ಮಾಜಿ ಯೋಧನ ಪ್ರಾಣ ಕಸಿದುಕೊಂಡಿತು ಆರೋಗ್ಯ ಸಚಿವರ ಆಸ್ಪತ್ರೆ ಭೇಟಿ ಕಾರ್ಯಕ್ರಮ
ಪಟ್ನಾ, ಏಪ್ರಿಲ್ 14: ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ, ಕೋವಿಡ್ ರೋಗಿಯಾಗಿದ್ದ ನಿವೃತ್ತ ಸೈನಿಕರೊಬ್ಬರು ಮೃತಪಟ್ಟ ಘಟನೆ ಬಿಹಾರದಲ್ಲಿ ಬುಧವಾರ ನಡೆದಿದೆ. ಆಸ್ಪತ್ರೆಗೆ ಭೇಟಿ ನೀಡಲಿದ್ದ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರನ್ನು ಭವ್ಯವಾಗಿ ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ, ರೋಗಿಗೆ ಚಿಕಿತ್ಸೆ ನೀಡಲು ಮುಂದಾಗದೆ ಮಾನವೀಯತೆ ಮರೆತಿದ್ದಾರೆ. ಇದರ ಪರಿಣಾಮ ಒಂದು ಜೀವ ನಷ್ಟವಾಗಿದೆ.
ಮಾಜಿ ಯೋಧ ವಿನೋದ್ ಸಿಂಗ್ ಅವರನ್ನು ನಳಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಕುಟುಂಬದವರು ಪದೇ ಪದೇ ಮನವಿ ಮಾಡಿದ್ದರೂ ಅವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆ ಅಧಿಕಾರಿಗಳು ಮುಂದಾಗಲಿಲ್ಲ. ಇದರಿಂದ ತಮ್ಮನ್ನು ಕರೆತಂದ ವಾಹನದಲ್ಲಿಯೇ ವಿನೋದ್ ಸಿಂಗ್ ಕೊನೆಯುಸಿರೆಳೆದಿದ್ದಾರೆ.
'ನನ್ನ ತಂದೆಗೆ ಕೋವಿಡ್-19 ಪಾಸಿಟಿವ್ ಇತ್ತು. ಇತರೆ ಆಸ್ಪತ್ರೆಗಳು ಅವರನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದವು. ಎನ್ಎಂಸಿಎಚ್ ಆಸ್ಪತ್ರೆ ಅವರಿಗೆ ಚಿಕಿತ್ಸೆ ನೀಡಲು ಒಪ್ಪಿಕೊಂಡಿತ್ತು. ಆದರೆ ಅವರು ಸುಮಾರು ಒಂದೂವರೆ ಗಂಟೆ ಕಾಲ ನಾವು ಹೊರಗೆ ಕಾಯುವಂತೆ ಮಾಡಿದರು' ಎಂದು ವಿನೋದ್ ಸಿಂಗ್ ಅವರ ಮಗ ದುಃಖ ತೋಡಿಕೊಂಡಿದ್ದಾರೆ.

ಪಟ್ನಾದಿಂದ 120 ಕಿಮೀ ದೂರದಲ್ಲಿರುವ ಲಾಖಿಸರೈ ಪ್ರದೇಶದ ನಿವಾಸಿಯಾಗಿದ್ದ ವಿನೋದ್ ಸಿಂಗ್ ಅವರಲ್ಲಿ ಕೆಲವು ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಅವರನ್ನು ರಾಜಧಾನಿಯ ಆಸ್ಪತ್ರೆಗೆ ಸಾಗಿಸುವಂತೆ ಸಲಹೆ ನೀಡಲಾಗಿತ್ತು.
ಸೋಮವಾರ ಸಂಜೆ ಪಟ್ನಾಕ್ಕೆ ಕರೆದುಕೊಂಡು ಬಂದು ಏಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಹಾಸಿಗೆಗಳು ಲಭ್ಯವಿಲ್ಲದ ಕಾರಣ ಅವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆ ನಿರಾಕರಿಸಿತು. ಬಳಿಕ ಅವರನ್ನು ಖಾಸಗಿ ನರ್ಸಿಂಗ್ ಹೋಮ್ಗೆ ಕರೆದೊಯ್ದು ಕೆಲವು ಗಂಟೆ ದಾಖಲಸಲಾಗಿತ್ತು. ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಳಂದಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಪ್ರತಿಯೊಬ್ಬರೂ ಆರೋಗ್ಯ ಸಚಿವರ ಭೇಟಿಯ ಕೆಲಸದಲ್ಲಿ ಮಗ್ನರಾಗಿದ್ದರು ಎಂದು ವಿನೋದ್ ಸಿಂಗ್ ಮಗ ಅಭಿಮನ್ಯು ಕುಮಾರ್ ತಿಳಿಸಿದ್ದಾರೆ.
'ಪ್ರತಿಯೊಬ್ಬರಿಗೂ ವೈದ್ಯಕೀಯ ನೆರವು ಒದಗಿಸಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಯಾರಾದರೂ ಈ ರೀತಿ ಮೃತಪಟ್ಟರೆ ನಿಜಕ್ಕೂ ಖೇದವಾಗುತ್ತದೆ. ಈ ಘಟನೆ ಬಹಳ ದುರದೃಷ್ಟಕರ' ಎಂದು ಸಚಿವ ಮಂಗಲ್ ಪಾಂಡೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications