ಸಿಬಿಐ ಮೃತಪಟ್ಟಿದ್ದಾಳೆ ಎಂದಿದ್ದ ಸಾಕ್ಷಿ ಕೋರ್ಟ್ಗೆ ಹಾಜರು!
ಪಾಟ್ನಾ, ಜೂನ್ 3: ಸಾಕ್ಷಿದಾರಳು ಮೃತಪಟ್ಟಿದ್ದಾಳೆ ಎಂದು ನ್ಯಾಯಾಲಯದ ಮುಂದೆ ಸುಳ್ಳು ಮರಣ ಪರಿಶೀಲನಾ ವರದಿ ಸಲ್ಲಿಸಿದ್ದಕ್ಕಾಗಿ ಮುಜಾಫರ್ಪುರದ ನ್ಯಾಯಾಲಯ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮುಜಾಫರ್ಪುರದ 1ನೇ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಧೀಶ ಪುನಿತ್ ಕುಮಾರ್ ಗರ್ಗ್ ಸಿಬಿಐಗೆ ನೋಟಿಸ್ ನೀಡಿದ್ದಾರೆ. ಸಿಬಿಐನಂತಹ ಸಂಸ್ಥೆಯೇ ಈ ರೀತಿ ಸುಳ್ಳು ದಾಖಲೆ ಸಲ್ಲಿಸಿರುವುದಕ್ಕೆ ಕೋರ್ಟ್ ಕಿಡಿ ಕಾರಿದೆ. ಈ ಕುರಿತು ಸ್ಪಷ್ಟನೆ ನೀಡುವಂತೆ ತಿಳಿಸಿದೆ.
ಸಿವಾನ್ನ ಹಿಂದೂಸ್ತಾನ್ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿದ್ದ 42 ವರ್ಷದ ರಂಜನ್ನನ್ನು 2016ರ ಮೇ 13ರಂದು ಸಿವಾನ್ ಪಟ್ಟಣದ ಜನನಿಬಿಡ ಹಣ್ಣಿನ ಮಾರುಕಟ್ಟೆಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.
ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಬಾದಾಮಿ ದೇವಿಯನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಸಮನ್ಸ್ ಕೋರಿದ್ದು, ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ ಮೇ 24 ರಂದು ಸಿಬಿಐ ಅಧಿಕಾರಿಗಳು ಸಾಕ್ಷಿ ಬಾದಾಮಿ ದೇವಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು ಮತ್ತು ಅದಕ್ಕೆ ಸಂಬಂಧಿಸಿದಂತೆ ಆಕೆಯ ಮರಣದ ಪರಿಶೀಲನಾ ವರದಿಯನ್ನು ಸಲ್ಲಿಸಿತ್ತು.

ನ್ಯಾಯಾಲಯಕ್ಕೆ ಹಾಜರಾದ ಬಾದಾಮಿ ದೇವಿ
ಸಿಬಿಐ ಮರಣದ ಪರಿಶೀಲನಾ ವರದಿ ಸಲ್ಲಿಸಿದ ಮೇಲೆ ಅಚ್ಚರಿ ಎಂಬಂತೆ ಸಾಕ್ಷಿದಾರರಾದ ಬಾದಾಮಿ ದೇವಿ ತಮ್ಮ ದಾಖಲೆಗಳು ಮತ್ತು ಅಫಿಡೆವಿಟ್ನೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ನಾನು ಸಿವಾನ್ನಲ್ಲಿರುವ ಕಸೆರಾ ಟೋಲಿ ನಿವಾಸದಲ್ಲಿ ಉಳಿದುಕೊಂಡಿದ್ದೇನೆ. ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ ಆದರೆ ಯಾವುದೇ ಸಿಬಿಐ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿಲ್ಲ. ಬದಲಾಗಿ, ನಾನು ಸತ್ತಿದ್ದೇನೆ ಎಂದು ಘೋಷಿಸಿದ್ದಾರೆ, ಈ ವಿಚಾರ ಮಾಧ್ಯಮಗಳ ನನಗೆ ಮೂಲಕ ತಿಳಿಯಿತು. ಪ್ರಕರಣದ ದಿಕ್ಕು ತಪ್ಪಿಸಲು ಮಾಡಿರುವ ಪಿತೂರಿ ಇದು ಎಂದು ಬಾದಾಮಿ ದೇವಿ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.

ಸಿಬಿಐ ವಿರುದ್ಧವೇ ಆರೋಪ
ಸಿಬಿಐ ವಿರುದ್ಧವೇ ಬಾದಾಮಿ ದೇವಿ ಆರೋಪ ಮಾಡಿದ್ದು, "ಸಿಬಿಐನ ಕ್ರಮವು ಅನುಮಾನಾಸ್ಪದವಾಗಿದೆ, ಪ್ರಕರಣದ ಮತ್ತೊಬ್ಬ ಸಾಕ್ಷಿ ವೀರೇಂದ್ರ ಪಾಂಡೆ ಜೊತೆ ಶಾಮೀಲಾಗಿ ಸಿಬಿಐ ಅಧಿಕಾರಿಗಳು ಈ ರೀತಿ ಕೆಲಸ ಮಾಡಿದ್ದಾರೆ" ಎಂದು ದೂರಿದ್ದಾರೆ.
"ಪ್ರಕರಣದಲ್ಲಿ ವಿಜಯ್ ಕುಮಾರ್ ಮತ್ತು ಅಜರುದ್ದೀನ್ ಬೇಗ್ ಅಲಿಯಾಸ್ ಲದ್ದಾಬ್ ಮಿಯಾ ಅವರನ್ನು ಸುಳ್ಳು ಆರೋಪದ ಮೇಲೆ ಸಿಲುಕಿಸಲು ಸಿಬಿಐ ಪ್ರಯತ್ನಿಸುತ್ತಿದೆ" ಎಂದು ಅರ್ಜಿದಾರರ ಪರ ವಕೀಲ ಶರದ್ ಸಿನ್ಹಾ ಹೇಳಿದ್ದಾರೆ.

ಸಿಬಿಐ ಮಾಡಿದ ಎಡವಟ್ಟು
ಸಿಬಿಐನಂತಹ ಸಂಸ್ಥೆ ನ್ಯಾಯಾಲಯದ ಮುಂದೆ ಸಾಕ್ಷಿದಾರರ ಸುಳ್ಳು ಮರಣ ಪರಿಶೀಲನಾ ವರದಿಯನ್ನು ಸಲ್ಲಿಸಿರುವುದು ಆಘಾತಕಾರಿಯಾಗಿದೆ ಎಂದು ವಕೀಲ ಶರದ್ ಸಿನ್ಹಾ ಹೇಳಿದ್ದಾರೆ.
"ಬಾದಾಮಿ ದೇವಿ ತಮ್ಮ ಫೋಟೋ, ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಕಾರ್ಡ್ ಅನ್ನು ಸಲ್ಲಿಸಿದ್ದಾರೆ. ನಾನು ನ್ಯಾಯಾಲಯದ ಮುಂದೆ ದಾಖಲೆ ಸಲ್ಲಿಕೆ ಮಾಡಿದ್ದೇನೆ, ನ್ಯಾಯಾಲಯ ಸಿಬಿಐಗೆ ಶೋಕಾಸ್ ನೋಟಿಸ್ ನೀಡಿದೆ" ಎಂದು ಅವರು ಹೇಳಿದರು.

ಆರೋಪಿಯಾಗಿದ್ದ ಮಾಜಿ ಸಂಸದ
2016 ಮೇ 13ರಂದು ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಮಾಡಲಾಗಿತ್ತು, ಮೇ 17 ರಂದು ಬಿಹಾರ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. 2016ರ ಸೆಪ್ಟೆಂಬರ್ 15ರಂದು ಸಿಬಿಐ ಪ್ರಕರಣದ ತನಿಖೆ ಆರಂಭಿಸಿತ್ತು.
ಹತ್ಯೆ ಮಾಡಿರುವ ಅಪರಾಧಿಗಳನ್ನು ಶಿಕ್ಷಿಸುವಂತೆ ರಂಜನ್ ಪತ್ನಿ ಆಶಾ ರಂಜನ್ ಸಿಬಿಐ ತನಿಖೆಗೆ ಮನವಿ ಮಾಡಿದ್ದರು. ಈ ಪ್ರಕರಣದಲ್ಲಿ ಆರ್ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಕೂಡ ಆರೋಪಿಯನ್ನಾಗಿ ಮಾಡಲಾಗಿತ್ತು, ವಿಚಾರಣೆ ಕೂಡ ಎದುರಿಸಿದ್ದ ಅವರು 2021ರಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟರು.
ಶಹಾಬುದ್ದೀನ್, ಲಡ್ಡನ್ ಮಿಯಾನ್ ಅಲಿಯಾಸ್ ಅಜರುದ್ದೀನ್ ಬೇಗ್, ರಿಶು ಕುಮಾರ್ ಜೈಸ್ವಾಲ್, ರೋಹಿತ್ ಕುಮಾರ್ ಸೋನಿ, ವಿಜಯ್ ಕುಮಾರ್ ಗುಪ್ತಾ, ರಾಜೇಶ್ ಕುಮಾರ್ ಮತ್ತು ಸೋನು ಕುಮಾರ್ ಗುಪ್ತಾ ಸೇರಿದಂತೆ ಆರು ಆರೋಪಿಗಳ ವಿರುದ್ಧ 96 ಸಾಕ್ಷಿಗಳೊಂದಿಗೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಇಲ್ಲಿಯವರೆಗೆ, ಸಿಬಿಐ ಕೇವಲ 24 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.












Click it and Unblock the Notifications