ಸಂಸ್ಕೃತ ಅಧಿಕೃತ ಭಾಷೆ ಎಂದು ಪ್ರಸ್ತಾವನೆ ಸಲ್ಲಿಸಿದ್ದ ಅಂಬೇಡ್ಕರ್: ಸಿಜೆಐ ಬೋಬ್ಡೆ
ನಾಗಪುರ, ಏಪ್ರಿಲ್ 15: ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಸ್ತಾವನೆಯನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಿದ್ಧಪಡಿಸಿದ್ದರು. ಆದರೆ ಅದು ಮುಂದುವರಿಯಲಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿನ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಬುಧವಾರ ಶೈಕ್ಷಣಿಕ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
'ಮರಾಠಿ ಅಥವಾ ಇಂಗ್ಲಿಷ್ ಇವುಗಳಲ್ಲಿ ನಾನು ಯಾವ ಭಾಷೆ ಮಾತನಾಡಬೇಕು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಈಗ ಗೊಂದಲವನ್ನು ನಮ್ಮ ದೇಶದಲ್ಲಿ ಸುದೀರ್ಘ ಸಮಯದಿಂದ ಕಾಣುತ್ತಿದ್ದೇವೆ. ನ್ಯಾಯಾಲಯದ ಕಲಾಪಗಳಲ್ಲಿ ಯಾವ ಭಾಷೆಯನ್ನು ಬಳಸಬೇಕು ಎಂಬ ಬಗ್ಗೆ ಆಗಾಗ ಪ್ರಶ್ನೆಗಳು ಏಳುತ್ತಿರುವುದನ್ನು ನಾನು ನೋಡಿದ್ದೇನೆ. ಇಂಗ್ಲಿಷ್ ಮತ್ತು ಹಿಂದಿಯನ್ನು ಅಧಿಕೃತ ಭಾಷೆಗಳನ್ನಾಗಿ ಹೊಂದಿರುವ ಹೈಕೋರ್ಟ್ಗಳಿವೆ. ಕೆಲವರು ತಮಿಳು ಬಯಸುತ್ತಾರೆ. ಇನ್ನು ಕೆಲವರು ತೆಲುಗು ಬಯಸುತ್ತಾರೆ' ಎಂದಿದ್ದಾರೆ.

'ಈ ವಿಚಾರದ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ವಿನಮ್ರದಿಂದ ಹೇಳುತ್ತೇನೆ. ಡಾಕ್ಟರ್ ಅಂಬೇಡ್ಕರ್ ಅವರು ಇದರ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿದ್ದರು ಮತ್ತು ಪ್ರಸ್ತಾವವೊಂದನ್ನು ಕೂಡ ಸಿದ್ಧಪಡಿಸಿದ್ದರು. ಆ ಪ್ರಸ್ತಾವವನ್ನು ಚರ್ಚೆಗೆ ಇರಿಸಿದ್ದರೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಅದಕ್ಕೆ ಕೆಲವು ಮುಲ್ಲಾಗಳು, ಪಂಡಿತರು, ಪಾದ್ರಿಗಳು ಮತ್ತು ಸ್ವತಃ ಡಾ. ಅಂಬೇಡ್ಕರ್ ಅವರ ಸಹಿ ಇತ್ತು. ಈ ಪ್ರಸ್ತಾವ ಏನೆಂದರೆ ಭಾರತ ಒಕ್ಕೂಟದ ಅಧಿಕೃತ ಭಾಷೆ ಎಂದು ಸಂಸ್ಕೃತವನ್ನು ಘೋಷಿಸುವುದಾಗಿತ್ತು' ಎಂದು ಬೋಬ್ಡೆ ಹೇಳಿದ್ದಾರೆ.
'ಉತ್ತರ ಭಾರತದಲ್ಲಿ ತಮಿಳನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆಯೇ ಹಿಂದಿಯನ್ನು ದಕ್ಷಿಣ ಭಾರತದಲ್ಲಿ ಒಪ್ಪಿಕೊಳ್ಳುವುದಿಲ್ಲ. ಆದರೆ ಸಂಸ್ಕೃತವನ್ನು ಉತ್ತರ ಭಾರತ ಅಥವಾ ದಕ್ಷಿಣ ಭಾರತ- ಎರಡೂ ಕಡೆಗಳಲ್ಲಿ ವಿರೋಧಿಸುವುದಿಲ್ಲ ಎನ್ನುವುದು ಅಂಬೇಡ್ಕರ್ ಅಭಿಪ್ರಾಯವಾಗಿತ್ತು. ಹೀಗಾಗಿ ಅವರು ಈ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ' ಎಂದಿದ್ದಾರೆ.
'ಅಂಬೇಡ್ಕರ್ ಅವರು ಕಾನೂನಿನಲ್ಲಿ ಮಾತ್ರ ಪರಿಣತರಾಗಿರಲಿಲ್ಲ. ಜತೆಗೆ ಸಾಮಾಜಿಕ ಮತ್ತು ರಾಜಕೀಯವಾಗಿ ಕೂಡ ಅವರಿಗೆ ಅಪಾರ ಜ್ಞಾನವಿತ್ತು. ಜನರಿಗೆ ಏನು ಬೇಕು, ಬಡವರು ಏನನ್ನು ಬಯಸಿದ್ದಾರೆ ಎನ್ನುವುದು ಅವರಿಗೆ ತಿಳಿದಿತ್ತು. ಆ ಕಾರಣಕ್ಕಾಗಿಯೇ ಅವರು ಈ ಪ್ರಸ್ತಾವ ಇರಿಸಿದ್ದರು ಎನಿಸುತ್ತದೆ. ಆದರೆ ಅಂತಿಮವಾಗಿ ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯನ್ನಾಗಿಸಲಾಯಿತು' ಎಂದು ಅವರು ರಾಷ್ಟ್ರೀಯ ಕಾನೂನು ವಿವಿಯಲ್ಲಿ ಇಂಗ್ಲಿಷ್ನಲ್ಲಿಯೇ ಮಾತನಾಡಲು ಅನುಮತಿ ಕೋರಿದರು.












Click it and Unblock the Notifications