ಕೆ. ಚಂದ್ರಶೇಖರ್ ರಾವ್-ನಿತೀಶ್ ಕುಮಾರ್ ಭೇಟಿ : ತೃತೀಯ ರಂಗ ರಚನೆಯ ಬಗ್ಗೆ ಚರ್ಚೆ?
ನವದೆಹಲಿ, ಆಗಸ್ಟ್ 31: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪಾಟ್ನಾದಲ್ಲಿ ಭೇಟಿಯಾದರು. ಭಾರತೀಯ ಜನತಾ ಪಕ್ಷದ ವಿರುದ್ಧ ಸಮಾನ ಮನಸ್ಕ ಪಕ್ಷಗಳ ಮೈತ್ರಿಯನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕೆಸಿಆರ್ ದೇಶಾದ್ಯಂತ ವಿಪಕ್ಷಗಳ ನಾಯಕರನ್ನು ಭೇಟಿಯಾಗುತ್ತಿದ್ದಾರೆ.
ಉಭಯ ನಾಯಕರು ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆ. ಚಂದ್ರಶೇಖರ್ ರಾವ್, ಫೆಡೋರಾ ಟೋಪಿಯನ್ನು ಧರಿಸಿದ್ದರು. ಉಭಯ ನಾಯಕರು ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ.
ಇಬ್ಬರು ನಾಯಕರ ಭೇಟಿಯ ಬಗ್ಗೆ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ವ್ಯಂಗ್ಯವಾಡಿದ್ದಾರೆ. ಅವರ ಭೇಟಿಯು "ಹಗಲುಗನಸುಗಳ ಕೂಟ" ಎಂದು ಹೇಳಿದ್ದಾರೆ. ಬಿಹಾರದ ಜೆಡಿ(ಯು)-ಬಿಜೆಪಿ ಸರ್ಕಾರದಲ್ಲಿ ದಶಕಕ್ಕೂ ಹೆಚ್ಚು ಕಾಲ ಉಪಮುಖ್ಯಮಂತ್ರಿಯಾಗಿದ್ದ ಸುಶೀಲ್ ಕುಮಾರ್ ಮೋದಿ, ಇದು ಇಬ್ಬರು ನಾಯಕರ ಸಭೆಯ ಬಗ್ಗೆ ಟೀಕೆ ಮಾಡಿದರು. ಆಯಾ ರಾಜ್ಯಗಳಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡು ದೇಶದ ಪ್ರಧಾನಮಂತ್ರಿಯಾಗಲು ಬಯಸುತ್ತಿದ್ದಾರೆ, ಎಂದು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಲ್ಲದ ಇಬ್ಬರು ಹಗಲುಗನಸುಗಳ ಸಭೆ ಇದಾಗಿದೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಸುದ್ದಿಗಾರರಿಗೆ ತಿಳಿಸಿದರು. ಇಬ್ಬರು ನಾಯಕರ ಸಭೆಯನ್ನು "ಪ್ರತಿಪಕ್ಷಗಳ ಒಗ್ಗಟ್ಟಿನ ಇತ್ತೀಚಿನ ಹಾಸ್ಯ ಕಾರ್ಯಕ್ರಮ" ಎಂದು ಬಣ್ಣಿಸಿದ್ದಾರೆ.

