ಚುನಾವಣೆ ಎಂದರೆ ಸೌಂದರ್ಯ ಸ್ಪರ್ಧೆಯಲ್ಲ: ಪ್ರಿಯಾಂಕಾ ಬಗ್ಗೆ ಸುಶೀಲ್ ಮೋದಿ
ಪಾಟ್ನಾ, ಜನವರಿ 28: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಸುದ್ದಿ ಕಿವಿಗೆ ಬಿದ್ದ ತಕ್ಷಣವೇ ಬಿಜೆಪಿಯ ಹಿರಿ-ಕಿರಿ ಮುಖಂಡರಿಂದ ಟೀಕೆ, ಟಿಪ್ಪಣಿ, ಪ್ರತಿಕ್ರಿಯೆ, ವಯಕ್ತಿಕ ವಾಗ್ದಾಳಿ ಆರಂಭವಾಗಿದೆ. ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಬಳಿಕ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಪ್ರಿಯಾಂಕಾ ಗಾಂಧಿ ಸ್ಪರ್ಧೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಚುನಾವಣೆ ಎಂದರೆ ಕುಸ್ತಿ ಪಂದ್ಯವಲ್ಲ ಅಥವಾ ಸೌಂದರ್ಯ ಸ್ಪರ್ಧೆಯೂ ಅಲ್ಲ, ಇನ್ಯಾವುದೇ ರೀತಿ ಸ್ಪರ್ಧೆಯೂ ಅಲ್ಲ' ಎಂದು ಬಿಹಾರದ ಹಿರಿಯ ಮುಖಂಡ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
'ಪ್ರಿಯಾಂಕಾ ಗಾಂಧಿ ಮಾನಸಿಕ ಕಾಯಿಲೆ ಇದೆ, ರಾಜಕೀಯಕ್ಕೆ ಸರಿ ಹೊಂದಲ್ಲ'
ಸುಶೀಲ್ ಮೋದಿ ಅವರ ಪ್ರತಿಕ್ರಿಯೆಯನ್ನು ಖಂಡಿಸಿರುವ ಬಿಹಾರ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ, ಗಾಂಧಿ ಕುಟುಂಬದ ವಿರುದ್ಧ ವಾಕ್ ಪ್ರಹಾರ ನಡೆಸುತ್ತಿರುವುದನ್ನು ನೋಡಿದರೆ, ಬಿಜೆಪಿಗೆ ಸೋಲಿನ ಭಯ ಆರಂಭವಾಗಿದೆ ಎಂದು ಕಾಣುತ್ತದೆ. ಗಾಬರಿ, ಗೊಂದಲದಿಂದ ಅರ್ಥವಿಲ್ಲದ ಹೇಳಿಕೆ ನೀಡುತ್ತಿದೆ.
'ಇದು ರಾಜಕೀಯ ಆಟ, ಇಲ್ಲಿ ಪ್ರಜೆಗಳು ಮತ ಹಾಕುವುದು ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ತೋರಿದ ಕಾರ್ಯಕ್ಷಮತೆ ಆಧಾರದ ಮೇಲೆ ಮಾತ್ರ' ಎಂದು ಹೇಳಿದರು.
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪ್ರಿಯಾಂಕಾ ಗಾಂಧಿ ಬಗ್ಗೆ ಮಾತನಾಡಿ, ಅವರಿಗೆ ಮಾನಸಿಕ ಕಾಯಿಲೆಯಿದೆ. ಹೀಗಾಗಿ, ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿ ಇರಲು ಸಾಧ್ಯವಿಲ್ಲ. ಇದನ್ನು ಬೈಪೋಲಾರ್ ಡಿಸಾರ್ಡರ್ಎಂದು ಕರೆಯಲಾಗುತ್ತದೆ. ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಿಯಾಂಕ ಎಲ್ಲಿಂದ ಸ್ಪರ್ಧೆ? ಇನ್ನಷ್ಟು ಗೊಂದಲ ಹುಟ್ಟುಹಾಕಿದ ಕಾಂಗ್ರೆಸ್ ಟ್ವೀಟ್
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಜನವರಿ 23ರಂದು ಉತ್ತರಪ್ರದೇಶ ಪೂರ್ವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಲಿದ್ದು, ನಂತರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯಿದೆ.
ಉತ್ತರ ಪ್ರದೇಶದ ರಾಯ್ ಬರೇಲಿ ಸೋನಿಯಾ ಗಾಂಧಿ ಅವರ ಕಾಯಂ ಲೋಕಸಭಾ ಕ್ಷೇತ್ರವಾಗಿತ್ತು. ಸತತ ನಾಲ್ಕು ಅವಧಿಗಳಲ್ಲಿ ಸೋನಿಯಾ ಇಲ್ಲಿಂದ ಆರಿಸಿ ಬಂದಿದ್ದಾರೆ. ಈಗ ಅನಾರೋಗ್ಯದ ಕಾರಣ ಸೋನಿಯಾ ಸ್ಪರ್ಧೆಗೆ ಇಳಿಯುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿಯಿಂದ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ.