ಸುಶಾಂತ್ ಸಿಂಗ್ ಆತ್ಮಹತ್ಯೆ: ಸಲ್ಮಾನ್ ಖಾನ್ ಸೇರಿ 8 ಮಂದಿ ವಿರುದ್ಧ ಕೇಸ್
ಪಾಟ್ನಾ, ಜೂನ್ 17: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿ ಬಂದಿದೆ. ಯಶಸ್ವಿ ನಟನಾಗಿದ್ದರೂ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದರ ಹಿಂದಿನ ಸತ್ಯವೇನು ಎಂಬುದು ಬಿಟೌನ್ನಲ್ಲಿ ಚರ್ಚೆಯಾಗ್ತಿದೆ.
ಸುಶಾಂತ್ ಸಿಂಗ್ನದ್ದು ಆತ್ಮಹತ್ಯೆಯಲ್ಲ ಯೋಜಿತ ಕೊಲೆ: ನಟಿ ಕಂಗನಾ ರಣಾವತ್
ಈ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್, ನಿರ್ಮಾಪಕ ಕರಣ್ ಜೋಹರ್ ಸೇರಿ ಏಂಟು ಮಂದಿ ವಿರುದ್ಧ ಬಿಹಾರ್ ಕೋರ್ಟ್ನಲ್ಲಿ ಕೇಸ್ ದಾಖಲಾಗಿದೆ. ಅಷ್ಟಕ್ಕೂ, ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಸಲ್ಮಾನ್ ಖಾನ್, ಕರಣ್ ವಿರುದ್ಧ ಏಕೆ ದೂರು? ಮುಂದೆ ಓದಿ...
ಏಂಟು ಜನರ ವಿರುದ್ಧ ಕೇಸ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್, ನಿರ್ಮಾಪಕ ಕರಣ್ ಜೋಹರ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಸೇರಿ ಏಂಟು ಜನರ ವಿರುದ್ಧ ವಕೀಲ ಸುಧೀರ್ ಕುಮಾರ್ ಓಜಾ ಎಂಬುವವರು ಬಿಹಾರದ ಮುಜಫರ್ಪುರ್ ನ್ಯಾಯಾಲಯದಲ್ಲಿ ಐಪಿಸಿಯ ಸೆಕ್ಷನ್ 306, 109, 504 ಮತ್ತು 506 ರ ಅಡಿಯಲ್ಲಿ ಮೊಕದ್ದಮೆ ಹೂಡಿದ್ದಾರೆ.
|
ಆತ್ಮಹತ್ಯೆಗೆ ಪ್ರಚೋದನೆ ಆರೋಪ
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುವಂತಹ ಸನ್ನಿವೇಶವನ್ನು ಇವರು ನಿರ್ಮಿಸಿದ್ದರು ಎಂದು ವಕೀಲ ದೂರಿದ್ದಾರೆ. ''ಸುಶಾಂತ್ ಸಿಂಗ್ ಅಭಿನಯಿಸಬೇಕಿದ್ದ ಏಳು ಚಿತ್ರಗಳಿಂದ ಅವರನ್ನು ತೆಗೆದು ಹಾಕಲಾಯಿತು. ಹಾಗೂ ಅವರ ನಟಿಸಿರುವ ಹಲವು ಚಿತ್ರಗಳು ಬಿಡುಗಡೆಯಾಗಲಿಲ್ಲ. ತೀವ್ರವಾಗಿ ಅವರಿಗೆ ಹಿಂಸೆ ನೀಡಿ ಸಾವಿಗೆ ಕಾರಣವಾಗಿದ್ದಾರೆ'' ಎಂದು ವಕೀಲ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಶಾಂತ್ ಕಷ್ಟದಲ್ಲಿದ್ದಾಗ ಯಾರು ಕೇಳಲಿಲ್ಲ: ಬಾಲಿವುಡ್ ವಿರುದ್ಧ ಕೆಂಡಕಾರಿದ ಕೇಶ ವಿನ್ಯಾಸಕಿ
ಬಾಲಿವುಡ್ ಪ್ರಭಾವಿಗಳ ವಿರುದ್ಧ ಟೀಕೆ
ಸುಶಾಂತ್ ಸಿಂಗ್ ಅವರ ಆತ್ಮಹತ್ಯೆಗೆ ಬಾಲಿವುಡ್ನ ಕೆಲವು ಪ್ರಭಾವಿಗಳು ನೇರ ಕಾರಣ ಎಂದು ನಿರ್ದೇಶಕ, ನಿರ್ಮಾಪಕ ಹಾಗೂ ನಟ-ನಟಿಯರು ಆರೋಪಿಸುತ್ತಿದ್ದಾರೆ. ಕರಣ್ ಜೋಹರ್, ಏಕ್ತಾ ಕಪೂರ್ ಅವರು ಅವಕಾಶ ನೀಡುವುದ ನಂಬಿಸಿ ಸಿನಿಮಾ ಕೊಟ್ಟಿಲ್ಲ, ತುಂಬಾ ಅಲೆದಾಡಿಸಿದ್ದರು ಎಂಬ ಆರೋಪ ಇದೆ. ಸುಶಾಂತ್ ಅವರನ್ನು ಉದ್ದೇಶಪೂರ್ವಕವಾಗಿ ತುಳಿಯುವ ಪ್ರಯತ್ನ ಆಗಿದೆ ಎಂದು ಶೇಖರ್ ಕಪೂರ್, ಸಂಜಯ್ ನಿರುಪಮ್ ಸೇರಿದಂತೆ ಹಲವರು ಟೀಕಿಸಿದ್ದಾರೆ.
ಸುಶಾಂತ್ ಅವರದ್ದು ಕೊಲೆ ಎಂದ ಕಂಗನಾ
ಸುಶಾಂತ್ ಸಿಂಗ್ ರಜಪೂತ್ ಅವರದ್ದು ಯೋಜಿತ ಕೊಲೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ. ಅದ್ಭುತ ಸಿನಿಮಾಗಳನ್ನು ಮಾಡಿದರೂ ಸುಶಾಂತ್ ಗೆ ಸೂಕ್ತ ಮನ್ನಣೆ ಸಿಗಲಿಲ್ಲ. ಸ್ವತಃ ಸುಶಾಂತ್ ಹಲವು ಸಲ ಹೇಳಿಕೊಂಡಿದ್ದರು. ಬಾಲಿವುಡ್ ತನ್ನವನೆಂದು ನೋಡುತ್ತಿಲ್ಲ, ಹೊರಗಿನವನು ಎಂದು ನಡೆಸಿಕೊಳ್ಳುತ್ತಿದೆ. ಪ್ರಭಾವಿ ಮಕ್ಕಳ ಚಿತ್ರಗಳಿಗಾಗಿ ಪ್ರತಿಭಾನ್ವಿತರನ್ನು ತುಳಿಯಲಾಗುತ್ತಿದೆ ಎಂದು ಕಂಗನಾ ಆಕ್ರೋಶ ಹೊರಹಾಕಿದ್ದರು.