ಬಿಜೆಪಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಕುಶ್ವಾಹ ನಡೆ
Recommended Video

ಪಾಟ್ನಾ, ಡಿಸೆಂಬರ್ 20: ಇತ್ತೀಚೆಗಷ್ಟೇ ಎನ್ ಡಿಎ ಮೈತ್ರಿಕೂಟದಿಂದ ಹಿಂದೆ ಸರಿದು ಆಘಾತ ನೀಡಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖಂಡ ಉಪೇಂದ್ರ ಕುಶ್ವಾಹ ಮಹಾಮೈತ್ರಿಕೂಟದೊಂದಿಗೆ ಕೈಜೋಡಿಸುವ ಸೂಚನೆ ನೀಡುವ ಮೂಲಕ ಮತ್ತೊಮ್ಮೆ ಭಾರೀ ಆಘಾತ ನೀಡಿದ್ದಾರೆ.
ಎಎನ್ ಐ ನ್ಯೂಸ್ ಏಜೆನ್ಸಿಗೆ ಅವರು ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಿಸಿ, ಪ್ರಧಾನಿಯಾಗುವ ಪ್ರಬುದ್ಧ ನಾಯಕ ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ಅಧ್ಯಕ್ಷರನ್ನು ಹಾಡಿ ಹೊಗಳಿದ್ದಾರೆ.
'ಎನ್ ಡಿಎ ಜೊತೆಗಿರುವ ಹಲವು ನಾಯಕರು ದುರಹಂಕಾರಿಗಳು. ಅದರಲ್ಲೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ದುರಂಹಂಕಾರವೇ ನಾನು ಎನ್ ಡಿಎ ತೊರೆಯಲು ಮುಖ್ಯ ಕಾರಣ' ಎಂದು ಅವರು ಹೇಳಿದರು.
ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಕುಶ್ವಾಹ ಅವರ ಈ ಹೇಳಿಕೆ ಎನ್ ಡಿಎ ಸರ್ಕಾರಕ್ಕೆ ತಲೆನೋವು ತರಿಸಿದೆ. ಲೋಕಸಭಾ ಚುನಾವಣೆಯ ಹೊತ್ತಲ್ಲಿ ಎನ್ ಡಿಎ ಯಿಂದ ಹೊರಹೋಗಿದ್ದಲ್ಲದೆ ಮಹಾಮೈತ್ರಿಕೂಟದೊಂದಿಗೆ ಕೈಜೋಡಿಸುವ ಸೂಚನೆ ನೀಡಿದ್ದು ಬಿಜೆಪಿಗೆ ಇರಿಸುಮುರಿಸುಂಟು ಮಾಡಿದೆ.

ಎನ್ ಡಿಎ ಯಿಂದ ಹೊರಬನ್ನಿ
ಎನ್ ಡಿಎ ಯ ಜೊತೆ ಗುರುತಿಸಿಕೊಂಡಿರುವ ಹಲವು ಪಕ್ಷಗಳು ಈ ಮೈತ್ರಿಕೂಟದಿಂದ ಹೊರಬರುವುದು ಲೇಸು ಎಂದಿರುವ ಕುಶ್ವಾಹ ಈಗಾಗಲೇ ಎನ್ ಡಿಎ ವಿರುದ್ಧ ತಮ್ಮ ಯುದ್ಧ ಆರಂಭಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ಲೋಕ ಜನತಾ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಸಹ ಬಿಜೆಪಿಗೆ ಡೆಡ್ ಲೈನ್ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಎಲ್ ಜಿಪಿ ಹಾಕಿರುವ ಬೇಡಿಕೆಯನ್ನು ಬಿಜೆಪಿ ಒಪ್ಪಿಕೊಳ್ಳದೆ ಇದ್ದರೆ ಡಿಸೆಂಬರ್ 31 ರ ನಂತರ ಎಲ್ ಜಿಪಿ ಸಹ ಎನ್ ಡಿಎ ಯಿಂದ ದೂರ ಸರಿಯುವ ಸೂಚನೆ ನೀಡಿದೆ.

ಕುಶ್ವಾಶ ರಾಜೀನಾಮೆಗೆ ಕಾರಣ
ನಾಲ್ಕೂವರೆ ವರ್ಷಗಳಿಂದ ಬಿಜೆಪಿ ನೇತೃತ್ವದ ಎನ್ ಎನ್ ಡಿಎ ಜೊತೆ ಗುರುತಿಸಿಕೊಂಡಿದ್ದ ಕುಶ್ವಾಹ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರೂ ಆಗಿದ್ದರು. ಬಿಹಾರದಲ್ಲಿ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಕುರಿತು ನಡೆದ ಚರ್ಚೆಯಲ್ಲಿ ತಮ್ಮನ್ನು, ತಮ್ಮ ಪಕ್ಷವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಹುಲ್ ಗೆ ಪ್ರಧಾನಿ ಪಟ್ಟ?
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ನಾಯಕ. ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಿ, ಪ್ರಧಾನಿಯಾಗುವ ಸಾಮರಥ್ಯ ಅವರಿಗಿದೆ ಎಂದು ಕುಶ್ವಾಹ ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳುವ ಮೂಲಕ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೋದಿ ಸರ್ಕಾರದಿಂದ ಭ್ರಮನಿರಸನ
"ಕೇಂದ್ರ ಸರ್ಕಾರದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನರು ಮೋದಿ ಸರ್ಕಾರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ಈ ದೇಶದ ಜನರಿಗೆ ಭ್ರಮನಿರಸನವನ್ನುಂತು ಮಾಡಿದೆ. ರೈತರನ್ನು ಕಡೆಗಣಿಸಲಾಗಿದೆ, ಉದ್ಯೋಗಾವಕಾಶ ಸೃಷ್ಟಿಯಾಗಿಲ್ಲ. ಆದ್ದರಿಂದ ದೇಶ ಸದ್ಯದಲ್ಲೇ ಬದಲಾವಣೆಯನ್ನು ಕಾಣಲಿದೆ" ಎಂದು ಕುಶ್ವಾಹ ಹೇಳಿದ್ದಾರೆ.












Click it and Unblock the Notifications