ಇಡಿ ಕಾರ್ಯಚಟುವಟಿಕೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ; ನಿರ್ಮಲಾ ಸೀತಾರಾಮನ್
ಪುಣೆ, ಸೆ. 23: ಜಾರಿ ನಿರ್ದೇಶನಾಲಯದ (ಇಡಿ) ಕಾರ್ಯಚಟುವಟಿಕೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರೋಧಿಗಳ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಯನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬ ಪ್ರತಿಪಕ್ಷಗಳ ಟೀಕೆಗಳನ್ನು ತಳ್ಳಿಹಾಕಿದ್ದಾರೆ.
ಹಿಂದಿ ಮಾತನಾಡುವಾಗ ನನಗೆ ನಡುಕ ಉಂಟಾಗುತ್ತೆ: ನಿರ್ಮಲ ಸೀತಾರಾಮನ್
ಪುಣೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಹಣ ವರ್ಗಾವಣೆಯ ಶಂಕೆ ಇದ್ದಾಗ ಮಾತ್ರ ಜಾರಿ ನಿರ್ದೇಶನಾಲ ತನ್ನ ಕೆಲಸ ಮಾಡುತ್ತದೆ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕರ ವಿರುದ್ಧ ಜಾರಿ ನಿರ್ದೇಶನಾಲದ ಕ್ರಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕಾನೂನು ಜಾರಿ ಸಂಸ್ಥೆಯು ತನ್ನ ಜವಾಬ್ದಾರಿಗಳನ್ನು ತಿಳಿದಿದೆ. ಅದರ ಕೆಲಸದಲ್ಲಿ ಕೇಂದ್ರ ಸರ್ಕಾರವು ತನ್ನ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
"ಇಡಿ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಘಟನೆ ಸಂಭವಿಸಿದಾಗ ಅದು ಸ್ಥಳಕ್ಕೆ ತಲುಪುವುದಿಲ್ಲ. ಒಂದು ಪ್ರಕರಣದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಉಲ್ಲಂಘನೆಯಾಗಿದೆ ಎಂದು ಖಚಿತವಾದ ನಂತರವೇ ಅದು ಕಣಕ್ಕೆ ಇಳಿಯುತ್ತದೆ. ಇಡಿ ಎಂದಿಗೂ ನೇರವಾಗಿ ದಾಳಿಗೆ ಬರುವುದಿಲ್ಲ. ಮನಿ ಲಾಂಡರಿಂಗ್ ನಡೆದಿದೆ ಎಂಬ ಅನುಮಾನ ಬಂದಾಗ ಮಾತ್ರ ಪ್ರಕರಣವನ್ನು ಅದು ತನಿಖೆಗೆ ತೆಗೆದುಕೊಳ್ಳುತ್ತದೆ" ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ಇಡಿ, ಐಟಿ ಮತ್ತು ಸಿಬಿಐ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಜೆಪಿಯ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆಗಾಗ್ಗೆ ಆರೋಪಿಸುತ್ತಿವೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಪಕ್ಷಗಳ ನಾಯಕರ ಮೇಲೆ ದಾಳಿ ನಡೆಸಿದಾಗೆಲ್ಲ ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಲಾಗಿದೆ.