ಇದು ಐತಿಹಾಸಿಕ ಇನ್ನಿಂಗ್ಸ್, ರನ್ ಔಟ್ ಆಗುವುದಿಲ್ಲ: ಮೈತ್ರಿ ಬಗ್ಗೆ ತೇಜಸ್ವಿ ಯಾದವ್
ಪಾಟ್ನಾ, ಆಗಸ್ಟ್ 24: ಐದು ವರ್ಷಗಳ ಹಿಂದೆ ತಮ್ಮ ಮತ್ತು ಕಾಂಗ್ರೆಸ್ ಜೊತೆಗಿನ ಆಡಳಿತ ಮೈತ್ರಿಯನ್ನು ಕೊನೆಗೊಳಿಸಿದ್ದ ನಿತೀಶ್ ಕುಮಾರ್ ಅವರೊಂದಿಗಿನ ಹೊಸ ಮಹಾಮೈತ್ರಿಕೂಟವನ್ನು ವಿವರಿಸಲು ತೇಜಸ್ವಿ ಯಾದವ್ ಬುಧವಾರ ಕ್ರಿಕೆಟ್ ಜೊತೆಗೆ ಹೋಲಿಸಿ ಉಲ್ಲೇಖಿಸಿದ್ದಾರೆ.
"ನಾನೊಬ್ಬ ಕ್ರಿಕೆಟಿಗ ಮತ್ತು ಈ ಜೊತೆಯಾಟವು ಎಂದಿಗೂ ಮುಗಿಯದ ಇನ್ನಿಂಗ್ಸ್, ಇದು ಐತಿಹಾಸಿಕವಾಗಿರುತ್ತದೆ. ನಮ್ಮ ಜೊತೆಯಾಟವು ದೀರ್ಘವಾಗಿರುತ್ತದೆ. ಯಾರೂ ರನ್ ಔಟ್ ಆಗುವುದಿಲ್ಲ" ಎಂದು ಕ್ರಿಕೆಟಿಗ, ರಾಜಕಾರಣಿಯಾಗಿರುವ ತೇಜಸ್ವಿ ಯಾದವ್ ಮೈತ್ರಿ ಸರಕಾರದ ಬಗ್ಗೆ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಹೊಸ ಮಹಾಘಟಬಂಧನ್ ಸರಕಾರವು ಬಹುಮತವನ್ನು ಸಾಬೀತುಪಡಿಸಿದೆ.
ಹೊಸ ಸರ್ಕಾರದಲ್ಲಿ ನಿತೀಶ್ ಕುಮಾರ್ ಅವರ ನಂತರದ ಸ್ಥಾನವನ್ನು ಆಕ್ರಮಿಸಿಕೊಂಡಿರುವ ತೇಜಸ್ವಿ ಯಾದವ್, ಬಿಜೆಪಿ ಒಡೆದು ಆಳುವ ರಾಜಕೀಯವನ್ನು ಮಾಡುತ್ತಿದೆ, ವಿರೋಧ ಪಕ್ಷಗಳನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಪ್ರತಿಪಕ್ಷಗಳಿರುವಲ್ಲಿ ಅಳಿಯಂದಿರನ್ನು ಕರೆದುಕೊಂಡು ಹೋಗುತ್ತದೆ!
"ಪ್ರತಿಪಕ್ಷಗಳು ಅಧಿಕಾರದಲ್ಲಿರುವ ಯಾವುದೇ ರಾಜ್ಯಕ್ಕೆ ಹೋಗಿ ಅಥವಾ ಬಿಜೆಪಿಗೆ ಭಯವಿರುವ ಯಾವುದೇ ರಾಜ್ಯಕ್ಕೆ ಹೋಗಿ ನೋಡಿ. ಬಿಜೆಪಿ ತಮ್ಮ ಮೂರು ಮಂದಿ ಅಳಿಯಂದಿರಾದ ಕೇಂದ್ರ ತನಿಖಾ ದಳ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಕರೆತರುತ್ತಾರೆ" ಎಂದರು.
"ಒಂದು ನಿರೂಪಣೆ, ಕಾರ್ಯಸೂಚಿಯನ್ನು ರಚಿಸಲಾಗುತ್ತಿದೆ, ನೀವು ಬಿಜೆಪಿಯೊಂದಿಗೆ ಕೈಜೋಡಿಸಿದರೆ, ನೀವು ಹರಿಶ್ಚಂದ್ರ (ಪ್ರಾಮಾಣಿಕತೆ ಮತ್ತು ಸತ್ಯವಂತರಿಗೆ ಹೆಸರುವಾಸಿಯಾದ ಪುರಾಣದ ರಾಜ) ಇಲ್ಲದಿದ್ದರೆ ನೀವು ಅಪರಾಧಿ, ಅತ್ಯಾಚಾರಿ. ಜೊತೆಗೆ ಇಡಿ ಮತ್ತು ಸಿಬಿಐ ನಿಮ್ಮ ಹಿಂದೆ ಬೀಳುತ್ತಾರೆ" ಎಂದರು.

