ಸಚಿವರಾದ ಬಳಿಕ ಕ್ಷೇತ್ರಕ್ಕೆ ಮೊದಲ ಭೇಟಿ: ಪಶುಪತಿ ಪಾರಸ್ ಮೇಲೆ ಶಾಹಿ ಎಸೆದ ಮಹಿಳೆ
ಪಾಟ್ನಾ, ಆಗಸ್ಟ್ 24: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ದಕ್ಕಿಸಿಕೊಂಡ ಬಳಿಕ ಮೊದಲ ಬಾರಿಗೆ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ತನ್ನ ಲೋಕ ಸಭೆ ಕ್ಷೇತ್ರವಾದ ಬಿಹಾರದ ಹಾಜಿಪುರಕ್ಕೆ ಸೋಮವಾರ ಭೇಟಿ ನೀಡಿದ್ದಾರೆ. ಆದರೆ ಲೋಕ ಜನಶಕ್ತಿ ಪಕ್ಷದ ಸಂಸದರು ಹಾಜಿಪುರದಲ್ಲಿ ಪಶುಪತಿ ಕುಮಾರ್ ಪಾರಸ್ರನ್ನು ಭೇಟಿಯಾಗಲು ಧಾವಿಸುತ್ತಿದ್ದಂತೆ ಎಲ್ಜೆಪಿ ನಾಯಕ, ಸಂಸದ ಚಿರಾಗ್ ಪಾಸ್ವಾನ್ ಬೆಂಬಲಿತೆ ಪಶುಪತಿ ಕುಮಾರ್ ಪಾರಸ್ ಮೇಲೆ ಶಾಹಿ ಚೆಲ್ಲಿದ್ದಾರೆ.
ಚಿರಾಗ್ ಪಾಸ್ವಾನ್ ಬೆಂಬಲಿತೆಯ ಆಕ್ರೋಶಕ್ಕೆ ಬಲಿಯಾದ ಪಶುಪತಿ ಕುಮಾರ್ ಪಾರಸ್ ಕೊನೆಗೆ ತನ್ನ ಬಟ್ಟೆಯನ್ನು ಬದಲಾಯಿಸಬೇಕಾದ ಪರಿಸ್ಥಿತಿ ಬಂದೊದಗಿತು. ಜುಲೈ 8 ರಂದು ಬಿಹಾರದ ಹಾಜಿಪುರ ಸಂಸದ ಪಶುಪತಿ ಕುಮಾರ್ ಪಾರಸ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ಆಯ್ಕೆ ಆಗುವ ಮೂಲಕ ಕೇಂದ್ರ ಸಚಿವರಾಗಿದ್ದಾರೆ. ಹಾಗೆಯೇ ಪಶುಪತಿ ಕುಮಾರ್ ಪಾರಸ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹಾರ ಸಂಸ್ಕರಣಾ ಕಾರ್ಖಾನೆಗಳ ಖಾತೆಯನ್ನು ನೀಡಿದ್ದಾರೆ. ಈ ಖಾತೆಯನ್ನು ಇದಕ್ಕೂ ಮೊದಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನಿರ್ವಹಿಸುತ್ತಿದ್ದರು.
ದೆಹಲಿ ಹೈಕೋರ್ಟ್ನಲ್ಲಿ ಚಿರಾಗ್ ಪಾಸ್ವಾನ್ಗೆ ಹಿನ್ನೆಡೆ: ಅರ್ಜಿ ವಜಾ
ಪಶುಪತಿ ಕುಮಾರ್ ಪಾರಸ್ ಲೋಕ ಜನಶಕ್ತಿ ಪಕ್ಷದ ಮುಖಂಡರಾಗಿದ್ದರು. ಈಗ ಒಡೆದ ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. 1978 ರಲ್ಲಿ ತನ್ನ ರಾಜಕೀಯ ಜೀವನ ಆರಂಭಿಸಿದ ಪಶುಪತಿ ಕುಮಾರ್ ಪಾರಸ್ ಮೊದಲು ಜನತಾ ಪಕ್ಷದ ಶಾಸಕರಾಗಿದ್ದರು. ಬಿಹಾರದ ಕಾಗೇರಿಯಾ ಜಿಲ್ಲೆಯ ಅಲೌಲಿ ಪ್ರದೇಶವನ್ನು ಪಶುಪತಿ ಕುಮಾರ್ ಪಾರಸ್ ಮೊದಲ ಬಾರಿಗೆ ಶಾಸಕರಾಗಿ ಪ್ರತಿನಿಧಿಸಿದ್ದರು. ಈ ಕ್ಷೇತ್ರವು ಇದಕ್ಕೂ ಮುನ್ನ ರಾಮ್ ವಿಲಾಸ್ ಪಾಸ್ವಾನ್ ತೆಕ್ಕೆಯಲ್ಲಿತ್ತು.
