ನಕಲಿ ವೈದ್ಯಕೀಯ ಚಿಕಿತ್ಸಾಲಯಗಳ ಬಗ್ಗೆ ವರದಿ: ಬಿಹಾರ ಪತ್ರಕರ್ತನ ಹತ್ಯೆ
ಪಾಟ್ನಾ ನವೆಂಬರ್ 14: ನಾಲ್ಕು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 22ರ ಹರೆಯದ ಪತ್ರಕರ್ತ ಹಾಗೂ ಆರ್ಟಿಐ ಕಾರ್ಯಕರ್ತನ ಮೃತದೇಹ ಶುಕ್ರವಾರ ಸಂಜೆ ಪತ್ತೆಯಾಗಿದೆ. ಬಿಹಾರದ ಮಧುಬನಿ ಜಿಲ್ಲೆಯ ಹಳ್ಳಿಯೊಂದರ ರಸ್ತೆಬದಿಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಬುದ್ದಿನಾಥ್ ಝಾ ಅಲಿಯಾಸ್ ಅವಿನಾಶ್ ಝಾ ಸ್ಥಳೀಯ ಸುದ್ದಿ ಪೋರ್ಟಲ್ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಅವರು ನಕಲಿ ವೈದ್ಯಕೀಯ ಚಿಕಿತ್ಸಾಲಯಗಳ ಬಗ್ಗೆ ವರದಿ ಮಾಡಿದ ಎರಡು ದಿನಗಳ ನಂತರ ಕಣ್ಮರೆಯಾಗಿದ್ದರು. ನಕಲಿ ಕ್ಲಿನಿಕ್ಗಳನ್ನು ಮುಚ್ಚಲು ಮತ್ತು ಅಂಥವರಿಗೆ ಭಾರಿ ದಂಡವನ್ನು ವಿಧಿಸಲು ಬುದ್ಧಿನಾಥ್ ಕಾರ್ಯ ನಿರ್ವಹಿಸುತ್ತಿದ್ದರು.
ವರದಿಯ ಸಮಯದಲ್ಲಿ ಬುದ್ಧಿನಾಥ್ ಅವರಿಗೆ ಹಲವಾರು ಬೆದರಿಕೆಗಳು ಮತ್ತು ಲಂಚದ ಆಮಿಷಗಳನ್ನು ಒಡ್ಡಲಾಯಿತಾದರೂ ಅವರು ಅದನ್ನು ಕಡೆಗಣಿಸಿದ್ದರು ಎಂದು ತಿಳಿದು ಬಂದಿದೆ. ಬೆನಿಪಟ್ಟಿಯ ಲೋಹಿಯಾ ಚೌಕ್ ಬಳಿ ಇರುವ ಅವರ ಮನೆಯ ಹತ್ತಿರ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇವರ ಮನೆ ಪಟ್ಟಣದ ಪೊಲೀಸ್ ಠಾಣೆಯಿಂದ 400 ಮೀಟರ್ಗಿಂತ ಕಡಿಮೆ ದೂರದಲ್ಲಿದೆ.
ರಾತ್ರಿ 9 ರಿಂದ ಹಲವಾರು ಬಾರಿ ತಮ್ಮ ಮನೆಯಿಂದ ಹೊರಗೆ ಬರುವುದು ಮತ್ತು ಹತ್ತಿರದ ಮುಖ್ಯ ರಸ್ತೆಯಲ್ಲಿ ತಮ್ಮ ಮೊಬೈಲ್ ಫೋನ್ನಲ್ಲಿ ಮಾತನಾಡುವುದನ್ನು ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊನೆಯ ಬಾರಿಗೆ ಅವರು ರಾತ್ರಿ 9.58 ಕ್ಕೆ ಕುತ್ತಿಗೆಗೆ ಹಳದಿ ಸ್ಕಾರ್ಫ್ ಧರಿಸಿ ಮನೆಯಿಂದ ಹೊರಟರು. ಇದು ರಾತ್ರಿ 10.05 ರಿಂದ 10.10 ರ ನಡುವೆ ನಡೆದ ಘಟನೆಯಾಗಿದೆ. ಅವರನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ನೋಡಿದ್ದಾರೆ. ಸ್ವಲ್ಪ ಸಮಯದ ನಂತರ ಬುದ್ಧಿನಾಥ್ ಕಾಣಿಸಲಿಲ್ಲ. ಮರುದಿನ ಅವರ ಮನೆಯವರು ಎದ್ದಾಗ ಕುರುಹು ಇರಲಿಲ್ಲ. ಅವರ ಮೋಟಾರ್ ಸೈಕಲ್ ಇನ್ನೂ ಮನೆಯಲ್ಲಿಯೇ ಇತ್ತು. ಆದರೆ ಅವರ ಕ್ಲಿನಿಕ್ ತೆರೆದಿತ್ತು ಮತ್ತು ಅವರ ಲ್ಯಾಪ್ಟಾಪ್ ಆನ್ ಆಗಿತ್ತು.
