ರಾಯಚೂರು: ಕಾಂಗ್ರೆಸ್ನ ಹಾಲಿ ಶಾಸಕರಿಗೂ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ
ರಾಯಚೂರು, ನವೆಂಬರ್ 18:- ಗ್ರಾಮೀಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಬಸನಗೌಡ ದದ್ದಲ್ ಟಿಕೆಟ್ ಪೈಪೋಟಿ ಎದುರಿಸುವ ರಾಜಕೀಯ ಸಂದಿಗ್ಧತೆ ಬಂದೊದಗಿದೆ.
ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೋರಿ ಕೆ.ಚಂದ್ರಶೇಖರ ನಾಯಕ ಇಟಪನೂರು ಕೂಡ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಹಾಕಿದ್ದಾರೆ. ಇದರಿಂದ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕರಾಗಿರುವ ಶಾಸಕ ದದ್ದಲ್ ಬಸನಗೌಡ ಸ್ವ ಪಕ್ಷದಿಂದಲೇ ಟಿಕೆಟ್ ಪೈಪೋಟಿ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಮಸ್ಕಿ ಹೊರತುಪಡಿಸಿ ಗ್ರಾಮೀಣ ಮತ್ತು ಲಿಂಗಸೂಗೂರು ಕ್ಷೇತ್ರಗಳಲ್ಲೂ ಹಾಲಿ ಶಾಸಕರು ಟಿಕೆಟ್ಗಾಗಿ ಪೈಪೋಟಿ ನಡೆಸುವಂತಾಗಿದೆ.
ಕೆ.ಚಂದ್ರಶೇಖರ ನಾಯಕ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ಗಾಗಿ ತೀವ್ರ ಪೈಪೋಟಿ ನೀಡಿದ್ದರು. ಆದರೆ ಕೊನೆಗಳಿಯಲ್ಲಿ ಹೈಕಮಾಂಡ್ ಮಧ್ಯ ಪ್ರವೇಶದಿಂದ ದದ್ದಲ್ಗೆ ಟಿಕೆಟ್ ಅಂತಿಮಗೊಂಡಿತ್ತು. ಆದರೆ ಈ ಚುನಾವಣೆ ಆರು ತಿಂಗಳ ಮುಂಚಿತವಾಗಿ ಕ್ಷೇತ್ರದಲ್ಲಿ ಟಿಕೇಟ್ ಪೈಪೋಟಿ ತೀವ್ರಗೊಂಡಿದೆ. ಟಿಕೆಟ್ಗೆ ಅರ್ಜಿ ಹಾಕುವ ಮೂಲಕ ಚಂದ್ರಶೇಖರ ನಾಯಕ ಅವರು ಮುಂದಿನ ಚುನಾವಣೆಯಲ್ಲಿ ತಾವೂ ಆಕಾಂಕ್ಷಿ ಎನ್ನವುದುನ್ನು ಸ್ಪಷ್ಟ ಪಡಿಸಿದ್ದಾರೆ.

ಪಕ್ಷ ಸಂಘಟನೆ ಶುರು ಮಾಡಿರುವ ದದ್ದಲ್
ಆದರೆ ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ದದ್ದಲ್ ವಿಧಾನಸಭಾ ಚುನಾವಣೆಗೆ ಸಿದ್ಧತೆಯನ್ನು ಆರಂಭಿಸುವಂತೆ ರಾಷ್ಟ್ರ ಹಾಗೂ ರಾಜ್ಯ ನಾಯಕರು ಸೂಚಿಸಿದ್ದಾರೆ. ಭೂತ್ ಮಟ್ಟದಲ್ಲೇ ಪಕ್ಷವನ್ನು ಸಂಘಟನೆ ಮಾಡೋಣ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರಾಯಚೂರು ನಗರ ಕ್ಷೇತ್ರಕ್ಕೆ ಪೈಪೋಟಿ
ಇಲ್ಲಿವರೆಗೂ ನಗರ ವಿಧಾನಸಭಾ ಕ್ಷೇತ್ರಕ್ಕೆ ಸರಿಸುಮಾರು 14 ರಿಂದ 16 ಅರ್ಜಿಗಳು ಬಂದಿವೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಪರ್ಧಾಕಾಂಕ್ಷಿಯ ಅರ್ಜಿ ಸಲ್ಲಿಕೆಯಾದ ಕ್ಷೇತ್ರವಾಗಿ ಜಿಲ್ಲಾ ಕೇಂದ್ರದ ನಗರ ವಿಧಾನಸಭಾ ಕ್ಷೇತ್ರ ಗುರುತಿಸಿಕೊಂಡಿದೆ. 14 ರಿಂದ 16 ಅರ್ಜಿಗಳಲ್ಲಿ ಎನ್. ಎಸ್.ಬೋಸರಾಜು, ಸೈಯದ್ ಯಾಸೀನ್, ಬಷೀರುದ್ದೀನ್, ಮುಜೀಬುದ್ದೀನ್, ಅಬ್ದುಲ್ ಕರೀಂ, ಅಸ್ಲಾಂ ಪಾಷಾ, ರಜಾಕ್ ಉಸ್ತಾದ್, ಜಾವೀದ್ ಉಲ್ ಹಕ್, ಸೈಯದ್ ಶಾಲಂ, ಸಾಜೀದ್ ಸಮೀರ್, ಹಟ್ಟಿ ಬಾಬು, ಯಂಕಣ್ಣ ಯಾದವ್, ರವಿ ಬೋಸರಾಜು ಸೇರಿದಂತೆ ಅನೇಕರು ಅರ್ಜಿ ಸಲ್ಲಿಸಿದ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಎನ್.ಎಸ್.ಬೋಸರಾಜು ಅವರು ನಗರ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಸಂಬಂಧಿಸಿ ಚರ್ಚೆ ತೀವ್ರವಾಗಿತ್ತು. ಆದರೆ, ಎಲ್ಲಿಯೂ ಸಹ ಅಧಿಕೃತವಾಗಿ ಸ್ಪರ್ಧೆಯ ಬಗ್ಗೆ ಪ್ರಕಟಣೆ ನೀಡಿರಲಿಲ್ಲ.

