನಾಯಕ ಪರಸ್ಪರ ತಮ್ಮ ಶಕ್ತಿ ಪ್ರದರ್ಶನಕ್ಕೆ ಭಾರತ್ ಜೋಡೋ ಯಾತ್ರೆಯನ್ನು ವೇದಿಕೆ ಮಾಡಿಕೊಂಡಿದ್ದಾರೆ. ಶಾಸಕ ದದ್ದಲ್ ಬಸವನಗೌಡ ಮತ್ತು ಚಂದ್ರಶೇಖರ್ ತಮ್ಮ ಭಾವಚಿತ್ರ ಹೊಂದಿದ ಪ್ರತ್ಯೇಕ ಟೀಶರ್ಟ್ಗಳನ್ನು ಮಾಡಿಸಿ ಯುವಕರಿಗೆ ನೀಡಿದ್ದರು.
ಹೀಗೆ ಭಾರತ್ ಜೋಡೋ ಯಾತ್ರೆಯುದ್ದಕ್ಕೂ ರಾಜ್ಯದ ಮುಖಂಡರು ತಮ್ಮನ್ನು ಗುರುತಿಸುವಂತೆ ಮಾಡಲು ಭಾರಿ ಕಸರತ್ತು ನಡೆಸಿದರು. ಗ್ರಾಮೀಣ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ದದ್ದಲ್ ಬಸನಗೌಡ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಕೆಲ ದೂರದವರೆಗೂ ಅವರೊಡನೆ ಸಂಚರಿಸಿದರು. ಇನ್ನು ಚಂದ್ರಶೇಖರ್ ನಾಯಕ ಮಾದವರಂ ಪೂರ್ವದಲ್ಲಿಯೇ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು.
ಡಿಕೆಶಿ ಅರ್ಪಿಸಲು ಮುಂದಾದ ಬೆಳ್ಳಿ ಖಡ್ಗ ತಿರಸ್ಕರಿಸಿದ ಮಂತ್ರಾಲಯ ಸ್ವಾಮೀಜಿ
ನಿರೀಕ್ಷೆಗೂ ಮೀರಿ ಜನರು ಸೇರಿರುವುದು ಮತ್ತು ಬಿಸಿಲಿನ ತಾಪಮಾನ ತೀವ್ರವಾಗಿರುವುದರಿಂದ ರ್ಯಾಲಿಯಲ್ಲಿ ಪಾಲ್ಗೊಂಡವರಿಗೆ ನೀರಿನ ದಾಹ ವಿಪರೀತವಾಗಿ ಕಾಡಿತ್ತು. ಅಲ್ಲಲ್ಲಿ ನೀರಿನ ಪೌಚ್ಗಳನ್ನು ಒದಗಿಸಲಾಗಿತ್ತು. ಆದರೂ ಕೂಡ ಭಾರಿ ಸಂಖ್ಯೆಯಲ್ಲಿ ಬಂದ ಜನರಿಗೆ ಇದು ಸಾಲದ್ದಾಗಿತ್ತು. ರಾಹುಲ್ ಗಾಂಧಿ ಅವರ ಸುತ್ತಮುತ್ತ ಹಗ್ಗ ಹಿಡಿದು ಭದ್ರತೆಗೆ ನಿಂತಿದ್ದ ಪೊಲೀಸರು, ಅವರ ಬಳಿ ಯಾರು ಸುಳಿಯದಂತೆ ತಡೆಯಲು ಕಸರತ್ತು ನಡೆಸಬೇಕಾಯಿತು.
ರಾಹುಲ್ ನೋಡಲು ನೆರೆದಿದ್ದ ಜನಸಾಗರ
ಜಿಲ್ಲೆಯ ಪ್ರವೇಶದಲ್ಲಿಯೇ ಭಾರತ್ ಜೋಡೋ ಯಾತ್ರೆ ಭಾರಿ ಜನಮನ್ನಣೆ ಪಡೆಯುವ ರೀತಿಯಲ್ಲಿ ಜನರು ಸ್ವಾಗತಕ್ಕೆ ನಿಂತಿದ್ದರು. ಸುಮಾರು 15 ಕಿಲೋ ಮೀಟರ್ ದೂರದ ಗಿಲ್ಲೇಸೂಗೂರಿಗೆ ಆಗಮಿಸಿದ ಪಾದಯಾತ್ರೆಯಲ್ಲಿ ಗೊಂದಲ ಮತ್ತು ಅವಘಡ ಇಲ್ಲದಂತೆ ಪೊಲೀಸರು ಭದ್ರತೆ ವ್ಯವಸ್ಥೆಯನ್ನು ಕೈಗೊಂಡಿದ್ದರು. ತುಂಗಭದ್ರಾ ಸೇತುವೆ ಪ್ರವೇಶಿಸುತ್ತಿದ್ದಂತೆ ಗಿಲ್ಲೇಸೂಗೂರು-ರಾಯಚೂರು ಮಧ್ಯೆ ಹೆದ್ದಾರಿ ಸಂಪೂರ್ಣ ಸಂಚಾರ ಮುಕ್ತಗೊಳಿಸಿ, ಪಾದಯಾತ್ರೆಗೆ ದಾರಿ ಮಾಡಿಕೊಡಲಾಗಿತ್ತು.