ಮನೆಯವರು ಬುದ್ದಿನಾಥ್ ಅವರು ಮಂಗಳವಾರ ತಡರಾತ್ರಿ ಅಥವಾ ಬುಧವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು, ವಾಪಸ್ ಬರುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಅವರು ಹಿಂತಿರುಗಲಿಲ್ಲ. ಆದಾಗ್ಯೂ ದಿನ ಕಳೆದಂತೆ ಅವರ ಕುಟುಂಬವು ಹೆಚ್ಚು ಆತಂಕಕ್ಕೊಳಗಾಯಿತು ಮತ್ತು ಅವರ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡುವಂತೆ ಪೊಲೀಸರಿಗೆ ಲಿಖಿತ ದೂರು ನೀಡಲಾಯಿತು. ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರಿಗೆ ಬೆನಿಪಟ್ಟಿಯಿಂದ ಪಶ್ಚಿಮಕ್ಕೆ ಸುಮಾರು 5 ಕಿ.ಮೀ ದೂರದಲ್ಲಿರುವ ಬೇಟೌನ್ ಗ್ರಾಮದಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ಅವರ ಫೋನ್ ಸ್ವಿಚ್ ಆನ್ ಮಾಡಿರುವುದು ಪತ್ತೆಯಾಗಿದೆ. ಅಲ್ಲಿಗೆ ತಲುಪಿದ ಪೊಲೀಸರು ಹೆಚ್ಚಿನ ಸುಳಿವುಗಳನ್ನು ಹುಡುಕಲು ವಿಫಲರಾದರು. ಇನ್ನೊಂದು ದಿನ (ಗುರುವಾರ) ಬುದ್ಧಿನಾಥನನ್ನು ಪತ್ತೆಹಚ್ಚಲು ಸಾಧ್ಯವಾಗದೆ ಪೋಲೀಸರು ಕಳೆದರು.
ಶುಕ್ರವಾರ ನವೆಂಬರ್ 12 ರಂದು ಬುದ್ದಿನಾಥ್ ಅವರ ಸೋದರಸಂಬಂಧಿ ಬಿಜೆ ವಿಕಾಸ್ ಅವರು ಬೆಟೌನ್ ಗ್ರಾಮದ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿ ಶವ ಪತ್ತೆಯಾಗಿದೆ ಎಂದು ಮಾಹಿತಿ ಪಡೆದರು. ಕೆಲ ಸಂಬಂಧಿಕರು ಮತ್ತು ಅಧಿಕಾರಿಗಳು ಅಲ್ಲಿಗೆ ಧಾವಿಸಿ ನೋಡಿದಾಗ, ಬೆರಳಿನಲ್ಲಿದ್ದ ಉಂಗುರ, ಕಾಲಿನ ಗುರುತು ಹಾಗೂ ಕುತ್ತಿಗೆಯಲ್ಲಿದ್ದ ಸರಪಳಿಯಿಂದ ಇದು ಬುದ್ಧಿನಾಥನ ಶವ ಎಂದು ಪತ್ತೆ ಮಾಡಲಾಗಿದೆ. ಬುದ್ಧಿನಾಥ್ ಅವರ ಮುಖದ ಗುರುತು ಪತ್ತೆ ಮಾಡಲು ಸಾಧ್ಯವಾಗದಷ್ಟು ಕ್ರೂರವಾಗಿ ಅವರನ್ನು ಕೊಲೆ ಮಾಡಲಾಗಿದೆ. ಕೂಡಲೆ ಪೊಲೀಸರು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಂದು ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಈ ಆಘಾತಕಾರಿ ಘಟನೆಯು ಪ್ರದೇಶದಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿದೆ. ಅವರ ಮನೆಯು ಪೊಲೀಸ್ ಠಾಣೆಯಿಂದ ಕೆಲವೇ ನೂರು ಮೀಟರ್ಗಳಷ್ಟು ದೂರದಲ್ಲಿರುವಾಗ ಅವರನ್ನು ಹೇಗೆ ಅಪಹರಿಸಲಾಗಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ನ್ಯಾಯಕ್ಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.