Explained: ಪ್ರಧಾನಿಗೆ ಸವಾಲು ಹಾಕಿದ್ದು ಏಕೆ ನಿತೀಶ್ ಕುಮಾರ್?
ಪಾಟ್ನಾ, ಆಗಸ್ಟ್ 10: ಬಿಹಾರದಲ್ಲಿ ಎಂಟನೇ ಬಾರಿ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಪಾಟ್ನಾದ ರಾಜಭವನದಲ್ಲಿ ಪದಗ್ರಹಣ ಮಾಡಿದ ನಿತೀಶ್ ಕುಮಾರ್, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದಾರೆ.
ಬಿಜೆಪಿಯ ಮೈತ್ರಿ ಕಡಿದುಕೊಂಡಿರುವ ನಿತೀಶ್ ಕುಮಾರ್, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ 2014ರಲ್ಲಿ ಲೋಕಸಭೆ ಚುನಾವಣೆ ಗೆದ್ದಿರಬಹುದು, ಆದರೆ ಮುಂದೆ ಬರುತ್ತಿರುವುದು 2024 ಎಂದು ಚಾಲೆಂಜ್ ಮಾಡಿದ್ದಾರೆ.
ಬಿಹಾರದಲ್ಲಿ ನಿತೀಶ್ ನಿರ್ಗಮನವನ್ನು ಏಕೆ ತಡೆಯಲಿಲ್ಲ ಬಿಜೆಪಿ!?
ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಕೆಲಸ ಮಾಡುತ್ತದೆ ಎಂದು ನಿತೀಶ್ ಕುಮಾರ್ ಪದೇ ಪದೇ ಒತ್ತಿ ಹೇಳಿದರು.
ಇದೇ ವೇಳೆ ತಾವು ಮುಂದಿನ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಸ್ಪಷ್ಟಪಡಿಸಿದರು. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಹೇಳಿದ್ದೇನು?. ಬಿಹಾರದಲ್ಲಿ ಸದ್ಯಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣು
ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿಯಿದೆ. 2025ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, 2024ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಅಂದರೆ ಈ ಅವಧಿಯಲ್ಲಿ ನಿತೀಶ್ ಕುಮಾರ್ ಇನ್ನೂ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತಾರೆ. ಇದರರ್ಥ ಚಾಲೆಂಜರ್ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದರ ಮಧ್ಯೆ ಕಾಂಗ್ರೆಸ್ ದುರ್ಬಲಗೊಳ್ಳುತ್ತಿದ್ದು, ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಇದರ ಮಧ್ಯೆ ನಿತೀಶ್ ಕುಮಾರ್ "ಭಾರತದ ಅತ್ಯಂತ ಅನುಭವಿ ಮುಖ್ಯಮಂತ್ರಿ" ಎಂದು ಆರ್ಜೆಡಿಯ ತೇಜಸ್ವಿ ಯಾದವ್ ಹೇಳಿದ್ದಾರೆ.
ನಿತೀಶ್ ಕುಮಾರ್ ಒಬ್ಬರೇ ಮೋದಿ ವಿರುದ್ಧದ ಅಭ್ಯರ್ಥಿ
ಕಾಂಗ್ರೆಸ್ ಪಕ್ಷವು ನಾಯಕತ್ವದ ಹೊಣೆಗಾರಿಕೆಯಿಂದ ಹಿಂದೆ ಸರಿದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನಿತೀಶ್ ಕುಮಾರ್ ಪ್ರಬಲ ಅಭ್ಯರ್ಥಿಯಾಗಲು ಸಾಧ್ಯವಿದೆ ಎಂದು ರಾಜಕೀಯ ವಿಶ್ಲೇಷಕರು ಮೊದಲಿನಿಂದಲೂ ಹೇಳುತ್ತಿದ್ದಾರೆ. ಆದರೆ ಬಿಜೆಪಿ ಜೊತೆಗಿನ ಮೈತ್ರಿಯಿಂದ ಅವರು ಹೊರಗೆ ಬರಬೇಕು ಎಂಬುದನ್ನು ಒತ್ತಿ ಹೇಳುತ್ತಿದ್ದರು. ಇದೀಗ ಬಿಜೆಪಿ ಮತ್ತು ಜೆಡಿಯು ಮೈತ್ರಿ ಮುರಿದು ಬಿದ್ದಿದೆ. ಮುಂದಿನ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗುತ್ತಿದೆ.
ಕೇಸರಿ ಪಾರ್ಟಿಯೊಂದಿಗೆ ನಿತೀಶ್ ಕುಮಾರ್ ಮೈತ್ರಿ
2019ರಲ್ಲಿ ಒಟ್ಟಿಗೆ ಗೆದ್ದಿದ್ದ ಜೆಡಿಯು-ಬಿಜೆಪಿ ಮೈತ್ರಿಕೂಟದಲ್ಲಿ ನಿನ್ನೆಯವರೆಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದರು. ಆದರೆ ಈಗ ರಾಜಕೀಯ ತಿರುವು-ಮುರುವು ಆಗಿದೆ. ತಮ್ಮ ಹಳೆಯ ಗೆಳೆಯ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಯೊಂದಿಗೆ ಕೈಜೋಡಿಸಿದ್ದಾರೆ. ಲಾಲೂ ಪುತ್ರ ತೇಜಸ್ವಿ ಯಾದವ್ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾರೆ.
