ಟಿಕೆಟ್ ರೇಸ್: ಮಾಜಿ ಕಾನ್ಸ್ ಟೇಬಲ್ ಮುಂದೆ ಸೋತ ಮಾಜಿ ಡಿಜಿಪಿ
ಪಾಟ್ನಾ, ಆಕ್ಟೋಬರ್.10: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ರೇಸ್ ಶುರುವಾಗಿದೆ. ಆಕಾಂಕ್ಷಿಗಳ ಪೈಪೋಟಿಯಲ್ಲಿ ಮಾಜಿ ಕಾನ್ಸ್ ಟೇಬಲ್ ವೊಬ್ಬರು ಮಾಜಿ ಪೊಲೀಸ್ ಮಹಾನಿರ್ದೇಶಕರನ್ನೇ ಹಿಂದಿಕ್ಕಿದ ಘಟನೆ ರಾಜಕೀಯದ ಕೌತಕಗಳಲ್ಲಿ ಒಂದಾಗಿದೆ.
ಬಕ್ಸಾರ್ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಕನಸು ಕಂಡಿದ್ದ ಗುಪ್ತೇಶ್ವರ ಪಾಂಡೆ ಹಿರಿಯ ಪೊಲೀಸ್ ಮಹಾನಿರ್ದೇಶಕ ಹುದ್ದೆಯಿಂದ ಸ್ವಯಂನಿವೃತ್ತಿ ಪಡೆದುಕೊಂಡಿದ್ದರು. ಆದರೆ, ಹುಟ್ಟೂರಿನಲ್ಲಿ ರಾಜಕೀಯ ಜೀವನ ಶುರು ಮಾಡಬೇಕೆಂಬ ಅವರ ಕನಸು ಟಿಕೆಟ್ ಕೈತಪ್ಪುವ ಮೂಲಕ ಕಮರಿ ಹೋಗಿದೆ.
ಬಿಹಾರ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಪೈಕಿ ಬಕ್ಸಾರ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಈ ಬಾರಿ ಬಕ್ಸಾರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಹಾರದ ಮಾಜಿ ಕಾನ್ಸ್ ಟೇಬಲ್ ಪರಶುರಾಮ್ ಚತುರ್ವೇದಿಯವರನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ಬಕ್ಸಾರ್ ಕ್ಷೇತ್ರದ ಟಿಕೆಟ್ ರೇಸ್ ನಲ್ಲಿ ಮಾಜಿ ಕಾನ್ಸ್ ಟೇಬಲ್ ಒಬ್ಬರು ಬಿಹಾರದ ಮಾಜಿ ಡಿಜಿಪಿಯವರನ್ನೇ ಹಿಂದಿಕ್ಕಿದ್ದಾರೆ.

ಬಿಜೆಪಿಗೆ ಧನ್ಯವಾದ ಅರ್ಪಿಸಿದ ಮಾಜಿ ಕಾನ್ಸ್ ಟೇಬಲ್
ಡಿಜಿಪಿ ಗುಪ್ತೇಶ್ವರ ಪಾಂಡೆ ಅವರು ನನ್ನ ಹಿರಿಯ ಸಹೋದರನ ಸಮನಾದವರು. ಅವರ ಪಾದವನ್ನು ಗೌರವದಿಂದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಪರಶುರಾಮ್ ಚತುರ್ವೇದಿ ತಿಳಿಸಿದ್ದಾರೆ. ಜೊತೆಗೆ ತಮಗೆ ಟಿಕೆಟ್ ನೀಡಿದ ಭಾರತೀಯ ಜನತಾ ಪಕ್ಷಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಸಿಕ್ಕ ಗೌರವ
ಬಿಹಾರ ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದ ಸಂದರ್ಭದಲ್ಲಿ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. "ಕೆಲಸ ಮಾಡಿದ ಎಲ್ಲೆಡೆ ನಾನು ಶ್ರದ್ಧೆ ಮತ್ತು ಪ್ರಾಮಾಣಿಕ ಎಂದು ನನ್ನನ್ನು ಗೌರವಿಸಲಾಯಿತು. ಈ ಅನುಭವವು ರಾಜಕೀಯದಲ್ಲಿ ಸಹಾಯಕ್ಕೆ ಬರಲಿದೆ ಎಂದು ಬಿಜೆಪಿ ಅಭ್ಯರ್ಥಿ ಪರಶುರಾಮ್ ಚತುರ್ವೇದಿ ತಿಳಿಸಿದ್ದಾರೆ. ಜೊತೆಗೆ ಬಕ್ಸಾರ್ ಚುನಾವಣೆಯಲ್ಲಿ ಖಂಡಿತವಾಗಿ ತಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಜಿಪಿ ಹುದ್ದೆಯಿಂದ ಸ್ವಯಂನಿವೃತ್ತಿ ಪಡೆದು ಜೆಡಿಯು ಪ್ರವೇಶ
ಕಳೆದ ತಿಂಗಳು ಬಿಹಾರ ಪೊಲೀಸ್ ಮಹಾನಿರ್ದೇಶಕ ಹುದ್ದೆಯಿಂದ ಸ್ವಯಂನಿವೃತ್ತಿ ಘೋಶಿಸಿದ ಗುಪ್ತೇಶ್ವರ ಪಾಂಡೆ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಸೇರಿಕೊಂಡಿದ್ದರು. ಬಕ್ಸಾರ್ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸುವ ಅಭಿಲಾಶೆ ಹೊಂದಿದ್ದರು. ಆದರೆ ಇತ್ತೀಚಿಗೆ ಅಕ್ಟೋಬರ್.28ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಜೆಡಿಯು ಬಿಡುಗಡೆಗೊಳಿಸಿದ 11 ಮಂದಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಗುಪ್ತೇಶ್ವರ ಪಾಂಡೆ ಅವರ ಹೆಸರೇ ಇರಲಿಲ್ಲ. ಜೆಡಿಯು ಬದಲಿಗೆ ಬಕ್ಸಾರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಲಾಗಿತ್ತು.

ಪರಮಾಪ್ತರು, ಬೆಂಬಲಿಗರು ನಿರಾಶರಾಗಬೇಡಿ ಎಂದು ಪೋಸ್ಟ್
"ಬಕ್ಸಾರ್ ವಿಧಾನಸಭಾ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುತ್ತಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ತಮ್ಮ ಪರಮಾಪ್ತರು, ಬೆಂಬಲಿಗರು ಕರೆ ಮಾಡಿ ವಿಚಾರಿಸಿದರು. ಈ ವೇಳೆ ನನಗೆ ತುಂಬಾ ನೋವಾಯಿತು. ಅವರ ಬೇಸರ ಮತ್ತು ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲ. ಬಳಿಕ ಅವರನ್ನು ನಾನೇ ಸಮಾಧಾನಪಡಿಸಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವುದಂತೂ ಖಂಡಿತ, ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುತ್ತಿಲ್ಲ. ಇಲ್ಲಿ ನಿರಾಶರಾಗುವ ಅಗತ್ಯವಿಲ್ಲ. ನಾನು ಹೋರಾಟದಲ್ಲೇ ಬದುಕು ಸಾಗಿಸಿಕೊಂಡು ಬಂದವನಾಗಿದ್ದು, ತಾಳ್ಮೆಯಿಂದಾ ಕಾಯುತ್ತೇನೆ" ಎಂದು ಗುಪ್ತೇಶ್ವರ ಪಾಂಡೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications