ನಟ ಸುಶಾಂತ್ ಸಿಂಗ್ ಆತ್ಮಹತ್ಯೆ, ಸಿಬಿಐ ತನಿಖೆಗೆ ಆಗ್ರಹ
ಪಾಟ್ನಾ, ಜೂನ್ 15: ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಸುದ್ದಿ ಕೇಳಿ ಅವರ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಬಾಂದ್ರಾ ಪೊಲೀಸರು ''ಇದೊಂದು ಅಸಹಜ ಸಾವು, ಆತ್ಮಹತ್ಯೆ ಪ್ರಕರಣ'' ಎಂದು ಷರಾ ಹಾಕಿದ್ದಾರೆ. ಸೋಮವಾರದಂದು ಮರಣೋತ್ತರ ಪರೀಕ್ಷೆಯನ್ನು ನೀಡಲಾಗಿದೆ. ಆದರೆ, ಬಿಹಾರದಲ್ಲಿ ಮಾತ್ರ ಇದು ಆತ್ಮಹತ್ಯೆಯಲ್ಲ ಕೊಲೆ, ಇದರ ಹಿಂದೆ ಭಾರಿ ಷಡ್ಯಂತ್ರವಿದೆ ಎಂಬ ಕೂಗೆದ್ದಿದೆ.
ಜನ ಅಧಿಕಾರ ಪಾರ್ಟಿ ಮುಖ್ಯಸ್ಥ ಪಪ್ಪು ಯಾದವ್ ಅವರು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಈ ಘಟನೆ ಬಗ್ಗೆ ಊಹೆ ಮಾಡಲು ಸಾಧ್ಯವಿಲ್ಲ, ಸರ್ಕಾರ ಕೂಡಲೇ ಆಸಕ್ತಿ ವಹಿಸಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಇದರ ಹಿಂದೆ ಯಾರದ್ದೋ ಪಿತೂರಿ ಇರುವ ಶಂಕೆ ವ್ಯಕ್ತವಾಗಿದೆ, ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನಾಗಿರಲಿಲ್ಲ ಎಂದಿದ್ದಾರೆ.
ಸುಶಾಂತ್ ಸದಾ ಚಟುವಟಿಕೆಯಿಂದಿರುತ್ತಿದ್ದ. ಒಳ್ಳೆ ಹೆಸರು ಮಾಡಿದ್ದ. ಕೆಳಮಟ್ಟದಿಂದ ಬೆಳೆದು ಸ್ಟಾರ್ ಗಿರಿ ಸಂಪಾದಿಸಿದ್ದ, ಬಿಹಾರದ ಹೆಮ್ಮೆಯ ಪುತ್ರ ಎನಿಸಿದ್ದ, ಈಗ ಇಡೀ ರಾಜ್ಯ ಕಣ್ಣೀರಿಡುತ್ತಿದೆ ಎಂದರು.
''ಮರಣೋತ್ತರ ಪರೀಕ್ಷೆಯಲ್ಲೂ ನೇಣುಬಿಗಿದುಕೊಂಡು ಉಸಿರುಗಟ್ಟಿದ್ದರಿಂದ ಸಾವು ಸಂಭವಿಸಿದೆ ಎಂದು ವರದಿ ಬಂದಿದೆ. ಪ್ರಾಥಮಿಕ ತನಿಖೆಯಲ್ಲೂ ಯಾವುದೇ ಇತರೆ ಕಾರಣ, ಅನುಮಾನ ವ್ಯಕ್ತವಾಗಿಲ್ಲ, ಸೂಸೈಡ್ ನೋಟ್ ಕೂಡಾ ಸಿಕ್ಕಿಲ್ಲ'' ಎಂದು ಮುಂಬೈ ಎಸಿಪಿ ಡಾ. ಮನೋಜ್ ಶರ್ಮ ಪ್ರತಿಕ್ರಿಯಿಸಿದ್ದಾರೆ.

ಸೂಕ್ತ ತನಿಖೆಗೆ ಆಗ್ರಹಿಸಿದ ಸುಶಾಂತ್ ಬಾವ ಒ.ಪಿ ಸಿಂಗ್
ಚಿತ್ರದಲ್ಲಿ ಎಡಬದಿಯಲ್ಲಿರುವ ಪಪ್ಪು ಯಾದವ್ ಅಲ್ಲದೆ, ಸುಶಾಂತ್ ಸಿಂಗ್ ರಜಪೂತ್ ಅವರ ಬಾವ ಒ.ಪಿ ಸಿಂಗ್ ಅವರು ಆತ್ಮಹತ್ಯೆ ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಹರ್ಯಾಣ ಮುಖ್ಯಮಂತ್ರಿ ಕಚೇರಿಯ ವಿಶೇಷ ಅಧಿಕಾರಿಗಳನ್ನು ಸಂಪರ್ಕಿಸಿ, ಸುಶಾಂತ್ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಮನವಿ ಮಾಡಿಕೊಂಡಿದ್ದಾರೆ.
ಚಂಡೀಗಢದಲ್ಲಿ ನೆಲೆಸಿರುವ ಒ.ಪಿ ಸಿಂಗ್ ಮನವಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಪ್ರತಿಕ್ರಿಯೆ ಸಿಕ್ಕಿದ್ದು, ಸೂಕ್ತ ತನಿಖೆಗೆ ನಿರ್ದೇಶಿಸಲಾಗಿದೆ. ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸಂತಾಪ ವ್ಯಕ್ತಪಡಿಸಿ, ಸುಶಾಂತ್ ಅಗಲಿಕೆ ಸಿನಿಮಾ ಕ್ಷೇತ್ರಕ್ಕೆ ಮಾತ್ರವಲ್ಲ, ಇಡೀ ಸಮುದಾಯಕ್ಕೆ ಆಘಾತ, ನೋವು ತಂದಿದೆ ಎಂದಿದ್ದಾರೆ.

ಬಿಹಾರದ ಪೂರ್ನಿಯಾ ಜಿಲ್ಲೆಯವರು
ಬಿಹಾರದ ಪೂರ್ನಿಯಾ ಜಿಲ್ಲೆಯ ಮೂಲದ ಸುಶಾಂತ್ ಸಿಂಗ್ ಅವರು ಪಾಟ್ನಾದಲ್ಲಿ 1986ರಲ್ಲಿ ಜನಿಸಿದ್ದರು. ಸುಶಾಂತ್ ಸೋದರಿ ಮೀತು ಸಿಂಗ್ ಹಾಗೂ ಅವರ ತಾಯಿ 2002ರಲ್ಲಿ ಮೃತರಾಗುತ್ತಾರೆ. ಸುಶಾಂತ್ ಸೋದರಿ ರಾಜ್ಯಮಟ್ಟದ ಕ್ರಿಕೆಟರ್ ಆಗಿದ್ದರು. ಬಿಹಾರ ತೊರೆದು ದೆಹಲಿಗೆ ಬಂದ ಸುಶಾಂತ್ ಮೊದಲ ಚಿತ್ರದಲ್ಲಿ ಕೂಡಾ ಕ್ರಿಕೆಟ್ ಪ್ರಧಾನ ವಿಷಯವಾಗಿದೆ. ಅವರಿಗೆ ಹೆಸರು ತಂದುಕೊಟ್ಟ ಧೋನಿ ಪಾತ್ರ ಕೂಡಾ ಕ್ರಿಕೆಟರ್ ಕುರಿತಾಗಿದೆ. ನೋವು ಮರೆಯಲು ಬಣ್ಣದ ಲೋಕಕ್ಕೆ ಬಂದಿದ್ದ ಸುಶಾಂತ್, ನೋವು ನುಂಗಲಾರದೆ ಶಾಶ್ವತವಾಗಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸುಶಾಂತ್ ಕುಟುಂಬಸ್ಥರೆಲ್ಲರೂ ಬಿಹಾರದಲ್ಲೇ ನೆಲೆಸಿದ್ದಾರೆ.

