ನಿತೀಶ್ ಸರಕಾರದ ವಿರುದ್ಧ ಕಣ್ಗಾವಲಿನ ಆರೋಪ ಮಾಡಿದ ಲಾಲೂ ಮಗ, ಹೆಂಡತಿ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರ ಅಧಿಕೃತ ನಿವಾಸದ ಮೇಲ್ಭಾಗದಲ್ಲಿ ಹಾಕಿರುವ ಸಿಸಿಟಿವಿ ಕ್ಯಾಮೆರಾ ಬಗ್ಗೆ ವಿರೋಧ ಪಕ್ಷದ ಮುಖಂಡ- ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಹಕ್ಕನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ರ ಮನೆ ಮುಖ್ಯಮಂತ್ರಿಗಳ ನಿವಾಸದ ಹಿಂಭಾಗದಲ್ಲಿದೆ. ಮಲಗುವ ಕೋಣೆ ಹಾಗೂ ಅಡುಗೆ ಕೋಣೆ ಸೇರಿದಂತೆ ತಮ್ಮ ಮನೆಯ ಎಲ್ಲ ಪ್ರದೇಶವನ್ನು ಆ ಕ್ಯಾಮೆರಾ ಕಾಣಬಹುದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸ್ಫೋಟಕ ಸುದ್ದಿ: ಕೆಲವೇ ದಿನಗಳಲ್ಲಿ ನಿತೀಶ್ ಕುಮಾರ್ ರಾಜೀನಾಮೆ?!
ನಿತೀಶ್ ಜೀ ನೀವು ಹಾಗೂ ಪೊಲೀಸರು ನಿಮ್ಮ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಹಕ್ಕಿದೆ. ಆದರೆ ನಿರಂತರವಾಗಿ ನನ್ನ ಮಲಗುವ ಕೋಣೆಯಲ್ಲಿ ಇಣುಕುವ ಹಕ್ಕಿಲ್ಲ. ಮನೆಯ ಮುಖ್ಯ ಬಾಗಿಲು, ಅಡುಗೆ ಕೋಣೆ, ಗೃಹ ಕಚೇರಿ ಹೀಗೆ ಎಲ್ಲವನ್ನೂ 360 ಡಿಗ್ರಿ ಎಚ್ ಡಿ ಕ್ಯಾಮೆರಾದಲ್ಲಿ ಗಮನಿಸುವ ಹಕ್ಕು ಇಲ್ಲ. ನನ್ನ ಮನೆಯ ಮುಖ್ಯ ಗೇಟ್ ನಲ್ಲೇ ಕ್ಯಾಮೆರಾ ಅಳವಡಿಸಿದರೂ ತಕರಾರಿಲ್ಲ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ಮಗನ ಆರೋಪಕ್ಕೆ ರಾಬ್ರಿ ದೇವಿ ಬೆಂಬಲ
ತೇಜಸ್ವಿ ತಾಯಿ -ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ಕೂಡ ಮಗನಿಗೆ ಬೆಂಬಲ ಸೂಚಿಸಿದ್ದಾರೆ. ಮಾಜಿ ಸಮಾಜ ಕಲ್ಯಾಣ ಸಚಿವ- ಸದ್ಯಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ಬೇಕಾಗಿರುವ ಮಂಜು ವರ್ಮಾ ಬಂಧನಕ್ಕಾಗಿ ಈ ಕ್ಯಾಮೆರಾ ಅಳವಡಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಮಂಜು ವರ್ಮಾ ಮನೆಯಲ್ಲಿದ್ದಾರೆ ಎಂಬ ಅನುಮಾನ
ನನ್ನ ಮಗನ ಮನೆಯಲ್ಲಿ ಮಂಜು ವರ್ಮಾ ಅಡಗಿಕೊಂಡಿರಬಹುದು ಅಂತೇನಾದರೂ ಅವರು (ನಿತೀಶ್ ಕುಮಾರ್) ಅಂದುಕೊಂಡಿದ್ದಾರಾ? ಅದೇ ಕ್ಯಾಮೆರಾವನ್ನು ನಿತೀಶ್ ಅವರ ಮನೆಯಲ್ಲಿ ಅಳವಡಿಸಿದ್ದರೆ ಮಾಜಿ ಸಚಿವರು ಈಗಾಗಲೇ ಕಂಬಿ ಹಿಂದೆ ಇರುತ್ತಿದ್ದರು ಎಂದು ರಾಬ್ರಿದೇವಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು, ಸಹೋದ್ಯೋಗಿಗಳಿಂದ ಕಣ್ಗಾವಲು
ಮಂಜು ವರ್ಮಾರನ್ನು ಬಂಧನ ಸಾಧ್ಯವಿಲ್ಲ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಖಾರವಾಗಿ ಪ್ರತಿಕ್ರಿಯೆ ನೀಡಿತ್ತು. ಸುಪ್ರೀಂ ಕೋರ್ಟ್ ಮುಂದೆ ಹಾಜರಿರುವಂತೆ ಡಿಜಿಪಿ (ಡೈರೆಕ್ಟರ್ ಜನರಲ್ ಆಫ್ ಪೊಲೀಸ್)ಗೆ ಸೂಚಿಸಲಾಗಿತ್ತು. "ತೇಜಸ್ವಿ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಅದಕ್ಕಾಗಿಯೇ ಮುಖ್ಯಮಂತ್ರಿಗಳು ಹಾಗೂ ಅವರ ಸಹೋದ್ಯೋಗಿಗಳು ಕಣ್ಗಾವಲು ಇರಿಸಿದ್ದಾರೆ. ಯಾದವ್ ಸಹೋದರರು ಹಾಗೂ ರಾಬ್ರಿ ದೇವಿ ಅವರ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ" ಎಂದು ಆರ್ ಜೆಡಿ ವಕ್ತಾರ ಭಾಯ್ ವೀರೇಂದ್ರ ಹೇಳಿದ್ದಾರೆ.
ಓದು-ಬರಹ ಇಲ್ಲದವರಿಗೆ ಸುರಕ್ಷತೆ ಬಗ್ಗೆ ಏನು ಗೊತ್ತು?
ಆದರೆ, ತೇಜಸ್ವಿ ಆರೋಪವನ್ನು ಆಡಳಿತಾರೂಢ ಜನತಾ ದಳ ತಳ್ಳಿಹಾಕಿದೆ. ಕ್ರೈಂ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುವ ಹಕ್ಕು ತೇಜಸ್ವಿಗೆ ಇಲ್ಲ. ಯಾರು ಹೆಚ್ಚಿಗೆ ಓದು-ಬರಹ ಇರಲ್ಲವೋ ಅಂಥವರು ಇಂಥ ಮಾತನಾಡುತ್ತಾರೆ ಎಂದು ಜೆಡಿಯು ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ. ಹೈಸ್ಕೂಲ್ ಬಿಟ್ಟ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಗಳ ಭದ್ರತೆ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಅಂಥ ಪ್ರಾಶಸ್ತ್ಯ ಇಲ್ಲ ಎಂದಿದ್ದಾರೆ.