ದಾಬೋಲ್ಕರ್ ಹತ್ಯೆ ಪ್ರಕರಣ: ಐವರು ಆರೋಪಿಗಳ ವಿರುದ್ದ ದೋಷಾರೋಪ
ಪುಣೆ, ಸೆಪ್ಟೆಂಬರ್ 15: ಪುಣೆಯಲ್ಲಿ 2013 ರ ಆಗಸ್ಟ್ 20 ರಂದು ನಡೆದ ಪ್ರಗತಿ ಪರ ಚಿಂತಕ ಡಾ. ನರೇಂದ್ರ ದಾಬೋಲ್ಕರ್ರ ಹತ್ಯೆ ಪ್ರಕರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ಬುಧವಾರ ಪುಣೆಯ ವಿಶೇಷ ನ್ಯಾಯಾಲಯವು ಸನಾತನ ಸಂಸ್ಥೆಯ ನಂಟು ಹೊಂದಿರುವ ಐವರು ಆರೋಪಿಗಳ ವಿರುದ್ದ ದೋಷಾರೋಪ ಹೊರಿಸಿದೆ, ಈ ಮೂಲಕ ಆರೋಪಿಗಳ ವಿರುದ್ದ ವಿಚಾರಣೆಗೆ ಆರಂಭವನ್ನು ಸೂಚಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್ ಆರ್ ನವಂದರ್ ಆರೋಪಿಗಳ ಪೈಕಿ ನಾಲ್ವರ ವಿರುದ್ದ ದೋಷಾರೋಪ ಮಾಡಿದ್ದಾರೆ. ಆರೋಪಿಗಳಾದ ವಿರೇಂದ್ರ ಸಿನ್ಹಾ ತಾವ್ಡೆ, ಸಚಿನ್ ಅದೂರೆ, ಶರದ್ ಕಳಸ್ಕರ್ ಹಾಗೂ ವಿಕ್ರಮ್ ಭಾವೆ ವಿರುದ್ದ ಕೊಲೆ, ಕೊಲೆ ಮಾಡುವ ಪಿತೂರಿ ಹಾಗೂ ಯುಎಪಿಎ ಭಯೋತ್ಪಾದಕ ಸೆಕ್ಷನ್ಗಳಡಿ ಹಾಗೂ ಐಪಿಸಿಯ ವಿವಿಧ ಸೆಕ್ಷನ್ಗಳಡಿ ದೋಷಾರೋಪ ಹೊರಿಸಲಾಗಿದೆ. ಕೋರ್ಟ್ ಆರೋಪಿ ಸಂಖ್ಯೆ ನಾಲ್ಕು, ವಕೀಲ ಸಂಜೀವ ಪುನಾಲೇಕರ್ ವಿರುದ್ದ ಪ್ರಕರಣದ ಸಾಕ್ಷ್ಯ ನಾಶ ಮಾಡಿದ ಆರೋಪದಲ್ಲಿ ದೋಷಾರೋಪ ಮಾಡಲಾಗಿದೆ.
ಗೌರಿ ಹತ್ಯೆ ಪ್ರಕರಣ: ಕವಿತಾ ಲಂಕೇಶ್ ಅರ್ಜಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರಿಂ
ಮಹಾರಾಷ್ಟ್ರ ಅಂಧ ಶ್ರದ್ಧಾ ನಿಮೂರ್ಲನಾ ಸಮಿತಿ ಸ್ಥಾಪನೆ ಮಾಡಿದ್ದ ನರೇಂದ್ರ ದಾಬೋಲ್ಕರ್, ಮೌಡ್ಯ ಆಚರಣೆಗಳ ವಿರುದ್ದ ಹೋರಾಟ ನಡೆಸುತ್ತಿದ್ದರು. ಎಂದಿನಂತೆ 2013 ರ ಆಗಸ್ಟ್ 20 ರಂದು ಪುಣೆಯಲ್ಲಿ ಎಂದಿನಂತೆ ಬೆಳಗಿನ ವಾಕಿಂಗ್ ಮಾಡುತ್ತಿದ್ದ ಡಾ.ನರೇಂದ್ರ ದಾಬೋಲ್ಕರ್ರನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ. ಈ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ.
ಈ ಪ್ರರಕಣದ ವಿಚಾರಣೆಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್ ಆರ್ ನವಂದರ್ ನಡೆಸಿದ್ದಾರೆ. ಆರೋಪಿಗಳ ಪೈಕಿ ವಿರೇಂದ್ರ ಸಿನ್ಹಾ ತಾವ್ಡೆ, ಸಚಿನ್ ಅಂದೂರೆ ಹಾಗೂ ಶರದ್ ಕಳಸ್ಕರ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗ ಹಾಜರಾಗಿದ್ದಾರೆ. ಇನ್ನು ಆರೋಪಿಗಳಾದ ಸಂಜೀವ ಪುನಾಲೇಕರ್, ವಿಕ್ರಮ್ ಭಾವೆ ನ್ಯಾಯಾಲಯಕ್ಕೆ ಹಾಜರಾಗಿ, ವಿಚಾರಣೆ ಎದುರಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ, "ನಮ್ಮ ವಕೀಲರ ಜೊತೆ ಚರ್ಚೆ ನಡೆಸಿದ ಪ್ರತಿಕ್ರಿಯೆ ಸಲ್ಲಿಸಲು ಸಮಯ ನೀಡಬೇಕು," ಎಂದು ಆರೋಪಿಗಳು ಮನವಿ ಮಾಡಿದ್ದು, ಈ ಮನವಿಯನ್ನು ನ್ಯಾಯಾಧೀಶ ಎಸ್ ಆರ್ ನವಂದರ್ ವಜಾ ಮಾಡಿದ್ದಾರೆ. "ಆರೋಪಿಗಳ ವಿರುದ್ದ ದೋಷಾರೋಪ ಹೊರಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯು ಸೆಪ್ಟೆಂಬರ್ 30 ರಂದು ನಡೆಯಲಿದೆ," ಎಂದು ಸಿಬಿಐ ಪರ ವಕೀಲ ಪ್ರಕಾಶ್ ಸೂರ್ಯವಂಶಿ ತಿಳಿಸಿದ್ದಾರೆ.
