ಭೀಮ ಕೋರೆಗಾಂವ್ ಹಿಂಸಾಚಾರ: ಮೇವಾನಿ, ಉಮರ್ ಖಾಲಿದ್ ವಿರುದ್ಧ ದೂರು
ಮುಂಬೈ, ಜನವರಿ 2: ಮಹಾರಾಷ್ಟ್ರದಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಸಿರುವ ದಲಿತರು ಮತ್ತು ಮರಾಠರ ನಡುವಿನ ಗಲಭೆಗೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಜೆ.ಎನ್.ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಕಾರಣ ಎಂದು ಆರೋಪಿಸಿ ದೂರು ನೀಡಲಾಗಿದೆ.
ಮೇವಾನಿ ಹಾಗೂ ಖಾಲಿದ್ ವಿರುದ್ಧ ಪುಣೆಯ ಡೆಕ್ಕನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ.
ಡಿಸೆಂಬರ್ 30ರಂದು ಭೀಮ ಕೋರೆಗಾಂವ್ ಕದನದ 200ನೇ ವರ್ಷಾಚರಣೆಯಲ್ಲಿ ಉಮರ್ ಖಾಲಿದ್ ಮತ್ತು ಜಿಗ್ನೇಶ್ ಮೇವಾನಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಇದರಿಂದ ಗಲಭೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪುಣೆಯಲ್ಲಿ ಹುಟ್ಟಿಕೊಂಡ ಕಲಹ ರಾಜ್ಯದಾದ್ಯಂತ ವಿಸ್ತರಣೆಯಾಗಿದ್ದು ಮುಂಬೈನ ಕೆಲವು ಪ್ರದೇಶಗಳು ಸೇರಿ ಹಲವು ಕಡೆಗಳಲ್ಲಿ ಇಂದು ಅಘೋಷಿತ ಬಂದ್ ಜಾರಿಯಲ್ಲಿತ್ತು. ಜತೆಗೆ ಹಲವು ಅಹಿತಕರ ಘಟನೆಗಳಿಗೆ ರಾಜ್ಯ ಸಾಕ್ಷಿಯಾಗಿದೆ.
ಭೀಮ ಕೋರೆಗಾಂವ್ ಹಿಂಸಾಚಾರ: ದಲಿತ ಸಂಘಟನೆಗಳಿಂದ ಬುಧವಾರ ಮಹಾರಾಷ್ಟ್ರ ಬಂದ್
ಇನ್ನು ನಾಳೆ ದಲಿತರ ಮೇಲಿನ ದೌರ್ಜನ್ಯ ಹಾಗೂ ಪುಣೆಯಲ್ಲಿ ಸಾವನ್ನಪ್ಪಿದ ದಲಿತ ವ್ಯಕ್ತಿಯ ಹತ್ಯೆ ಖಂಡಿಸಿ ಮಹಾರಾಷ್ಟ್ರ ರಾಜ್ಯ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿವೆ. ಮುಂಬೈನಲ್ಲಿ ನಡೆಯಲಿರುವ ಹೋರಾಟದಲ್ಲಿ ಜಿಗ್ನೇಶ್ ಮೇವಾನಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಭೀಮಾ ಕೊರೆಗಾಂವ್ ದಲಿತರ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