ಕೇಂದ್ರವೇ ಸಚಿನ್ ಅವರನ್ನು ಕಣಕ್ಕಿಳಿಸಿದೆ; ಆರ್ಜೆಡಿ ಮುಖಂಡನ ಆರೋಪ
ಪಾಟ್ನಾ, ಫೆಬ್ರುವರಿ 06: ರೈತರ ಪ್ರತಿಭಟನೆಗೆ ಅಂತರರಾಷ್ಟ್ರೀಯ ಬೆಂಬಲ ದೊರೆಯುತ್ತಿದ್ದಂತೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಕೇಂದ್ರ ಸರ್ಕಾರ ಕಣಕ್ಕಿಳಿಸಿದೆ ಎಂದು ಆರ್ ಜೆಡಿ ಮುಖಂಡ ಶಿವಾನಂದ ತಿವಾರಿ ಆರೋಪ ಮಾಡಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ಬೆಂಬಲಿಸಿ ಕೆಲವು ಅಂತರರಾಷ್ಟ್ರೀಯ ತಾರೆಗಳು ಟ್ವೀಟ್ ಮಾಡುತ್ತಿದ್ದಂತೆ ದೇಶದ ತಾರೆಗಳು ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಾನಂದ ತಿವಾರಿ ಕೇಂದ್ರ ಸರ್ಕಾರದ ಕುರಿತು ಟೀಕೆ ಮಾಡಿದ್ದಾರೆ. ಕೇಂದ್ರ ಸರ್ಕಾರವೇ ಇವರನ್ನು ಕಣಕ್ಕಿಳಿಸಿದಂತಿದೆ ಎಂದು ದೂರಿದ್ದಾರೆ. ಮುಂದೆ ಓದಿ...

"ಜಗತ್ತು ಕಣ್ಣು ಮುಚ್ಚಿ ಕುಳಿತಿದೆಯೇ?"
ಕೇಂದ್ರ ಸರ್ಕಾರವೇ ರೈತರ ಪ್ರತಿಭಟನೆಗೆ ಬರುತ್ತಿರುವ ಬೆಂಬಲ ಕಂಡು ಕೆಲವರನ್ನು ಕಣಕ್ಕಿಳಿಸಿದೆ. ಇದು ದೇಶಕ್ಕೇ ಅವಮಾನಕರ ಸಂಗತಿ ಎಂದು ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ನಂಥವರು ಈ ರೀತಿ ಹೇಳಿಕೆ ನೀಡಿದರೆ ರೈತರ ಹೋರಾಟಕ್ಕೆ ಜಗತ್ತು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತದೆ ಎಂದು ಕೇಂದ್ರ ಬಯಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ರೈತರ ಪ್ರತಿಭಟನೆ ಬೆಂಬಲಿಸಿದ ರಿಹಾನಾ, ಗ್ರೆಟಾ ಥನ್ ಬರ್ಗ್
ರೈತರ ಪ್ರತಿಭಟನೆಗೆ ಖ್ಯಾತ ಪಾಪ್ ತಾರೆ ರಿಹಾನಾ ಹಾಗೂ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್ ಟ್ವೀಟ್ ಮಾಡುತ್ತಿದ್ದಂತೆ, ಕೇಂದ್ರ ವಿದೇಶಾಂಗ ವ್ಯವಹಾರ, ಇದು ದೇಶದ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳ ಸಂಚು ಎಂದು ದೂರಿತ್ತು. ನಂತರ ಬಾಲಿವುಡ್ ತಾರೆಗಳಾದ ಅಕ್ಷಯ್ ಕುಮಾರ್, ಅಜಯ್ ದೇವಗನ್ ಕೇಂದ್ರದ ಈ ಹೇಳಿಕೆ ಬೆಂಬಲಿಸಿ ಟ್ವಿಟ್ಟರ್ ನಲ್ಲಿ ಇಂಡಿಯಾ ಟುಗೆದರ್, ಇಂಡಿಯಾ ಅಗೇನ್ಸ್ಟ್ ಪ್ರೊಪೊಗಾಂಡಾ ಹ್ಯಾಷ್ ಟ್ಯಾಗ್ ಗಳನ್ನು ಸೃಷ್ಟಿಸಿ ಬೆಂಬಲ ವ್ಯಕ್ತಪಡಿಸಿದ್ದರು. ಆನಂತರ ಕ್ರಿಕೆಟಿಗರಾದ ಸಚಿನ್ ತಂಡೂಲ್ಕರ್, ರವಿಶಾಸ್ತ್ರಿ, ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ಅವರು ಈ ಹ್ಯಾಷ್ ಟ್ಯಾಗ್ ಗೆ ಸೇರಿದ್ದರು.