ನಗರ ಕ್ಷೇತ್ರದಿಂದ ಅಪ್ಪ-ಮಗನಿಂದ ಅರ್ಜಿ
ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ 2023 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೋರಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಮತ್ತು ಅವರ ಪುತ್ರ ರವಿ ಬೋಸರಾಜು ಅವರು ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಪಕ್ಷ ಅವಕಾಶ ನೀಡಿದರೆ ಚುನಾವಣೆಗೆ ಸ್ಪರ್ಧಿಸುವುದಾಗಿ ಬೋಸರಾಜ್ ಹೇಳಿದ್ದರು. ಕೆಪಿಸಿಸಿಯಿಂದ ಸ್ಪರ್ಧಾಕಾಂಕ್ಷಿಗಳ ಅರ್ಜಿ ಆಹ್ವಾನದ ಹಿನ್ನೆಲೆಯಲ್ಲಿ ಎನ್.ಎಸ್.ಬೋಸರಾಜು ಮತ್ತು ಅವರ ಪುತ್ರ ರವಿ ಬೋಸರಾಜು ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ. ಈ ಕ್ಷೇತ್ರದಿಂದ ಒಬ್ಬರಾದರೂ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಸಮೀಕ್ಷೆ ಆಧರಿಸಿ ಟಿಕೆಟ್ ಘೋಷಣೆ
ಹೈಕಮಾಂಡ್ ಅರ್ಜಿ ಆಹ್ವಾನದ ನಂತರ ಆಯಾ ಕ್ಷೇತ್ರದ ಆಕಾಂಕ್ಷಿಗಳೊಂದಿಗೆ ಚರ್ಚಿಸಿ, ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಿದೆ. ಈ ಮಧ್ಯೆ ಕೆಪಿಸಿಸಿಯಿಂದ ನಡೆದ ಎರಡು ಸಮೀಕ್ಷೆಗಳಲ್ಲಿ ಪಕ್ಷದ ಬಲಾಬಲ ಮತ್ತು ಯಾರು ಅಭ್ಯರ್ಥಿಯಾದರೆ ಪಕ್ಷಕ್ಕೆ ಅನುಕೂಲ ಎನ್ನುವುದನ್ನು ಪರಿಶೀಲಿಸಿ, ಟಿಕೆಟ್ ನಿರ್ಧಾರ ಕೈಗೊಳ್ಳಲಾಗುತ್ತದೆ. ಭಾರತ್ ಜೋಡೋ ಕಾರ್ಯಕ್ರಮದಲ್ಲಿ ನಗರದಲ್ಲಿ ಸುಮಾರು ಲಕ್ಷಾಂತರ ಜನರ ಮೆರವಣಿಗೆ ಮೂಲಕ ದೇಶದಲ್ಲಿಯೇ ದಾಖಲೆ ಬರೆಯಲಾಗಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಮುಂಬರುವ ಚುನಾವಣೆಯಲ್ಲಿ ಯಾರಿಗೆ ಸ್ಪರ್ಧಿಸುವ ಜವಾಬ್ದಾರಿ ನೀಡಲಿದೆ ಎನ್ನುವ ಕುತೂಹಲ ಈಗ ಪಕ್ಷದಲ್ಲಿ ತೀವ್ರಗೊಂಡಿದೆ.












Click it and Unblock the Notifications