ಬಿಜೆಪಿ ಶಾಸಕರಿಗೆ ಫೋನ್ ಕರೆ; ಲಾಲೂ ಪ್ರಸಾದ್ ಯಾದವ್ ವಿರುದ್ಧ ಎಫ್ಐಆರ್
ಪಾಟ್ನಾ, ನವೆಂಬರ್ 26: ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿಧಾನಸಭೆ ಸ್ಪೀಕರ್ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯನ್ನು ಸೋಲಿಸಲು ಸಹಾಯ ಕೋರಿ ಲಾಲೂ ಬಿಜೆಪಿ ಶಾಸಕನಿಗೆ ಕರೆ ಮಾಡಿದ್ದರು.
ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಲಾಲೂ ಪ್ರಸಾದ್ ಯಾದವ್ ಮಾಡಿದ್ದ ದೂರವಾಣಿ ಕರೆ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಆಧರಿಸಿ ಮತ್ತು ಶಾಸಕನಿಗೆ ಸಚಿವ ಸ್ಥಾನದ ಆಮಿಷ ವೊಡ್ಡಿದ ಆಧಾರದ ಮೇಲೆ ಭ್ರಷ್ಟಾಚಾರ ಕಾಯ್ದೆಯಡಿ ಲಾಲೂ ವಿರುದ್ಧ ದೂರನ್ನು ದಾಖಲು ಮಾಡಲಾಗಿತ್ತು.
ಬಿಜೆಪಿ ಶಾಸಕ ಲಲನ್ ಕುಮಾರ್ ಪಾಸ್ವಾನ್ ಅವರಿಗೆ ಕರೆ ಮಾಡಿದ್ದ ಲಾಲೂ ಪ್ರಸಾದ್ ಯಾದವ್ ವಿರುದ್ಧ ಜಾರ್ಖಂಡ್ ಸರ್ಕಾರ ಸಹ ತನಿಖೆಗೆ ಆದೇಶ ನೀಡಿದೆ. ಲಾಲೂ ಪ್ರಸಾದ್ ರಾಂಚಿಯ ರಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಲಾಲೂ ಪ್ರಸಾದ್ ಯಾದವ್ ರಾಂಚಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿಂದಲೇ ಕರೆ ಮಾಡಿರುವ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಮಂಗಳವಾರ ಬಿಹಾರ ವಿಧಾನಸಭೆ ಸ್ಪೀಕರ್ ಚುನಾವಣೆಯ ಸಂದರ್ಭದಲ್ಲಿ ಮತದಾನದಿಂದ ದೂರ ಇರಬೇಕು ಎಂದು ಲಾಲೂ ಪ್ರಸಾದ್ ಯಾದವ್ ದೂರವಾಣಿ ಕರೆಯಲ್ಲಿ ಹೇಳಿದ್ದರು. ಮತದಾನದಿಂದ ದೂರ ಉಳಿದು ಸಹಾಯ ಮಾಡಿದರೆ ಸಚಿವ ಸ್ಥಾನ ನೀಡುವ ಆಮಿಷವನ್ನು ಶಾಸಕರಿಗೆ ವೊಡ್ಡಿದ್ದರು.












Click it and Unblock the Notifications