ಸಚಿನ್ ಟ್ವೀಟ್ ನಲ್ಲೇನಿತ್ತು?
"ಭಾರತದ ಸಾರ್ವಭೌಮತ್ವದೊಂದಿಗೆ ರಾಜಿಯಾಗಲು ಸಾಧ್ಯವಿಲ್ಲ. ಹೊರಗಿನವರು ಪ್ರೇಕ್ಷಕರಾಗಬಹುದು ಆದರೆ ಇಲ್ಲಿನವರಲ್ಲ. ಭಾರತಕ್ಕೆ ಭಾರತ ಏನೆಂದು ಗೊತ್ತು ಹಾಗು ಏನು ಮಾಡಬೇಕೆಂಬುದು ತಿಳಿದಿದೆ. ಒಂದು ರಾಷ್ಟ್ರವಾಗಿ ನಾವೆಲ್ಲರೂ ಉಳಿಯೋಣ" ಎಂದು ಸಚಿನ್ ತೆಂಡೂಲ್ಕರ್ ಫೆಬ್ರುವರಿ 3ರಂದು ಟ್ವೀಟ್ ಮಾಡಿದ್ದರು.

"ರೈತರಿಗೆ ಟ್ವಿಟ್ಟರ್ ಎಂಬುದು ಗೊತ್ತಿಲ್ಲ"
ರೈತರಿಗೆ ಈ ಟ್ವಿಟ್ಟರ್ ಎಂಬುದು ಗೊತ್ತಿಲ್ಲ. ಈ ಟ್ವಿಟ್ಟರ್ ರಾಜಕೀಯ ಈಚೆಗೆ ಶುರುವಾಗಿ ಈಗ ಎಲ್ಲರೂ ಟ್ವೀಟ್ ಮಾಡುತ್ತಿದ್ದಾರೆ. ರೈತರಿಗೆ ಗ್ರೆಟಾ ಥನ್ ಬರ್ಗ್, ರಿಹಾನಾ ಯಾರೆಂದು ಗೊತ್ತಿಲ್ಲ. ಆದರೆ ನೀವು ರೈತರ ವಿರುದ್ಧ ಸಚಿನ್ ತಂಡೂಲ್ಕರ್ ಅವರನ್ನು ಕಣಕ್ಕಿಳಿಸಿದ್ದೀರ ಎಂದು ಆರೋಪಿಸಿದ್ದಾರೆ.
ಆದರೆ ಶಿವಾನಂದ ತಿವಾರಿ ಹೇಳಿಕೆಯಿಂದ ಆರ್ ಜೆಡಿ ಅಂತರ ಕಾಯ್ದುಕೊಂಡು, ಈ ಹೇಳಿಕೆ ತಿವಾರಿ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದೆ. "ಈಚೆಗೆ ಶಿವಾನಂದ ತಿವಾರಿಯವರು ನಿರಾಶೆಗೊಂಡ ವಿರೋಧ ಪಕ್ಷದ ನಾಯಕರ ಗುಂಪನ್ನು ಪ್ರತಿನಿಧಿಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಕುರಿತು ಶಿವಾನಂದ್ ಅಭಿಪ್ರಾಯ ಅಸಂಬ್ಧ. ಅವರು ದೇಶದ ಜನರಲ್ಲಿ ಕ್ಷಮ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.












Click it and Unblock the Notifications