ಬಿಹಾರ ಜನಾಭಿಪ್ರಾಯದಲ್ಲಿ ಬದಲಾವಣೆಯಿಲ್ಲ ಎಂದ ಸಿಎಂ ನಿತೀಶ್ ಕುಮಾರ್
ಪಾಟ್ನಾ, ನವೆಂಬರ್,02: ಬಿಹಾರ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯದ ಮತದಾರರ ಪ್ರತಿಕ್ರಿಯೆಯು ಮೊದಲಿನಂತಿದೆ. ಸರ್ಕಾರದ ಬಗ್ಗೆ ಅವರಲ್ಲಿ ಯಾವುದೇ ರೀತಿ ಅಸಮಾಧಾನವಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಜೆಡಿಯು ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಮಂಗಳವಾರ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಇದರ ಹೊಸ್ತಿಲಿನಲ್ಲೇ ಆಜ್ ತಕ್ ಮತ್ತು ಇಂಡಿಯಾ ಟುಡೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸಿಎಂ ನಿತೀಶ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಿಹಾರದ 2ನೇ ಹಂತದ ಚುನಾವಣೆ ಮೇಲೆ ಕಣ್ಣು: ಯಾರು ಮುಂದಿನ ಸಿಎಂ?
ಬಿಹಾರ ಸರ್ಕಾರ ಮತ್ತು ಜೆಡಿಯು ಪಕ್ಷದ ಕುರಿತಾಗಿ ಜನರ ಅಭಿಪ್ರಾಯದಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬಂದಿಲ್ಲ ಎಂದು ನನಗೆ ಅನ್ನಿಸುತ್ತದೆ. ವಿರೋಧ ಪಕ್ಷಗಳ ಪ್ರಚಾರವು ಮತದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ನಾವು ಪ್ರಚಾರ ಮಾಡುವುದಕ್ಕಾಗಿ ಇರುವುದಲ್ಲ:
"ಬಿಹಾರದಲ್ಲಿ ಸಾರ್ವಜನಿಕರ ಸೇವಕನಾಗಿ ಕೆಲಸ ಮಾಡುತ್ತಿರುವ ನಾವು ಯಾವುದೇ ಸಂದರ್ಭದಲ್ಲಿ ಅಂಕಿ-ಸಂಖ್ಯೆಗಳ ಮೇಲೆ ಹೆಚ್ಚು ಲಕ್ಷ್ಯ ವಹಿಸುವುದಿಲ್ಲ. ಜನರು ನಮ್ಮನ್ನು ನೋಡುತ್ತಾರೆ, ನಮ್ಮ ಮಾತುಗಳನ್ನು ಕೇಳಿ ಚಪ್ಪಾಳೆ ತಟ್ಟುತ್ತಾರೆ. ಅದರಲ್ಲಿ ನನಗೆ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ. ನಾವು ಇಲ್ಲಿರುವುದು ಕೆಲಸ ಮಾಡುವುದಕ್ಕಾಗಿಯೇ ಹೊರತೂ, ಪ್ರಚಾರ ಮಾಡುವುದಕ್ಕಾಗಿ ಅಲ್ಲ" ಎಂದು ಸಿಎಂ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಜನರ ದಾರಿ ತಪ್ಪಿಸುವ ಯತ್ನ:
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣವನ್ನು ತಗ್ಗಿಸುವದಕ್ಕೆ ಎಲ್ಲ ರೀತಿಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಬಿಹಾರದಲ್ಲಿ ಕೊವಿಡ್-19 ಸೋಂಕಿನ ತಪಾಸಣೆ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ಇಂಥ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅದನ್ನೆಲ್ಲ ಬದಿಗೆ ಸರಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿವೆ ಎಂದು ನಿತೀಶ್ ಕುಮಾರ್ ದೂಷಿಸಿದ್ದಾರೆ.