Breaking; ಬಳ್ಳಾರಿ ಸಮಾವೇಶದ ಬಳಿಕ ಭಾರತ್ ಜೋಡೋ ಮತ್ತೆ ಆರಂಭ
ಕಿಲೋ ಮೀಟರ್ಗಟ್ಟಲೇ ನಿಂತಿದ್ದ ಜನ
ತುಂಗಭದ್ರಾ ನದಿಯಿಂದ ಗಿಲ್ಲೇಸೂಗೂರಿನವರೆಗೂ ಎಲ್ಲಿ ನೋಡಿದರೂ, ಜನಜಾತ್ರೆಯಿಂದ ತುಂಬಿ ತುಳುಕುತ್ತಿತ್ತು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಇಂದು ಮುಂಜಾನೆ ತುಂಗಭದ್ರಾ ಸೇತುವೆ ಮೂಲಕ ತಾಲೂಕನ್ನು ಪ್ರವೇಶಿಸಿತು. ಕಿಲೋ ಮೀಟರ್ಗಟ್ಟಲೇ ಜನರು ನಿಂತು ಭಾರತ್ ಜೋಡೋ ಯಾತ್ರೆಯ ಪರ ಘೋಷಣೆಗಳನ್ನು ಕೂಗಿದರು. ನಿನ್ನೆ ರಾತ್ರಿ ಮಂತ್ರಾಲಯದಲ್ಲಿ ವಾಸ್ತವ್ಯ ಹೂಡಿ, ಶ್ರೀ ಗುರು ರಾಯರ ದರ್ಶನ ಪಡೆಯಲಾಗಿತ್ತು. ನಂತರ ಇಂದು ಮುಂಜಾನೆ ನಿಗದಿತ ಸಮಯಕ್ಕೆ ಪಾದಯಾತ್ರೆ ಮೂಲಕ ಮಂತ್ರಾಲಯದಿಂದ ರಾಯಚೂರಿನತ್ತ ಸಾಗಿದ ರಾಹುಲ್ ಗಾಂಧಿಯನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು.
ಬೆಳಗ್ಗೆ 8ಕ್ಕೆ ರಾಯಚೂರಿಗೆ ಪ್ರವೇಶ
ಮಂತ್ರಾಲಯದಿಂದ ಗಿಲ್ಲೇಸೂಗೂರಿನವರೆಗೂ ದಾರಿಯುದ್ಧಕ್ಕೂ ಜನರು ನಿಂತಿದ್ದರು. ಯಾತ್ರೆಯೂ ಬೆಳಗ್ಗೆ 8 ಗಂಟೆ ಸುಮಾರಿಗೆ ತುಂಗಭದ್ರಾದ ಮೂಲಕ ತಾಲೂಕು ಪ್ರವೇಶಿಸಿದೆ. ವಿವಿಧ ಕಲಾ ತಂಡಗಳ ಮೂಲಕ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ಸಿನ ಮುಖಂಡರು ರಾಹುಲ್ ಗಾಂಧಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಎನ್. ಎಸ್.ಬೋಸರಾಜು, ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ದದ್ದಲ್ ಬಸವನಗೌಡ ಸೇರಿದಂತೆ ಅನೇಕ ಮುಖಂಡರು ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ಸ್ವಾಗತಿಸಿದರು.
ಯಾತ್ರೆಯಲ್ಲಿ ಗಮನ ಸೆಳೆದ ವೇಷಧಾರಿಗಳು
ತುಂಗಭದ್ರಾ ಸೇತುವೆಯಿಂದ ಗಿಲ್ಲೇಸೂಗೂರಿನವರೆಗೂ 4 ರಿಂದ 5 ಕಿಲೋ ಮೀಟರ್ ಜನಸಾಗರವೇ ನೆರೆದಿತ್ತು. ದಾರಿಯುದ್ಧಕ್ಕೂ ರಾಹುಲ್ ಗಾಂಧಿ ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಇನ್ನಿತರರನ್ನು ತಮ್ಮ ಬಳಿ ಕರೆದು ಮಾತನಾಡಿಸಿದರು. ಭಾರತ್ ಜೋಡೋ ಯಾತ್ರೆಯಲ್ಲಿ ಸುರಪುರದ ಮುತ್ತುರಾಜ್ ಮಹಾತ್ಮಗಾಂಧಿ ವೇಷ ಧರಿಸಿದ್ದರೆ, ಗಿಲ್ಲೇಸೂಗೂರು ಬಾಲಕಿಯೊಬ್ಬರು ಇಂದಿರಾ ಗಾಂಧಿಯ ವೇಷ ಧರಿಸಿ ಗಮನ ಸೆಳೆದಿದ್ದಾರೆ. ಹೀಗೆ ಹತ್ತು ಹಲವು ವೇಷಧಾರಿಗಳು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ವೈವಿಧ್ಯತೆ ಮೆರೆದರು.