ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ: ಮಹಾಮೈತ್ರಿಕೂಟ ಘೋಷಣೆ
ಪಟ್ನಾ, ಅಕ್ಟೋಬರ್ 3: ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಆರ್ಜೆಡಿ ಮುಂತಾದ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನವು ಸೀಟು ಹಂಚಿಕೆಯನ್ನು ಘೋಷಿಸಿದೆ.
ಜತೆಗೆ ಮಹಾಮೈತ್ರಿಕೂಟವು ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರೆ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಿಸಿದೆ. 243 ಸೀಟುಗಳ ವಿಧಾನಸಭೆಯಲ್ಲಿ ಬಿಹಾರ ಪ್ರಮುಖ ಪಕ್ಷಗಳಲ್ಲಿ ಒಂದಾದ ಆರ್ಜೆಡಿ 144 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ 70 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಸಿಬಿಐ 6 ಮತ್ತು ಸಿಪಿಐ (ಎಂ-ಎಲ್) 19 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿವೆ. ವಿಐಪಿ ಮತ್ತು ಜೆಎಂಎಂ ಪಕ್ಷಗಳಿಗೆ ತನ್ನ 144 ಸೀಟುಗಳ ಕೋಟಾದಡಿ ಆರ್ಜೆಡಿ ಸೀಟುಗಳನ್ನು ನೀಡಲಿದೆ.
ಯುಪಿಎ ಒಕ್ಕೂಟದ ಎಲ್ಲ ಪಾಲುದಾರ ಪಕ್ಷಗಳು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಒಂದುಗೂಡುತ್ತಿವೆ. ಕಾಂಗ್ರೆಸ್, ಆರ್ಜೆಡಿ, ಸಿಪಿಐ, ಸಿಪಿಎಂ ಮತ್ತು ವಿಕಾಸಶೀಲ್ ಇನ್ಸಾನ್ ಪಾರ್ಟಿಗಳು ಆರ್ಜೆಡಿ ನಾಯಕತ್ವದ ಮಹಾ ಮೈತ್ರಿಕೂಟದಲ್ಲಿ ಭಾಗವಾಗಲಿವೆ ಎಂದು ಕಾಂಗ್ರೆಸ್ ಮುಖಂಡ ಅವಿನಾಶ್ ಪಾಂಡೆ ತಿಳಿಸಿದ್ದಾರೆ.

ಬಹುಜನ ಸಮಾಜ ಪಾರ್ಟಿಯ ಬಿಹಾರ ಘಟಕದ ಅಧ್ಯಕ್ಷ ಭರತ್ ಬಿಂದ್ ಅವರು ಶನಿವಾರ ಆರ್ಜೆಡಿ ಸೇರ್ಪಡೆಯಾಗಿದ್ದಾರೆ. ಅವರು ಈ ಬಾರಿಯ ಚುನಾವಣೆಯಲ್ಲಿ ಆರ್ಜೆಡಿ ಟಿಕೆಟ್ ಪಡೆಯುವುದು ಬಹುತೇಕ ಖಚಿತವಾಗಿದೆ.
ಎನ್ಡಿಎ ಒಕ್ಕೂಟದ ಸಭೆಯ ಕೂಡ ಶನಿವಾರ ನಡೆದು ಸೀಟು ಹಂಚಿಕೆ ಬಗ್ಗೆ ನಿರ್ಧಾರವಾಗಬೇಕಿತ್ತು. ಆದರೆ ಎಲ್ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ನೋಡಲು ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅಲ್ಲಿಗೆ ಧಾವಿಸಿದ್ದರಿಂದ ಎಲ್ಜೆಪಿ ಸಂಸದೀಯ ಸಭೆಯನ್ನು ಮುಂದೂಡಲಾಗಿದೆ.












Click it and Unblock the Notifications