ಮಹತ್ವ ಪಡೆದುಕೊಂಡ ಇಬ್ಬರು ನಾಯಕರ ಭೇಟಿ
ನಿತೀಶ್ ಕುಮಾರ್ ಆಡಳಿತ ಪಕ್ಷ ಬಿಜೆಪಿಯನ್ನು ತೊರೆದು ರಾಷ್ಟ್ರೀಯ ಜನತಾ ದಳದೊಂದಿಗೆ ಸೇರಿಕೊಂಡು ಬಿಹಾರದಲ್ಲಿ ಸರ್ಕಾರ ರಚನೆ ಮಾಡಿದ ಬೆನ್ನಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಭೇಟಿ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಕೆಸಿಆರ್ ಈ ಹಿಂದೆ ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಇಬ್ಬರನ್ನೂ ಭೇಟಿ ಮಾಡಲು ಯೋಜಿಸಿದ್ದರು. ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿ ದೇಶದಲ್ಲಿ ಇತರೆ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಮೋದಿಯನ್ನು ಗೋಲ್ಮಾಲ್ ಪಿಎಂ ಎಂದ ಕೆಸಿಆರ್
ಎರಡು ದಿನಗಳ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ಕೆಸಿಆರ್, ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ಹರಿಹಾಯ್ದರು, 2024 ರಲ್ಲಿ ಬಿಜೆಪಿ ಮುಕ್ತ ಭಾರತ ಮಾಡಲು ಜನರು ಪ್ರತಿಜ್ಞೆ ತೆಗೆದುಕೊಳ್ಳಬೇಕು ಎಂದು ಹೇಳಿದರು. ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಗೋಲ್ಮಾಲ್ ಪಿಎಂ ಎಂದು ಕರೆದರು. ಕೇಂದ್ರ ಸರ್ಕಾರ ಬರೀ ಸುಳ್ಳನ್ನೇ ಹೇಳುತ್ತದೆ ಎಂದು ಹರಿಹಾಯ್ದಿದ್ದರು.
"ನಾವೆಲ್ಲರೂ ಪ್ರತಿಜ್ಞೆ ತೆಗೆದುಕೊಳ್ಳಬೇಕು ಮತ್ತು 2024 ರಲ್ಲಿ ಬಿಜೆಪಿ ಮುಕ್ತ ಭಾರತವನ್ನು ರಚಿಸಲು ಸಿದ್ಧರಾಗಿರಬೇಕು. ಆ ಘೋಷಣೆಯೊಂದಿಗೆ ನಾವು ಮುನ್ನಡೆಯಬೇಕು. ಆಗ ಮಾತ್ರ ನಾವು ಈ ದೇಶವನ್ನು ಉಳಿಸಬಹುದು, ಇಲ್ಲದಿದ್ದರೆ ಈ ದೇಶವನ್ನು ಉಳಿಸಲು ಯಾವುದೇ ಅವಕಾಶವಿಲ್ಲ" ಎಂದು ಕೆಸಿಆರ್ ಹೇಳಿದರು.

ಹುತಾತ್ಮ ಸೈನಿಕರ ಕುಟುಂಬಕ್ಕೆ ಪರಿಹಾರ ವಿತರಣೆ
ಬಿಹಾರ ಭೇಟಿಯ ಸಂದರ್ಭದಲ್ಲಿ, ಲಡಾಖ್ನಲ್ಲಿ ಚೀನಾದೊಂದಿಗಿನ ಭಾರತದ ಗಡಿಯಲ್ಲಿ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಮಡಿದ ಸೈನಿಕರ ಕುಟುಂಬಗಳಿಗೆ ಕೆ. ಚಂದ್ರಶೇಖರ್ ರಾವ್ ಹಣವನ್ನು ವಿತರಿಸಲಿದ್ದಾರೆ. ಈ ಹಿಂದೆ ನೀಡಿದ ಭರವಸೆಯಂತೆ ಸೈನಿಕರ ಕುಟುಂಬಕ್ಕೆ ತಲಾ 10 ಲಕ್ಷ ರುಪಾಯಿ ನೀಡುವುದಾಗಿ ತಿಳಿಸಿದರು.
ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಮೃತಪಟ್ಟ ಬಿಹಾರದ 12 ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದ್ದಾರೆ. ಮೃತ ವಲಸೆ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರುಪಾಯಿ ಚೆಕ್ ವಿತರಿಸಲಿದ್ದಾರೆ. ಚೆಕ್ ವಿತರಣೆ ವೇಳೆ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಇರಲಿದ್ದಾರೆ.

ತೃತೀಯರಂಗ ರಚನೆಗೆ ಕೆಸಿಆರ್ ಕಸರತ್ತು
ಕೆ. ಚಂದ್ರಶೇಖರ್ ರಾವ್ ಬಿಜೆಪಿ ಸರ್ಕಾರದ 'ಜನವಿರೋಧಿ' ನೀತಿಗಳ ವಿರುದ್ಧ ಹಲವು ದಿನಗಳಿಂದ ವಿವಿಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳನ್ನು ಹೆಚ್ಚಿಸಿದ್ದಾರೆ. ಶರದ್ ಪವಾರ್, ಉದ್ಧವ್ ಠಾಕ್ರೆ, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ವಿವಿಧ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲೇ ಅತ್ಯಂತ ದುರ್ಬಲ ಮತ್ತು ಅಸಮರ್ಥ ಪ್ರಧಾನಿ ಎಂದು ಬಣ್ಣಿಸಿರುವ ಕೆಸಿಆರ್, ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರದ ಅಗತ್ಯವಿದೆ ಎಂದು ಕಳೆದ ತಿಂಗಳು ಹೇಳಿದ್ದರು.












Click it and Unblock the Notifications