ರಾಯಚೂರು; ಆಧಾರ್ ತಿದ್ದುಪಡಿಗಾಗಿ ಜನರ ಅಲೆದಾಟ
ರಾಯಚೂರು, ಜು6: ಹೊಸ ಆಧಾರ್ ಪಡೆದುಕೊಳ್ಳಲು ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಜಿಲ್ಲೆಯಾದ್ಯಂತ ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನೂ ಶಾಲಾ ಹಾಗೂ ಕಾಲೇಜುಗಳನ್ನು ಬಿಟ್ಟು ಮಕ್ಕಳು ಆಧಾರ್ ಪಡೆದುಕೊಳ್ಳುವಂತಾಗಿದೆ.
ಸರ್ಕಾರ ಜೂನ್ 1 ರಿಂದ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಆದರೆ ಮಕ್ಕಳ ಆಧಾರ್ ತಿದ್ದುಪಡಿ, ನೂತನ ಆಧಾರ್ ಮಾಡಿಸುವುದು, ಮೊಬೈಲ್ ಸಂಖ್ಯೆ ಸೇರಿ ನಾನಾ ಸಮಸ್ಯೆಗೆ ಸಂಬಧಿಸಿದಂತೆ ಗ್ರಾಮೀಣ ಪ್ರದೇಶದ ಮಕ್ಕಳು ಶಾಲೆ ಬಿಟ್ಟು ಆಧಾರ್ ಮಾಡಿಸಲು ಅಲೆದಾಡುವಂತಾಗಿದೆ.
ಒಂದು ಸಲ ಆಧಾರ್ ತಿದ್ದುಪಡಿ ಮಾಡಿಸಲು ಒಂದು ವಾರಗಟ್ಟಲೇ ಅಲೆಯಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಾಲಕರು ಮಕ್ಕಳಿಗೆ ಆಧಾರ್ ನೋಂದಣಿ ಮಾಡಿಸಲು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪ್ರತಿ ತಾಲ್ಲೂಕಿನಲ್ಲೂ ಒಂದು ಗ್ರಾಮ ಪಂಚಾಯಿತಿನಲ್ಲಿ ಮಾತ್ರ ಸರ್ಕಾರದಿಂದ ಆಧಾರ್ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.

ನೋಂದಣಿ ನಡೆಯುವ ಗ್ರಾಮ ಪಂಚಾಯಿತಿಗಳು ಮೇಲಿಂದ ಮೇಲೆ ಬದಲಾಗುತ್ತಲೇ ಇರುತ್ತೇವೆ. ಆಧಾರ್ ಬಗ್ಗೆ ನೋಂದಣಿ ಎಲ್ಲಿ ನಡೆಯುತ್ತಿದೆ? ಎಂಬ ಮಾಹಿತಿ ಕೊರತೆಯಿಂದ ಜನರು ಪರದಾಡುವಂತಾಗಿದೆ. ಗ್ರಾಮೀಣ ಪ್ರದೇಶದ ಜನರಿಂದ ಅರ್ಜಿ ತುಂಬಿಕೊಳ್ಳಲು ಹಣ ಕೇಳುತ್ತಿದ್ದಾರೆ ಎಂಬ ಆರೋಪವೂ ಇದೆ.
ನಾಮಫಲಕ ನಾಪತ್ತೆ; ನಗರದ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ಮತ್ತು ಏಜೆನ್ಸಿಗಳು ಆಧಾರ್ ತಿದ್ದುಪಡಿ ಮಾಡುವ ದರ ನಾಮಫಲಕವನ್ನು ಹಾಕದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಜೆನ್ಸಿ ಅವರು ಬಡ ನೇಕಾರರು, ಕೂಲಿ ಕಾರ್ಮಿಕರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ.
ಸರ್ಕಾರದ ನಿಯಮದಂತೆ ಖಾಸಗಿ ಏಜೆನ್ಸಿಗಳಲ್ಲೂ ಹೊಸ ಆಧಾರ್ ನೋಂದಣಿಯನ್ನು ಉಚಿತವಾಗಿ ಮಾಡಬೇಕಿದೆ. ತಿದ್ದುಪಡಿಗೆ 50 ರೂಪಾಯಿ ನಿಗದಿಪಡಿಸಲಾಗಿದೆ. ಆದರೆ ಖಾಸಗಿ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಮನ ಬಂದಂತೆ ಹಣ ವಸೂಲಿ ಮಾಡಲಾಗುತ್ತಿದೆ.

ಸರ್ಕಾರ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯಗೊಳಿಸಿದೆ. ಆದರೆ ಖಾಸಗಿ ನೋಂದಣಿ ಏಜೆನ್ಸಿಗಳು ಆಧಾರ್ ಕಾರ್ಡ್ ಮಾಡಿಕೊಡುವುದನ್ನೇ ದಂಧೆ ಮಾಡಿಕೊಂಡಿದೆ. ಪ್ರತಿ ನೋಂದಣಿಗೆ 150 ರಿಂದ 160 ರೂಪಾಯಿ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಅಂಚೆ ಕಚೇರಿ ಅಥವಾ ಪಂಚಾಯಿತಿಯಲ್ಲಿ ಸಾರ್ವಜನಿಕರು ಹೊಸ ಆಧಾರ್ ನೋಂದಣಿಗೆ ಶುಲ್ಕ ಪಾವತಿಸಬೇಕಿಲ್ಲ. ತಿದ್ದುಪಡಿ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಹೆಸರು ಬದಲಾವಣೆ ಸೇವೆ ಉಚಿತ. ಆದರೆ ಖಾಸಗಿ ಏಜೆನ್ಸಿಗಳಲ್ಲಿ ಕಂಪ್ಯೂಟರ್ ಆಪರೇಟರ್ಗಳಿಗೆ ದುಡ್ಡು ಕೊಟ್ಟವರಷ್ಟೇ ಕೆಲಸ ಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಪೋಷಕರ ಒತ್ತಾಯ; "ಆಧಾರ್ ತಿದ್ದುಪಡಿಗಾಗಿ ಕಳೆದ ಒಂದು ವಾರದಿಂದ ಶಾಲೇ ಬಿಟ್ಟು ನಗರಕ್ಕೆ ಬರುತ್ತಿದ್ದೇನೆ. ಆದರೆ ಇದೂವರೆಗೂ ಸಮಸ್ಯೆ ಬಗೆಹರಿಯುತ್ತಿಲ್ಲ. ಬರೀ ತಾಂತ್ರಿಕ ಸಮಸ್ಯೆ ಎಂದು ಹೇಳುತ್ತಿದ್ದಾರೆ. ತರಗತಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ" ಎಂದು ವಿದ್ಯಾರ್ಥಿನಿ ಮಾಳವಿಕ ಹೇಳಿದರು.

"ಮಕ್ಕಳ ಆಧಾರ್ ತಿದ್ದುಪಡಿಗಾಗಿ ಒಂದು ವಾರದಿಂದ ಕೃಷಿ ಚಟುವಟಿಕೆಯನ್ನು ಬಿಟ್ಟು ನಗರಕ್ಕೆ ಬರುತ್ತಿದ್ದು ಪ್ರತಿದಿನ ನಗರಕ್ಕೆ ಬರುತ್ತಿದ್ದೇನೆ. ಆದರೆ ಏಜೆನ್ಸಿಯವರು ಹಲವು ಕಾರಣಗಳನ್ನು ಹೇಳಿ ಕಳುಹಿಸುತ್ತಿದ್ದಾರೆ" ಎಂದು ಪಾಲಕರಾದ ಮಹೇಶ ಪತ್ತೇಪುರ ಹೇಳಿದರು.
ವಿದ್ಯಾರ್ಥಿ ವೇತನಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿದ್ದು ಆಧಾರ್ ಕಡ್ಡಾಯವಾಗಿದೆ. ಬ್ಯಾಂಕಿಗೆ ಆಧಾರ್ ಲಿಂಕ್ ಮತ್ತು ಆಧಾರ್ ತಿದ್ದುಪಡಿಗೆ ನಗರಕ್ಕೆ ಆಗಮಿಸುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ಸ್ಥಾಪಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.












Click it and Unblock the Notifications