ಪಾಟ್ನಾದಲ್ಲಿ ಬಿಹಾರ ಸಿಎಂ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ: 13 ಮಂದಿ ಬಂಧನ
ಪಾಟ್ನಾ ಆಗಸ್ಟ್ 22: ರಾಜ್ಯ ರಾಜಧಾನಿಯಲ್ಲಿ ಭಾನುವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಬಂಧಿಸಲಾಗಿದೆ. ಪಾಟ್ನಾ-ಗಯಾ ಮಾರ್ಗದ ಗೌರಿಚಕ್ನ ಸೊಹ್ಗಿ ಗ್ರಾಮದಲ್ಲಿ ಜನಸಮೂಹದ ದಾಳಿಗೆ ಸಿಎಂ ನಿತೀಶ್ ಕುಮಾರ್ ಅವರ ಮೂರು-ನಾಲ್ಕು ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ.
ನಿನ್ನೆ ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ. ಘಟನೆ ನಡೆದಾಗ ಮುಖ್ಯಮಂತ್ರಿಯವರ ಭದ್ರತಾ ಪಡೆಗಳ ವಾಹನದೊಂದಿಗೆ ಇರಲಿಲ್ಲ. ಸೋಮವಾರ ಸಿಎಂ ಭೇಟಿಗೂ ಮುನ್ನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ನಿತೀಶ್ ಕುಮಾರ್ ಅವರು (ಆಗಸ್ಟ್ 22) ಇಂದು ಗಯಾದಲ್ಲಿ ನಿರ್ಮಿಸಲಾಗುತ್ತಿರುವ ರಬ್ಬರ್ ಅಣೆಕಟ್ಟಿನ ಪರಿಶೀಲನೆ ಮತ್ತು ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಹಾರ ಸಿಎಂ ಹೆಲಿಕಾಪ್ಟರ್ ಮೂಲಕ ಗಯಾಗೆ ಆಗಮಿಸಲಿದ್ದಾರೆ.

ಪಾಟ್ನಾ ಡಿಎಂ ಚಂದ್ರಶೇಖರ್ ಸಿಂಗ್ ಪ್ರಕಾರ, ಇತ್ತೀಚೆಗಷ್ಟೇ ಸೊಹ್ಗಿ ಪ್ರದೇಶದಲ್ಲಿ ಯುವಕನ ಮೃತದೇಹವೊಂದು ಪತ್ತೆಯಾಗಿತ್ತು. ಇದು ಸೊಹ್ಲಿ ವಲಯದ ಗ್ರಾಮಸ್ಥರನ್ನು ಕೆರಳಿಸಿದ್ದು, ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ದಾರಿಯಲ್ಲಿ ತೆರಳುತಿದ್ದ ನಿತೀಶ್ ಕುಮಾರ್ ಬೆಂಗಾವಲು ಪಡೆಯ ಮೇಲೆ ಉದ್ರಿಕ್ತರ ಗುಂಪು ಕಲ್ಲುಗಳಿಂದ ದಾಳಿ ಮಾಡಿದೆ. ಶೀಘ್ರದಲ್ಲೇ, ಆ ಪ್ರದೇಶಕ್ಕೆ ಪೊಲೀಸ್ ಪಡೆಯನ್ನು ಕಳುಹಿಸಲಾಯಿತು ಮತ್ತು ಗುಂಪನ್ನು ಚದುರಿಸಲಾಗಿದೆ ಎಂದು ಅವರು ಹೇಳಿದರು. ಘಟನೆಯಲ್ಲಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 13 ಮಂದಿಯನ್ನು ಬಂಧಿಸಲಾಗಿದೆ.

ಬಿಜೆಪಿ ಜೊತೆಗಿನ ಧೀರ್ಘ ಸಂಬಂಧವನ್ನು ಕಡಿದುಕೊಂಡು ಆರ್ ಜೆಡಿ ನೇತೃತ್ವದ ವಿಪಕ್ಷಗಳ ಬೆಂಬಲದೊಂದಿಗೆ ನಿತೀಶ್ ಕುಮಾರ್ ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.












Click it and Unblock the Notifications