ಸೆಪ್ಟೆಂಬರ್ 5 ಅನ್ನು 'ಗೌರಿ ಲಂಕೇಶ್ ದಿನ' ಎಂದು ಘೋಷಿಸಿದ ಕೆನಡಾದ ಬರ್ನಾಬಿ ನಗರ
ಇನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) 2014 ರಲ್ಲಿ ಈ ಪ್ರಕರಣದ ವಿಚಾರಣೆಯನ್ನು ಪೊಲೀಸರಿಂದ ತನ್ನ ಹಿಡಿತಕ್ಕೆ ಪಡೆದುಕೊಂಡಿತ್ತು. ಈವರೆಗೆ ಐವರ ಮೇಲೆ ಮಾತ್ರ ಚಾರ್ಜ್ಶೀಟ್ ಅನ್ನು ಮಾಡಿದೆ. ಇನ್ನು ಕೋರ್ಟ್ ಈ ಪ್ರಕರಣದಲ್ಲಿ ನೀವು ತಪ್ಪಿತಸ್ಥರೇ ಎಂದು ಆರೋಪಿಗಳನ್ನು ಪ್ರಶ್ನಿಸಿದ್ದು, ಈ ಸಂದರ್ಭದಲ್ಲಿ ಆರೋಪಿಗಳು ನಾವು ತಪ್ಪಿತಸ್ಥರಲ್ಲ ಎಂದು ಹೇಳಿದ್ದಾರೆ.
2014 ರಲ್ಲಿ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಬಿಐ, 2016 ರಲ್ಲಿ ಡಾ. ವಿರೇಂದ್ರ ಸಿನ್ಹಾ ವಿರುದ್ದ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ. ಹಾಗೆಯೇ ಸಿಬಿಐ ಈ ದಾಬೋಲ್ಕರ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ವಿರೇಂದ್ರ ಸಿನ್ಹಾ ಎಂದು ಹೇಳಿದೆ. 2018 ರ ಆಗಸ್ಟ್ ಸನಾತನ ಸಂಸ್ಥೆಯ ಮತ್ತಿಬ್ಬರು ಸದಸ್ಯರಾದ ಸಚಿನ್ ಅದೂರೆ ಮತ್ತು ಶರದ್ ಕಳಸ್ಕರ್ ರನ್ನು ಸಿಬಿಐ ಬಂಧನ ಮಾಡಿದೆ. ಹಾಗೆಯೇ 2019 ರ ಫೆಬ್ರವರಿ ತಿಂಗಳಿನಲ್ಲಿ ಇವರಿಬ್ಬರ ವಿರುದ್ದ ಚಾರ್ಜ್ ಶೀಟ್ ದಾಖಲು ಮಾಡಿದೆ. ಬಳಿಕ ಸಿಬಿಐ ಮುಂಬೈ ಮೂಲದ ವಕೀಲ ಸಂಜೀವ ಪುನಾಲೇಕರ್ ಹಾಗೂ ಆತನ ಸಹಾಯಕ ವಿಕ್ರಮ್ ಭಾವೆಯನ್ನು 2019 ರ ಮೇ ತಿಂಗಳಿನಲ್ಲಿ ಬಂಧನ ಮಾಡಿದೆ. ಇಬ್ಬರು ಕೂಡಾ ಸನಾತನ ಸಂಸ್ಥಾಗೆ ಸೇರಿದವರು ಆಗಿದ್ದಾರೆ. 2019 ರ ನವೆಂಬರ್ ತಿಂಗಳಿನಲ್ಲಿ ಇವರ ವಿರುದ್ದ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ. ಸಿಬಿಐ ಸಂಜೀವ ಪುನಾಲೇಕರ್ ಸಾಕ್ಷ್ಯ ನಾಶ ಮಾಡುವ ಕಾರ್ಯ ಮಾಡಿದ್ದಾರೆ ಎಂದು ಆರೋಪ ಮಾಡಿದೆ. ತಾವ್ಡೆ, ಅಂದೂರೆ, ಕಳಸ್ಕರ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿ ಇದ್ದು, ಪುನಾಲೇಕರ್ ಹಾಗೂ ಭಾವೆ ಜಾಮೀನಿನ ಮೇಲೆ ಹೊರಗೆ ಇದ್ದಾರೆ.
(ಒನ್ ಇಂಡಿಯಾ ಸುದ್ದಿ)