ಒಂದೇ ದಿನದಲ್ಲಿ ಬದಲಾದ ಬಿಹಾರ ರಾಜಕೀಯ: ಬಿಜೆಪಿಗೆ ಬಿಗ್ ಶಾಕ್?
ಪಾಟ್ನಾ, ಆಗಸ್ಟ್ 8: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ವಿರೋಧ ಪಕ್ಷದವರು ಆಗಾಗ ಒಂದು ಮಾತನ್ನು ಹೇಳುವುದುಂಟು. ಅವರು ಅಧಿಕಾರಕ್ಕಾಗಿ ಪಕ್ಷ, ಸಿದ್ದಾಂತ ಎಲ್ಲವನ್ನೂ ಬದಿಗೊತ್ತುತ್ತಾರೆ ಎಂದು. ಅದೇ ರೀತಿಯಲ್ಲಿ ಸಾಗುತ್ತಿದೆ, ಬಿಹಾರದ ರಾಜಕೀಯ.
ಬಿಜೆಪಿ-ಜೆಡಿಯು ನಡುವೆ ಮನಸ್ತಾಪಗಳ ಸುದ್ದಿ ಹೊಸದೇನಲ್ಲ, ಆದರೆ ಕೇವಲ ಒಂದೆರಡು ದಿನದ ಹಿಂದೆ ಶುರುವಾದ ರಾಜಕೀಯ ಮೇಲಾಟದಿಂದಾಗಿ ಬಿಜೆಪಿ-ಜೆಡಿಯು ಸರಕಾರ ಪತನದ ಅಂಚಿಗೆ ಬಂದು ಕೂತಿದೆ.
ಬಿಜೆಪಿ ಜೊತೆ ಮುನಿಸು: ಮಂಗಳವಾರ ಪಕ್ಷದ ಸಭೆ ಕರೆದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಮೊನ್ನೆಮೊನ್ನೆ ರಾಷ್ಟ್ರಪತಿ ಚುನಾವಣೆಯವರೆಗೂ ಜೊತೆಯಾಗಿದ್ದ ನಿತೀಶ್ ಕುಮಾರ್, ಆ ಕಾಲದಿಂದಲೂ ತಮ್ಮ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರೀಯ ಜನತಾದಳದ (RJD) ಜೊತೆ ಸಖ್ಯ ಬೆಳೆಸುವ ಮಾತುಗಳು ಪಾಟ್ನಾ ಅಂಗಳದಿಂದ ಬಲವಾಗಿ ಕೇಳಿ ಬರುತ್ತಿದೆ.
ರಾಷ್ಟ್ರೀಯ ಜನತಾದಳ ಮತ್ತು ಜೆಡಿಯು ತಮ್ಮ ತಮ್ಮ ಪಕ್ಷದ ಶಾಸಕಾಂಗ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಮಹತ್ವದ ನಿರ್ಣಯ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಹಿಂದೂಸ್ಥಾನ್ ಆವಾಮಿ ಮೋರ್ಚಾ ಕೂಡಾ ಸಭೆಯನ್ನು ಕರೆದಿದೆ.
ಬಿಜೆಪಿ, ಜೆಡಿಯು ಮೈತ್ರಿಯಲ್ಲಿ ಬಿರುಕು; ಮೋದಿಗೆ ಸ್ವಾಗತವಿಲ್ಲ!
ಬಿಜೆಪಿ-ಜೆಡಿಯು ನಡುವೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಮುಸುಕಿನ ಗುದ್ದಾಟ
ಕಳೆದ ಎರಡು ತಿಂಗಳಿನಿಂದ ಬಿಜೆಪಿ-ಜೆಡಿಯು ನಡುವೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು, ಅದಕ್ಕೆ ಈಗ ಇನ್ನೊಂದೆರಡು ದಿನಗಳಲ್ಲಿ ಒಂದು ತಾರ್ಕಿಕ ಅಂತ್ಯ ಬೀಳುವ ಸಾಧ್ಯತೆಯಿದೆ. ಈ ಹಿಂದೆ ಕೂಡಾ ಇಂತಹ ಸಮಸ್ಯೆ ಎದುರಾದಾಗ ಅದಕ್ಕೆ ಬಿಜೆಪಿ ವರಿಷ್ಠರು ತೇಪೆ ಹಚ್ಚಿ ಸರಕಾರ ಪತನಗೊಳ್ಳದಂತೆ ಎಚ್ಚರ ವಹಿಸಿದ್ದರು. ಒಂದು ವೇಳೆ ನಿತೀಶ್ ಕುಮಾರ್ ಪಕ್ಷ ಬಿಜೆಪಿಯ ಸಂಘ ತೊರೆದರೆ, ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ಜೊತೆ ಹೋಗುವುದು ನಿಕ್ಕಿ ಎಂದು ಹೇಳಲಾಗುತ್ತಿದೆ.