ಜೀವನದಲ್ಲಿಎಂದಿಗೂ ಉತ್ಸಾಹ ಕಳೆದುಕೊಂಡವರಲ್ಲ
ಪಾಟ್ನಾದಲ್ಲಿ ಹೈಸ್ಕೂಲ್, ದೆಹಲಿಯಲ್ಲಿ ಇಂಜಿನಿಯರಿಂಗ್ ಇನ್ ಮೆಕ್ಯಾನಿಕಲ್ ಓದಿರುವ ಸುಶಾಂತ್ ಓರ್ವ Rank ಸ್ಟುಡೆಂಟ್ ಆಗಿದ್ದರು. ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ನಲ್ಲಿ ಎಲ್ಲ ಪ್ರವೇಶ ಪರೀಕ್ಷೆಯನ್ನು ಒಮ್ಮೆಗೆ ಕ್ಲಿಯರ್ ಮಾಡಿದ್ದರು. ದೆಹಲಿ ತಾಂತ್ರಿಕ ವಿವಿಯಲ್ಲಿರುವಾಗ ಶೈಮಾಕ್ ದವಾರ್ ಡ್ಯಾನ್ಸ್ ಕ್ಲಾಸ್ ಸೇರಿದ್ದ ಸುಶಾಂತ್ ಗೆ ನಾಟಕ ರಂಗ, ಸಿನಿಮಾ ನಟನೆ ಬಗ್ಗೆ ಆಸಕ್ತಿ ಬೆಳೆದು ಚಿತ್ರರಂಗಕ್ಕೆ ಕರೆದುಕೊಂಡು ಬಂದಿತ್ತು. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಯಶಸ್ಸು ಕಂಡರೂ ತನ್ನ ಊರಿನವರನ್ನು ಮರೆತಿರಲಿಲ್ಲ. ದುಡಿದಿದ್ದರಲ್ಲಿ ಬಹುಪಾಲು ದಾನ ಮಾಡುತ್ತಿದ್ದರು. ಎಲ್ಲರ ಕಷ್ಟಕ್ಕೆ ಅಗುತ್ತಿದ್ದರು. ಜೀವನದಲ್ಲಿಎಂದಿಗೂ ಉತ್ಸಾಹ ಕಳೆದುಕೊಂಡವರಲ್ಲ ಎಂದು ಆಪ್ತರು ಹೇಳಿದ್ದಾರೆ.

ಯಾವುದೇ ಬೇರೆ ಸಂಶಯ ಮೂಡಿಲ್ಲ ಎಂದ ಪೊಲೀಸರು
ಸುಶಾಂತ್ ಅವರು ತಮ್ಮ ರೂಮಿನಲ್ಲಿ ಭಾನುವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಾಗ ಅವರ ಕೆಲವು ಸ್ನೇಹಿತರು ಮನೆಯ ಇನ್ನೊಂದು ಭಾಗದಲ್ಲಿದ್ದರು. ಕಳೆದ 6 ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ, ಸ್ನೇಹಿತರು ಸದಾಕಾಲ ಜೊತೆಯಲ್ಲಿದ್ದು ಸಾಂತ್ವನ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಇಲ್ಲ, ಸುಶಾಂತ್ ಮೊಬೈಲ್ ಫೋನ್ ಮೆಸೇಜ್ ಪರಿಶೀಲಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕವೂ ಬೇರೆಯವರ ಕೈವಾಡದ ಗುರುತು ಪತ್ತೆಯಾಗಿಲ್ಲ ಎಂದು ಬಾಂದ್ರಾ ಪೊಲೀಸರು ಹೇಳಿದ್ದಾರೆ.












Click it and Unblock the Notifications