"ತೇಜಸ್ವಿ ಯಾದವ್ ಒಳ್ಳೆ ಹುಡುಗ" ಎಂದ ಬಿಜೆಪಿ ಮುಖಂಡೆ ಉಮಾ ಭಾರತಿ!
ಪಾಟ್ನಾ, ನವೆಂಬರ್.11: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ತೇಜಸ್ವಿ ಯಾದವ್ ತುಂಬಾ ಒಳ್ಳೆಯ ಹುಡುಗ ಎನ್ನುವ ಮೂಲಕ ಬಿಜೆಪಿ ಹಿರಿಯ ಮುಖಂಡೆ ಉಮಾ ಭಾರತಿ ಹಾಡಿ ಹೊಗಳಿದ್ದಾರೆ.
"ತೇಜಸ್ವಿ ಯಾದವ್ ಒಳ್ಳೆಯ ಹುಡುಗನೇ. ಆದರೆ ಈಗಿನ ಪರಿಸ್ಥಿತಿಯಲ್ಲಿ ಆರ್ ಜೆಡಿ ಬಾಯಿಯಿಂದ ಜನರು ಬಿಹಾರವನ್ನು ರಕ್ಷಿಸಿದ್ದಾರೆ. ಇಲ್ಲದೇ ಹೋದಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಮತ್ತೊಮ್ಮೆ ಬಿಹಾರವನ್ನು ಜಂಗಲ್ ರಾಜ್ ಮಾಡುತ್ತಿದ್ದರು" ಎಂದು ಉಮಾ ಭಾರತಿ ಆರೋಪಿಸಿದ್ದಾರೆ.
ರಾಜ್ಯವನ್ನು ಸದ್ಯದ ಪರಿಸ್ಥಿತಿಯಲ್ಲಿ ನಿರ್ವಹಿಸುವ ಸಾಮರ್ಥ್ಯವಂತೂ ತೇಜಸ್ವಿ ಯಾದವ್ ಅವರಿಗೆ ಇರಲಿಲ್ಲ. ಲಾಲೂ ಪ್ರಸಾದ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಬಿಹಾರವನ್ನು ಜಂಗಲ್ ರಾಜ್ ಮಾಡುತ್ತಿದ್ದರು. ಹಾಗಾಗಿ ಇನ್ನೂ ಕೆಲವು ಸಮಯಗಳ ಬಳಿಕ ತೇಜಸ್ವಿ ಯಾದವ್ ಕೂಡಾ ರಾಜ್ಯವನ್ನು ನಿಭಾಯಿಸುವ ಸಾಮರ್ಥ್ಯವನ್ನು ಸಂಬಾದಿಸಿಕೊಳ್ಳಬೇಕಿದೆ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಸಲಹೆ ನೀಡಿದ್ದಾರೆ.

ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತ:
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಈ ಪೈಕಿ ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.
ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.












Click it and Unblock the Notifications