ಇನ್ನು ಎಲ್ಜೆಪಿ ಪಕ್ಷದ ಒಳಗೆ ಬಿರುಕು ಕಾಣಿಸಿಕೊಂಡಿದೆ. ಈ ಹಿಂದೆ, ಎಲ್ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಕಿರಿಯ ಸಹೋದರ ಪಶುಪತಿ ಕುಮಾರ್ ಪಾರಾಸ್ ಮತ್ತು ಇತರ ನಾಲ್ವರು ಸಂಸದರು ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾಗಿ ಪತ್ರವೊಂದನ್ನು ಹಸ್ತಾಂತರಿಸಿದರು. ಚಿರಾಗ್ ಪಾಸ್ವಾನ್ರನ್ನು ಪಕ್ಷದ ಮುಖ್ಯಸ್ಥ ಹಾಗೂ ಲೋಕಸಭಾ ಸಂಸದೀಯ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಬೇಕು ಎಂದು ಮನವಿ ಮಾಡಿದ್ದರು.
ಬಳಿಕ ಸ್ಪೀಕರ್ ಓಂ ಬಿರ್ಲಾ, ಪಶುಪತಿ ಕುಮಾರ್ ಪಾರಸ್ರನ್ನು ಕೆಳಮನೆಯ ಎಲ್ಜೆಪಿಯ ನಾಯಕರಾಗಿ ಸ್ವೀಕರಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಡಿಸಿದ ಚಿರಾಗ್ ಪಾಸ್ವಾನ್ ಬಿರ್ಲಾಗೆ ಪತ್ರ ಬರೆದಿದ್ದರು. ಪಾರಾಸ್ರನ್ನು ಎಲ್ಜೆಪಿಯ ನಾಯಕರಾಗಿ ಘೋಷಿಸುವ ನಿರ್ಧಾರವು ಪಕ್ಷದ ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಎಲ್ಜೆಪಿ ನಾಯಕರಾಗಿ ತಮ್ಮ ಪರವಾಗಿ ಹೊಸ ಸುತ್ತೋಲೆ ಹೊರಡಿಸುವಂತೆ ಲೋಕಸಭಾ ಸ್ಪೀಕರ್ಗೆ ಮನವಿ ಮಾಡಿದರು. ಪಕ್ಷದ ಹೊಸ ಅಧ್ಯಕ್ಷರಾಗಿ ಎಲ್ಜೆಪಿ ಬಂಡಾಯ ಬಣ ಪಾರಾಸ್ರನ್ನು ಆಯ್ಕೆ ಮಾಡಿದ ನಂತರ, ಪಕ್ಷದಿಂದ ಅಮಾನತುಗೊಂಡ ಎಲ್ಜೆಪಿ ಸದಸ್ಯರು ಈ ಚುನಾವಣೆ ನಡೆಸಿರುವುದು ಕಾನೂನುಬಾಹಿರ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದರು.
'ನಾನು ಮೋದಿಗೆ ಹನುಮಂತ' ಎಂದು ಚಿರಾಗ್ ಪಾಸ್ವಾನ್ ಹೇಳಿದ್ದೇಕೆ?
ಹಾಗೆಯೇ ಪಶುಪತಿ ಕುಮಾರ್ ಪಾರಸ್ರನ್ನು ಪಕ್ಷದ ನಾಯಕರನ್ನಾಗಿ ನೇಮಿಸುವ ಲೋಕಸಭಾ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಸಂಸದ ಚಿರಾಗ್ ಪಾಸ್ವಾನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು ಆದರೆ ದೆಹಲಿ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ನ್ಯಾಯಮೂರ್ತಿ ರೇಖಾ ಪಲ್ಲಿ ನ್ಯಾಯಪೀಠವು ಚಿರಾಗ್ ಪಾಸ್ವಾನ್ ಅರ್ಜಿಯನ್ನು ವಜಾಗೊಳಿಸಿ, "ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ" ಎಂದು ಹೇಳಿದ್ದಾರೆ. ಚಿರಾಗ್ ಪಾಸ್ವಾನ್ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸ್ಪೀಕರ್ ಓಂ ಬಿರ್ಲಾ ತೀರ್ಮಾನಕ್ಕೆ ತಡೆ ನೀಡಲು ನಿರಾಕರಿಸಿದೆ. ಹಾಗೆಯೇ ಈ ಸಮಸ್ಯೆಗೆ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
'ನಾನು ಸಿಂಹದ ಮಗ' : ಚಿರಾಗ್ ಪಾಸ್ವಾನ್ ಎಚ್ಚರಿಕೆ
ಇನ್ನು ಇತ್ತೀಚೆಗೆ ರಕ್ಷಾ ಬಂಧನದಂದು ಚಿರಾಗ್ ಪಾಸ್ವಾನ್ ಭಾವಾನಾತ್ಮಕವಾಗಿ ಟ್ವೀಟ್ ಮಾಡಿದ್ದರು. "ರಾಜಕೀಯ ವಿಷಯ ಒಂದು ವರ್ಷದಲ್ಲೇ ಕುಟುಂಬದೊಳಗೆ ಭಾರೀ ಬದಲಾವಣೆಯನ್ನು ತಂದಿದೆ," ಎಂದು ಹೇಳಿದ್ದರು. ಹಾಗೆಯೇ ಕಳೆದ ವರ್ಷ ತನ್ನ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಮಕ್ಕಳು ಹಾಗೂ ತಾವೆಲ್ಲರೂ ಸೇರಿ ರಕ್ಷಾ ಬಂಧನ ಆಚರಣೆ ಮಾಡಿದ ಚಿತ್ರವನ್ನು ಕೂಡಾ ಹಾಕಿದ್ದರು.
Recommended Video
(ಒನ್ ಇಂಡಿಯಾ ಸುದ್ದಿ)