ದೇಶವನ್ನು ಉಳಿಸುವುದು, ಇಲ್ಲ ನಾಶಕ್ಕೆ ಸಹಕರಿಸುವುದು!
"ನಮಗೆ ಕೇವಲ ಎರಡು ಆಯ್ಕೆಗಳಿರುವ ಹಂತದಲ್ಲಿ ನಾವು ಇದ್ದೇವೆ. ಮೊದಲನೆಯದು ದೇಶವು ಸಾಮಾಜಿಕ ಉದ್ವಿಗ್ನತೆಯಿಂದ ನಾಶವಾಗುವುದನ್ನು ನೋಡುವುದು ಅಥವಾ ನಾವು ಸಹಕರಿಸುವುದು. ಎರಡನೇಯದು ದೇಶವನ್ನು ಉಳಿಸುವುದು. ಇದನ್ನೇ ನಾವು ಮಾಡಿದ್ದೇವೆ. ಭವಿಷ್ಯದಲ್ಲಿ ಅವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಇಂದು ನೀವು ಬಿಹಾರದಲ್ಲಿನ ಯಾವುದೇ ಮಗುವನ್ನು ಇಡಿ, ಸಿಬಿಐ ಮತ್ತು ಐಟಿ ಬಗ್ಗೆ ಕೇಳಿದರೆ, ಈ ಏಜೆನ್ಸಿಗಳು ಬಿಜೆಪಿಗಾಗಿ ಕೆಲಸ ಮಾಡುತ್ತವೆ ಎಂದು ಅವರು ಕೂಡ ನಿಮಗೆ ಹೇಳುತ್ತಾರೆ" ಎಂದು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಲಾಲು ಜಿ ಕೋಮುವಾದಿ ಶಕ್ತಿಗಳ ಮುಂದೆ ತಲೆಬಾಗಲಿಲ್ಲ
ಇಂದಿನ ವಾತಾವರಣದಲ್ಲಿ ನಿತೀಶ್ ಕುಮಾರ್ ಮಾಡಿರುವುದು ಶ್ಲಾಘನೀಯ ಕೆಲಸ ಎಂದು ಬಿಜೆಪಿ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿದ ಜನತಾ ದಳ ಯುನೈಟೆಡ್ ಮುಖ್ಯಸ್ಥ ನಿತೀಶ್ ಕುಮಾರ್ ನಡೆಯನ್ನು ಉಲ್ಲೇಖಿಸಿದರು. "ನನ್ನ ತಂದೆ ಲಾಲು ಜಿಯವರಿಗೂ ನಾನು ಧನ್ಯವಾದ ಹೇಳುತ್ತೇನೆ. ಬಿಜೆಪಿ ಅವರನ್ನು ಹೆದರಿಸಲು, ಬೆದರಿಸಲು ಪ್ರಯತ್ನಿಸಿದರು, ಆದರೆ ಅವರು ಎಂದಿಗೂ ಕೋಮುವಾದಿ ಶಕ್ತಿಗಳ ಮುಂದೆ ತಲೆಬಾಗಲಿಲ್ಲ" ಎಂದು ಹೇಳಿದರು.
"ಈ ಮೈತ್ರಿ ಹೇಗೆ ಸಂಭವಿಸಿತು ಎಂದು ವರದಿಗಾರರು ನಮ್ಮನ್ನು ಕೇಳಿದರು. ನಾನು ಅವರಿಗೆ ಹೇಳಿದ್ದೇನೆ ಮಹಾರಾಷ್ಟ್ರದಲ್ಲಿ ಇದು ಸಂಭವಿಸಿದ ರೀತಿಯಲ್ಲಿ ಮಾತ್ರ ಅಲ್ಲ ಎಂದು. ಬಿಜೆಪಿಗೆ ಒಂದೇ ಒಂದು ಮಾರ್ಗವಿದೆ - ಒಂದೋ ಜನರನ್ನು ಹೆದರಿಸುವುದು ಮತ್ತು ಹೆದರಲು ನಿರಾಕರಿಸಿದರೆ ಅವರನ್ನು ಖರೀದಿಸುವುದು" ಎಂದರು.

ನಿತೀಶ್ ಕುಮಾರ್ ಹಿಂದೆ ದೃಢವಾಗಿ ನಿಲ್ಲುತ್ತೇವೆ!
"ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಪ್ರಜಾಪ್ರಭುತ್ವದ ತೊಟ್ಟಿಲಿಗೆ ಬಂದು ಪ್ರಾದೇಶಿಕ ಶಕ್ತಿಗಳನ್ನು ಮುಗಿಸುವುದಾಗಿ ಬೆದರಿಕೆ ಹಾಕಿದರು. ನಿತೀಶ್ ಕುಮಾರ್ ಅವರಿಗೆ ತುಂಬಾ ತೊಂದರೆಯಾಗುತ್ತಿತ್ತು. ದೇಶದಲ್ಲಿ ಸಮಾಜವಾದಿ ರಾಜಕೀಯವನ್ನು ಮುಗಿಸಲು ನಾವು ಬಿಡುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಮ್ಮೆಲ್ಲ ಮೈತ್ರಿ ಪಾಲುದಾರರು ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಹೊಗಳಿದ್ದೇವೆ ಮತ್ತು ನಾವು ಅವರ ಹಿಂದೆ ದೃಢವಾಗಿ ನಿಲ್ಲುತ್ತೇವೆ" ಎಂದು ತೇಜಸ್ವಿ ಯಾದವ್ ಹೇಳಿದರು.
ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಆರ್ಜೆಡಿ ಕಾಂಗ್ರೆಸ್ ಎಡಪಕ್ಷಗಳ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಇದೆ. 243 ಸದಸ್ಯರಿರುವ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರಕಾರದ ಪರವಾಗಿ 164 ಶಾಸಕರಿದ್ದಾರೆ.












Click it and Unblock the Notifications