ಬಿಹಾರದಲ್ಲಿ 2015ರ ಮಹಾಘಟಬಂಧನ್
ಕಳೆದ 2015ರಲ್ಲಿ ಬಿಹಾರದಲ್ಲಿ ರಚನೆಯಾದ ಜೆಡಿಯು-ಆರ್ಜೆಡಿ-ಕಾಂಗ್ರೆಸ್ ಮೈತ್ರಿಯನ್ನು ಮಹಾಘಟಬಂಧನ್ ಎಂದು ಕರೆಯಲಾಗಿತ್ತು. ಈ ಮಹಾಘಟಬಂಧನ್ ರಚನೆಗೂ ಪೂರ್ವದಲ್ಲಿ ಎರಡು ದಶಕಗಳ ಬಿಜೆಪಿಯೊಂದಿಗಿನ ಸಂಬಂಧವನ್ನು ನಿತೀಶ್ ಕುಮಾರ್ ಕಡಿದುಕೊಂಡಿದ್ದರು. ಆದರೆ 2020ರಲ್ಲಿ ಮತ್ತೆ ಬಿಜೆಪಿಯ ಜೊತೆಗೆ ನಿತೀಶ್ ಕುಮಾರ್ ಮೈತ್ರಿ ಮುಂದುವರಿಯಿತು. ಆದರೆ ಇದೀಗ ಮತ್ತೊಮ್ಮೆ ಕೇಸರಿ ಪಾರ್ಟಿಗೆ ಬಾಯ್ ಎಂದಿರುವ ನಿತೀಶ್ ಹಳೆ ಗೆಳೆಯನೊಂದಿಗೆ ಸರ್ಕಾರ ರಚಿಸಿದ್ದಾರೆ.
2020ರಲ್ಲಿ ನನಗೆ ಮುಖ್ಯಮಂತ್ರಿ ಸ್ಥಾನವೇ ಬೇಕಿರಲಿಲ್ಲ
"ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ 2020ರಲ್ಲಿ ವಿಧಾನಸಭೆ ಚುನಾವಣೆಯನ್ನು ಗೆದ್ದುಕೊಂಡ ನಂತರ ನನಗೆ ಮುಖ್ಯಮಂತ್ರಿ ಆಗುವ ಬಯಕೆ ಇರಲಿಲ್ಲ. ಜೆಡಿಯು ಪಕ್ಷದ ನಾಯಕರ ಜೊತೆಗೂ ಈ ಬಗ್ಗೆ ಚರ್ಚಿಸಿದ್ದೆನು. ಅಂದು ಸಿಎಂ ಸ್ಥಾನ ಬೇಡ ಎಂದು ಹೇಳುತ್ತಿದ್ದೆ, ಆದರೆ ನನ್ನ ಮೇಲೆ ಒತ್ತಡ ಹೆಚ್ಚಾಗಿತ್ತು. ತದನಂತರದಲ್ಲಿ ಏನಾಯಿತು ಎಂಬುದನ್ನು ನೀವೇ ನೋಡಿದ್ದೀರಿ. ನಾನು ಎರಡು ತಿಂಗಳ ಅವಧಿಯವರೆಗೂ ಮಾಧ್ಯಮಗಳೊಂದಿಗೆ ಮಾತನಾಡುವುದಕ್ಕೂ ಸಾಧ್ಯವಾಗಿರಲಿಲ್ಲ," ಎಂದು ನಿತೀಶ್ ಕುಮಾರ್ ಹೇಳಿದರು.
ಆರ್ ಜೆಡಿ ಅತಿದೊಡ್ಡ ಪಕ್ಷವಾಗಿದ್ದರೂ ನಿತೀಶ್ ಕುಮಾರ್ ಗೆ ಪಟ್ಟ
ಬಿಹಾರದಲ್ಲಿ 2015ರ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೆನಪಿಸಿಕೊಂಡರು. ಜೆಡಿಯು ಮತ್ತು ಆರ್ ಜೆಡಿ ಮೈತ್ರಿಪಕ್ಷಗಳಾಗಿ ಎದುರಿಸಿದ ಚುನಾವಣೆಯಲ್ಲಿ 170 ಸ್ಥಾನಗಳನ್ನು ಗೆದ್ದುಕೊಳ್ಳಲು ಸಾಧ್ಯವಾಗಿತ್ತು. ಅಂದು ಜೆಡಿಯು 70 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, 81 ಸ್ಥಾನಗಳನ್ನು ಗೆದ್ದಿದ್ದ ಆರ್ ಜೆಡಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಅದಾಗ್ಯೂ, ನಿತೀಶ್ ಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು.
ಬಿಜೆಪಿಯಿಂದ ಪ್ರಾದೇಶಿಕ ಪಕ್ಷಗಳ ನಾಶಕ್ಕೆ ಪ್ರಯತ್ನ
ಬಿಹಾರದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಜೆಡಿಯು 45 ಸ್ಥಾನ ಮತ್ತು ಬಿಜೆಪಿಗೆ 77 ಸ್ಥಾನಗಳಿವೆ. ಹಾಗಿದ್ದರೂ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಮುಂದುವರಿದಿದ್ದಾರೆ. ಇದರ ಮಧ್ಯೆ ಮಹಾರಾಷ್ಟ್ರದ ರೀತಿಯಲ್ಲೇ ನಿತೀಶ್ ಕುಮಾರ್ ಮತ್ತು ಜೆಡಿಯು ಪಕ್ಷದ ಕಥೆ ಮುಗಿಸುವುದಕ್ಕೆ ಬಿಜೆಪಿ ಸಂಚು ರೂಪಿಸುತ್ತಿದೆ ಎಂಬು ಆರೋಪಿಸಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್, "ಬಿಜೆಪಿಯು ಪ್ರಾದೇಶಿಕ ಪಕ್ಷಗಳ ಕಥೆ ಮುಗಿಸುವುದಕ್ಕೆ ಹುನ್ನಾರ ನಡೆಸುತ್ತಿದೆ," ಎಂದು ಆರೋಪಿಸಿದ್ದಾರೆ.
Recommended Video