ನೀತಿ ಆಯೋಗದ ಸಭೆಯಲ್ಲಿ ನಿತೀಶ್ ಕುಮಾರ್ ಗೈರು
ಭಾನುವಾರ (ಆ 7) ನಡೆದ ನೀತಿ ಆಯೋಗದ ಸಭೆಗೆ ನಿತೀಶ್ ಕುಮಾರ್ ಗೈರಾಗಿದ್ದರು, ಬಿಜೆಪಿ ಜೊತೆಗಿನ ಮುನಿಸೇ ಇದಕ್ಕೆ ಕಾರಣ. ಇದರ ಬೆನ್ನಲ್ಲೇ ನಿತೀಶ್ ಕುಮಾರ್ ಅವರು ಸೋನಿಯಾ ಗಾಂಧಿಗೆ ಕರೆ ಮಾಡಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಜೆಡಿಯು, ಕೇಂದ್ರ ಸಂಪುಟ ವಿಸ್ತರಣೆ ನಡೆದರೆ ನಮ್ಮ ಪಕ್ಷ ಅದರಲ್ಲಿ ಪಾಲುದಾರವಾಗುವುದಿಲ್ಲ ಎನ್ನುವ ಹೇಳಿಕೆ ಪಕ್ಷದ ಕಡೆಯಿಂದ ಬಂದಿದೆ. ಆ ಮೂಲಕ, ಸ್ಪಷ್ಟವಾಗಿ ಜೆಡಿಯು ಪಕ್ಷ ಎನ್ಡಿಎ ಮೈತ್ರಿಕೂಟದಿಂದ ಹೊರಬರುವ ಸೂಚನೆಯನ್ನು ನೀಡಿದೆ.
ಬಿಜೆಪಿ ಕೊಟ್ಟ ಮಾತಿನಂತೆ ನಿತೀಶ್ ಕುಮಾರ್ ಅವರೇ ಸಿಎಂ
ಜಿದ್ದಾಜಿದ್ದಿನಿಂದ ಕೂಡಿದ್ದ 2020ರ ಚುನಾವಣೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಜಸ್ಟ್ ಮಿಸ್ ಆಗಿತ್ತು. ಬಿಜೆಪಿ-ಜೆಡಿಯು ನೇತೃತ್ವದ ಮೈತ್ರಿಕೂಟ 125 ಸ್ಥಾನವನ್ನು ಗೆದ್ದಿತ್ತು. ಅದರಲ್ಲಿ ಬಿಜೆಪಿ ಪಾಲು 74, ನಿತೀಶ್ ಪಕ್ಷದ ಪಾಲು 43. ಇನ್ನೊಂದು ಕಡೆ ಆರ್ಜೆಡಿ-ಕಾಂಗ್ರೆಸ್ ಮೈತ್ರಿಕೂಟ 110 ಸ್ಥಾನದಲ್ಲಿ ಗೆಲುವನ್ನು ಸಾಧಿಸಿತ್ತು. ಅದರಲ್ಲಿ ಆರ್ಜೆಡಿ ಪಾಲು 75, ಕಾಂಗ್ರೆಸ್ ಪಕ್ಷ 19 ಸ್ಥಾನದಲ್ಲಿ ಗೆಲುವನ್ನು ಸಾಧಿಸಿತ್ತು. ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನು ಗೆದ್ದಿದ್ದರೂ, ಚುನಾವಣೆಯ ವೇಳೆ ಬಿಜೆಪಿ ಕೊಟ್ಟ ಮಾತಿನಂತೆ ನಿತೀಶ್ ಕುಮಾರ್ ಅವರೇ ಸಿಎಂ ಆಗಿದ್ದರು.
ಒಂದೇ ದಿನದಲ್ಲಿ ಬದಲಾದ ಬಿಹಾರ ರಾಜಕೀಯ: ಬಿಜೆಪಿಗೆ ಬಿಗ್ ಶಾಕ್
ಬಿಹಾರ ವಿಧಾನಸಭೆಯ ಸ್ಪೀಕರ್ ವಜಾ, ಕೇಂದ್ರ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯತೆ ನೀಡದೇ ಇರುವುದು, ಒನ್ ನೇಶನ್ ಒನ್ ಒನ್ ಇಲೆಕ್ಷನ್ ಸೇರಿದಂತೆ ಹಲವು ವಿಚಾರದಲ್ಲಿ ಬಿಜೆಪಿ-ಜೆಡಿಯು ನಡುವೆ ಹೊಂದಾಣಿಕೆಯಿಲ್ಲ. ಕಳೆದ ಬಾರಿ ಆರ್ಜೆಡಿ ಜೊತೆ ಹೊಂದಾಣಿಕೆ ಮಾಡಿಕೊಂಡು ನಿತೀಶ್ ಗದ್ದುಗೇರಿದ್ದರು. ಈಗ, ಮತೆ ಜೆಡಿಯು-ಆರ್ಜೆಡಿ ನಡುವೆ ಮೈತ್ರಿಯ ಮಾತು ಕೇಳಿ ಬರುತ್ತಿದೆ.
Recommended Video