ಸುಶಾಂತ್ ಗೆಳತಿ ರಿಯಾ ವಿರುದ್ಧ ಎಫ್ಐಆರ್ ದಾಖಲು
ಪಾಟ್ನಾ, ಜುಲೈ 29: ಬಿಹಾರ ಮೂಲದ ನಟ ಸುಶಾಂತ್ ಸಾವಿನ ತನಿಖೆ ಮುಂದುವರೆದಿದ್ದು, ಸೆಲೆಬ್ರಿಟಿಗಳ ಇನ್ನೊಂದು ಸುತ್ತಿನ ವಿಚಾರಣೆ ಮುಂದುವರೆದಿದೆ. ಬಾಂದ್ರಾ ಪೊಲೀಸರು ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಸೇರಾ ವರದಿ ಬಹಿರಂಗಪಡಿಸಿದ್ದಾರೆ. ಈ ನಡುವೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ.
ಸುಶಾಂತ್ ಸಿಂಗ್ ಅವರ ತಂದೆ ಕೆಕೆ ಸಿಂಗ್ ಅವರು ಪಾಟ್ನಾದ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಿಸೇರಾದಲ್ಲಿ ವಿಷ ಇಲ್ಲ, ಸುಶಾಂತ್ ಸಾವು ಪ್ರಕರಣಕ್ಕೆ ತಿರುವು
ಸುಶಾಂತ್ ಬಳಿ ಹಣ ಪಡೆದಿದ್ದ ರಿಯಾ, ಆತನ ಮೇಲೆ ತನ್ನ ಹಿಡಿತ ಹೊಂದಲು ಯತ್ನಿಸಿದ್ದಳು, ಆತ ಚಿತ್ರರಂಗ ಬಿಟ್ಟು ಕೃಷಿ ಮಾಡಿಕೊಂಡಿರುತ್ತೇನೆ ಎಂದರೂ ಬಿಡಲಿಲ್ಲ.ಬಿಹಾರದಿಂದ ದೂರ ಇರುವಂತೆ ನೋಡಿಕೊಂಡಿದ್ದಳು. ಇದಲ್ಲದೆ ಸುಶಾಂತ್ ಆಪ್ತ ಕಾರ್ಯದರ್ಶಿ ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಕ್ಕಿಸಿ ಹಾಕುತ್ತೇನೆ, ನೀನು ಮಾನಸಿಕ ಅಸ್ವಸ್ಥ ಎಂದು ಎಲ್ಲರಿಗೂ ತಿಳಿಸುತ್ತೇನೆ ಎಂದು ಸುಶಾಂತ್ ನನ್ನು ಆಕೆ ಹೆದರಿಸಿದ್ದಳು ಎಂದು 6 ಪುಟಗಳ ದೂರಿನಲ್ಲಿ ಹೇಳಲಾಗಿದೆ.
ಮರಣೋತ್ತರ ಪರೀಕ್ಷೆ ವರದಿ ಮಹತ್ವ
ಜೂನ್ 14ರಂದು 34 ವರ್ಷ ವಯಸ್ಸಿನ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಅವರ ದೇಹವು ಬಾಂದ್ರಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಗ್ಗಂಟಾಗಿರುವ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಮಹತ್ವ ಪಡೆದುಕೊಂಡಿತ್ತು. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಂಬೈ ಪೊಲೀಸರಿಗೆ ವೈದ್ಯರು ಸಲ್ಲಿಸಿದ್ದಾರೆ. ಇದು 'ನೇಣು ಹಾಕಿಕೊಂಡ ಕಾರಣದಿಂದ ಉಸಿರುಗಟ್ಟಿ ಸಂಭವಿಸಿದ ಸಾವು' ಎಂದೇ ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ದೇಹದಲ್ಲಿ ಯಾವುದೇ ಒದ್ದಾಟದ ಕುರುಹು ಅಥವಾ ಹೊರ ಭಾಗದ ಗಾಯಗಳಿಲ್ಲ. ಅವರ ಉಗುರುಗಳು ಸಹ ಸ್ವಚ್ಛವಾಗಿವೆ. ಇದು ಸ್ಪಷ್ಟವಾಗಿ ಆತ್ಮಹತ್ಯೆಯ ಪ್ರಕರಣ. ಇದರಲ್ಲಿ ಯಾವುದೇ ಬೇರೆ ಕೈವಾಡಗಳು ಇಲ್ಲ ಎಂದು ಐವರು ತಜ್ಞ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ಸಾವಿಗೆ 'Asphyxia' ಕಾರಣ ಎಂದ ಮರಣೋತ್ತರ ಪರೀಕ್ಷೆ ವರದಿ
ವಿಸೇರಾ ಪರೀಕ್ಷಾ ವರದಿ ಹೊರ ಬಂದಿದೆ
ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಸೇರಾ ಪರೀಕ್ಷಾ ವರದಿ ಹೊರ ಬಂದಿದೆ. ಇದರಲ್ಲಿ ಯಾವುದೇ ರೀತಿ ಸಂಚು ಕಂಡು ಬಂದಿಲ್ಲ, ವಿಷಪ್ರಾಶನವಾಗಿಲ್ಲ ಎಂದು ಹೇಳಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಆದರೆ, ಬಲವಂತವಾಗಿ ನೇಣು ಹಾಕಿರುವ ಸಾಧ್ಯತೆ, ಆತ್ಮಹತ್ಯೆಗೆ ಪ್ರಚೋದನೆ, ಮಾನಸಿಕ ಹಿಂಸೆ ನೀಡಿರುವ ಸಾಧ್ಯತೆ ಬಗ್ಗೆ ತನಿಖಾಧಿಕಾರಿಗಳು ಗಮನ ಹರಿಸಿದ್ದು ತನಿಖೆ ಮುಂದುವರೆದಿದೆ.
