ಆ.21ರಿಂದ ಮಂತ್ರಾಲಯ ಗುರುರಾಯರ 350ನೇ ಆರಾಧನಾ ಮಹೋತ್ಸವ
ರಾಯಚೂರು, ಆಗಸ್ಟ್ 19: ಗುರುರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವ ಆಗಸ್ಟ್ 21 ರಿಂದ 27ರವರೆಗೆ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಹೇಳಿದ್ದಾರೆ.
ರಾಘವೇಂದ್ರಸ್ವಾಮಿ ಮಠ ಮಂತ್ರಾಲಯದಲ್ಲಿ ಗುರು ರಾಯರ 350ನೇ ಆರಾಧನೆ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಸುಭುದೇಂದ್ರ ತೀರ್ಥರು ಮಾತನಾಡಿದರು.
"ಗುರು ರಾಯರು ಬೃಂದಾವನ ಸೇರಿ 350 ವರ್ಷವಾದ ಹಿನ್ನೆಲೆಯಲ್ಲಿ ಆಗಸ್ಟ್ 21, 22, 23, 24, 25, 26, 27ರವರೆಗೆ ಏಳು ದಿನ ಸಪ್ತ ರಾತ್ರೋತ್ಸವ ನಡೆಯಲಿದೆ," ಎಂದು ಸುಭುದೇಂದ್ರ ತೀರ್ಥರು ತಿಳಿಸಿದರು.

"ಆಗಸ್ಟ್ 22, 23, 24ರಂದು ರಾಯರ ಆರಾಧನೆ ಮಹೋತ್ಸವ ಹಿನ್ನೆಲೆ ವಿಶೇಷ ಪೂಜೆ ಮಹಾಭಿಷೇಕ ನಡೆಯಲಿದೆ. ಕೊರೊನಾ ಸಂಕಷ್ಟ ಗಮನದಲ್ಲಿಟುಕೊಂಡು ಅತ್ಯಂತ ಸರಳವಾಗಿ ಆರಾಧನಾ ಮಹೋತ್ಸವ ರೂಪಿಸಲಾಗಿದೆ," ಎಂದು ರಾಯರ ಮಠದ ಸುಭುದೇಂದ್ರ ತೀರ್ಥರು ಹೇಳಿದರು.
"ಆರಾಧನಾ ಮಹೋತ್ಸವದಲ್ಲಿ ಕೋವಿಡ್ ಸೋಂಕಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ. ರಾಯರ ದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲಾಗುವುದು. ಸ್ಯಾನಿಟೈಸರ್ ಮಾಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಸ್ಥಾಪಿಸಲಾಗಿದೆ," ಎಂದು ಮಾಹಿತಿ ನೀಡಿದರು.
"ತುಂಗಭದ್ರಾ ನದಿ ತೀರದಲ್ಲಿ ವಸತಿ ನಿಲಯ, ಮಠದ ಆವರಣದಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ. ನದಿ ತೀರದಲ್ಲಿ ಸ್ನಾನಘಟ್ಟಗಳನ್ನು ನಿರ್ಮಿಸಲಾಗಿದೆ. ಅರಾಧನೆಗೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ," ಎಂದು ಸುಭುದೇಂದ್ರ ತೀರ್ಥರು ಹೇಳಿದರು.

ವಯೋ ವೃದ್ಧರಿಗೆ ಶೀಘ್ರ ದರ್ಶನಕ್ಕೆ ವ್ಯವಸ್ಥೆ
"ಜೊತೆಗೆ ಕ್ಷೇತ್ರದಲ್ಲಿ ಆ್ಯಂಬುಲೆನ್ಸ್ ಸೇರಿ ತುರ್ತು ಸೇವೆಯ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರಿಮಳ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿದೆ. ವಯೋ ವೃದ್ಧರಿಗೆ ಶೀಘ್ರ ರಾಯರ ಗದ್ದುಗೆ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ."
"ತಿರುಮಲ ತಿರುಪತಿಯ ಅಧಿಕಾರಿಗಳು ವಸ್ತ್ರವನ್ನು ತರುತ್ತಾರೆ. ಗುರು ರಾಯರಿಗೆ ತಿರುಪತಿ ವಸ್ತ್ರ ಸಮರ್ಪಿಸಲಾಗುತ್ತದೆ. ನಾಡಿನ ಮೂಲೆ ಮೂಲೆಯಿಂದಲೂ ಅಸಂಖ್ಯಾತ ಭಕ್ತರು ಶ್ರಿಮಠಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಹೀಗಾಗಿ ಸರ್ಕಾರದ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತ ಎಲ್ಲ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ," ಎಂದರು.
"ಪಂಡಿತರಿಂದ ಉಪನ್ಯಾಸ, ಸಾಂಸ್ಕೃತಿಕ ನೃತ್ಯ, ವೀಣೆ ನುಡಿಸುವ ಕಾರ್ಯಕ್ರಮ ಇರಲಿದೆ. ಈಗಾಗಲೇ ರಸ್ತೆ ಅಗಲೀಕರಣ ಮಾಡಲಾಗಿದೆ. ವಿದ್ಯುತ್ ದೀಪ ಹಾಕಲಾಗಿದೆ. ನವರತ್ನದ ಕವಚವನ್ನು ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಲಾಗುತ್ತಿದೆ. ಬಂಗಾರದ ಆಭರಣಗಳನ್ನು ಮೂಲ ರಾಮ ದೇವರಿಗೆ ಸಮರ್ಪಣೆ ಮಾಡಲಾಗುತ್ತಿದೆ. ರಂಗ ಸಭಾಂಗಣದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ," ಎಂದು ಸುದ್ದಿಗೋಷ್ಠಿಯಲ್ಲಿ ಸುಭುದೇಂದ್ರ ತೀರ್ಥರು ಹೇಳಿದರು.

"ಭಕ್ತರ ಕಾಣಿಕೆಯಿಂದ 14 ಕೆ.ಜಿ ಚಿನ್ನದ ಪೂಜಾ ಪಾತ್ರೆಗಳ ತಯಾರಿಕೆ ನಡೆದಿದೆ. ಭವ್ಯವಾದ ಮ್ಯೂಸಿಯಂ ಸಿದ್ಧಗೊಳಿಸಿದ್ದು, ಆರಾಧನಾ ಮಹೋತ್ಸವ ಕಾರ್ಯಕ್ರಮದ ವೇಳೆ ಲೋಕಾರ್ಪಣೆ ನಡೆಯಲಿದೆ."
"ಮಂತ್ರಾಲಯದಲ್ಲಿ ಮಿನಿ ಏರ್ಪೋರ್ಟ್ ನಿರ್ಮಾಣಕ್ಕೆ ದಾನಿಗಳು ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಆಗಲಿದೆ. ರಾಯಚೂರಿನಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ರಾಯರ ಹೆಸರನ್ನು ಇಡುವುದು ಸೂಕ್ತ. ವಿಮಾನದಲ್ಲಿ ಬರುವ ಹೆಚ್ಚು ಪ್ರಯಾಣಿಕರು ರಾಯರ ಭಕ್ತರು ಆಗಿರುತ್ತಾರೆ. ಮಂತ್ರಾಲಯಕ್ಕೆ ಬರುವವರೇ ಹೆಚ್ಚು ಇರುತ್ತಾರೆ," ಎಂದು ಸುಬುಧೇಂದ್ರ ತೀರ್ಥ ಸ್ವಾಮಿಗಳು ತಿಳಿಸಿದರು.












Click it and Unblock the Notifications