ಜುಲೈ 1ರಂದು ಜೆಜೆ ಆಸ್ಪತ್ರೆ ನೀಡಿರುವ ವರದಿಯಲ್ಲೇ ವಿಸೇರಾದಲ್ಲಿ ವಿಷ ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ, ಪ್ರಕರಣದ ಸೂಕ್ಷ್ಮತೆ ಹಾಗೂ ಎರಡನೇ ಬಾರಿ ದೃಢಪಡಿಸಿಕೊಳ್ಳಲು ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.
ಸುಶಾಂತ್ ಬ್ಯಾಂಕ್ ವ್ಯವಹಾರ ನಿಭಾಯಿಸುತ್ತಿದ್ದ ರಿಯಾ
ಸುಶಾಂತ್ ಸಿಂಗ್ ಬ್ಯಾಂಕ್ ವ್ಯವಹಾರಗಳನ್ನು ರಿಯಾ ನಿಭಾಯಿಸುತ್ತಿದ್ದಳು, ಆತನ ಡೆಬಿಟ್, ಕ್ರೆಡಿಟ್ ಕಾರ್ಡ್ ಯಥೇಚ್ಛವಾಗಿ ಬಳಸುತ್ತಿದ್ದಳು. ಪದೇ ಪದೇ ಸುಶಾಂತ್ ಫೋನ್ ನಂಬರ್ ಬದಲಾಯಿಸುವಂತೆ ಮಾಡುತ್ತಿದ್ದಳು. ಈ ಮೂಲಕ ಕುಟುಂಬಸ್ಥರು ಸೇರಿದಂತೆ ಯಾರೂ ಆತನ ಬಳಿ ಆಪ್ತರಾಗಿ ಇರಲು ಬಿಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ. ಸುಶಾಂತ್ ಗೆ ಇಷ್ಟಾದರೂ ಆರ್ಥಿಕ ಸಮಸ್ಯೆ ಎದುರಾಗಿರಲಿಲ್ಲ. ಕಷ್ಟದಲ್ಲಿರುವವರಿಗೆ ಸುಶಾಂತ್ ಅಗತ್ಯ ನೆರವು ನೀಡುತ್ತಲೇ ಬಂದಿದ್ದ ಎಂದು ಹೇಳಿದ್ದಾರೆ.
ಮಾನಸಿಕ ಖಿನ್ನತೆಗೆ ರಿಯಾ ಕಾರಣ
ಸುಶಾಂತ್ ಏಕಾಂಗಿತನ, ಒಳ್ಳೆತನವನ್ನು ದುರುಪಯೋಗ ಪಡಿಸಿಕೊಂಡ ರಿಯಾ, ಆತನಿಗೆ ತಪ್ಪು ತಪ್ಪು ಮೆಡಿಸಿನ್ ಕೊಟ್ಟು ಮಾನಸಿಕವಾಗಿ ಹಿಂಸೆ ಅನುಭವಿಸುವಂತೆ ಮಾಡಿದ್ದಾಳೆ. ಮಾನಸಿಕ ಅಸ್ವಸ್ಥ ಎಂದು ಸಾಬೀತು ಮಾಡಿ, ಚಿತ್ರರಂಗದಲ್ಲಿ ಯಾವುದೇ ಆಫರ್ ಸಿಗದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ. ಬಿಹಾರ ಪೊಲೀಸರು ಈ ದೂರಿನ ಬಗ್ಗೆ ಮುಂಬೈನ ಬಾಂದ್ರಾ ಪೊಲೀಸರ ಜೊತೆ ಇನ್ನೂ ಮಾತುಕೆ ನಡೆಸಿಲ್ಲ ಎಂದು ತಿಳಿದು ಬಂದಿದೆ.
ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?