Breaking: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 50 ಸ್ಥಾನ; ನಿತೀಶ್
ಪಾಟ್ನಾ, ಸೆ.04: 2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) 50 ಸ್ಥಾನಗಳಿಗೆ ಇಳಿಯಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನುದ್ದೇಶಿಸಿ ಮಾತನಾಡಿದ ವೇಳೆ ನಿತೀಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ. ಜೊತೆಗೆ ದೇಶದ ವಿರೋಧ ಪಕ್ಷದ ನಾಯಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಬಿಹಾರ ಮುಖ್ಯಮಂತ್ರಿ ಹೇಳಿದರು.
ಕೆ. ಚಂದ್ರಶೇಖರ್ ರಾವ್-ನಿತೀಶ್ ಕುಮಾರ್ ಭೇಟಿ : ತೃತೀಯ ರಂಗ ರಚನೆಯ ಬಗ್ಗೆ ಚರ್ಚೆ?
"ನಾವು ದೇಶದಲ್ಲಿ ವಿರೋಧ ಪಕ್ಷದ ನಾಯಕರನ್ನು ಒಗ್ಗೂಡಿಸಲು ಕೆಲಸ ಮಾಡುತ್ತಿದ್ದೇವೆ. ನಾವು ಕೆಲವು ದಿನಗಳ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರೊಂದಿಗೆ ಸಂವಾದ ನಡೆಸಿದ್ದೇವೆ. ನಾನು ನಿಯಮಿತವಾಗಿ ವಿರೋಧ ಪಕ್ಷಗಳ ನಾಯಕರೊಂದಿಗೆ ದೂರವಾಣಿಯಲ್ಲಿ ಸಂವಹನ ನಡೆಸುತ್ತಿದ್ದೇನೆ. ವಿರೋಧ ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಿದರೆ, ಅವರು ಬಿಜೆಪಿಯನ್ನು ಸುಮಾರು 50 ಸ್ಥಾನಗಳಿಗೆ ಇಳಿಸುತ್ತಾರೆ" ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.
"ವಿರೋಧ ಪಕ್ಷಗಳ ಪ್ರತಿಯೊಬ್ಬ ನಾಯಕರನ್ನು ಭೇಟಿ ಮಾಡಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ದೇಶದ ವಿರೋಧ ಪಕ್ಷದ ನಾಯಕರನ್ನು ಒಗ್ಗೂಡಿಸುವ ಅಭಿಯಾನವನ್ನು ಆರಂಭಿಸುತ್ತೇನೆ" ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಿಹಾರ ಭೇಟಿಯನ್ನು ಉಲ್ಲೇಖಿಸಿದ ನಿತೀಶ್ ಕುಮಾರ್, "ಗೃಹ ಸಚಿವರು ಕೋಮು ಶಾಂತಿ ಕದಡಲು ಬಿಹಾರಕ್ಕೆ ಬಂದಿದ್ದಾರೆ" ಎಂದು ಆರೋಪಿಸಿದರು.
"ಅವರು ಸೀಮಾಂಚಲ್ ಪ್ರದೇಶದಲ್ಲಿ ನಡೆಯುವ ದಸರಾ ಸಂದರ್ಭದಲ್ಲಿ ಬಿಹಾರಕ್ಕೆ ಬರುತ್ತಿದ್ದಾರೆ. ಅದಕ್ಕೆ ಕಾರಣವೇನು? ಅವರು ಬಿಹಾರದ ಸಹೋದರತ್ವವನ್ನು ಕದಡಲು ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಬಯಸುತ್ತಾರೆ. ಮುಂದಿನ ಎರಡು ವರ್ಷಗಳವರೆಗೆ ಜಾಗರೂಕರಾಗಿರಲು ನಾನು ಜೆಡಿಯುನ ಪ್ರತಿಯೊಬ್ಬ ಸದಸ್ಯರಿಗೆ ಮನವಿ ಮಾಡಲು ಬಯಸುತ್ತೇನೆ. ಅವರು ನಮ್ಮ ವಿರುದ್ಧ ಪಿತೂರಿ ನಡೆಸುತ್ತಾರೆ. ನಾವು ಪಿತೂರಿಯನ್ನು ಗುರುತಿಸಿ ಅದನ್ನು ನಿಭಾಯಿಸಬೇಕಾಗಿದೆ" ಎಂದು ಕುಮಾರ್ ಹೇಳಿದರು.
"2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಜೆಡಿ-ಯು ಸಹಾಯದಿಂದ ಬಿಜೆಪಿ ಬಿಹಾರದಲ್ಲಿ ಗೆದ್ದಿತು. ಆದರೆ, 2020 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿ-ಯು ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಗೆ ಸಹಾಯ ಮಾಡಿದೆ. ಆದರೆ, ನಮ್ಮನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿ ಅವರು ತಮ್ಮ ಮತಗಳನ್ನು ಇತರ ಪಕ್ಷಗಳಿಗೆ ವರ್ಗಾಯಿಸಿದರು. ಇದರಿಂದಾಗಿ ನಾವು 43ಕ್ಕೆ ತಲುಪಿದ್ದೇವೆ" ಎಂದು ಕಿಡಿ ಕಾರಿದರು.
''ದೇಶದಲ್ಲಿ ಬಿಜೆಪಿ ದ್ವೇಷ ಮತ್ತು ಕೋಮುವಾದಿ ರಾಜಕಾರಣವನ್ನು ಆರಂಭಿಸಿದೆ. ನಾನು ಈಗ ಬಿಜೆಪಿಯನ್ನು ಎದುರಿಸಲು ರಣರಂಗಕ್ಕೆ ಬರುತ್ತಿದ್ದೇನೆ. ನಾನು ಯಾವುದೇ ಕೆಲಸಕ್ಕೆ ಸಂಕಲ್ಪ ಮಾಡಿದಾಗ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂಬುದು ನಿಮಗೆ ತಿಳಿದಿದೆ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪಾಟ್ನಾದಲ್ಲಿ ಭೇಟಿಯಾದರು. ಭಾರತೀಯ ಜನತಾ ಪಕ್ಷದ ವಿರುದ್ಧ ಸಮಾನ ಮನಸ್ಕ ಪಕ್ಷಗಳ ಮೈತ್ರಿಯನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕೆಸಿಆರ್ ದೇಶಾದ್ಯಂತ ವಿಪಕ್ಷಗಳ ನಾಯಕರನ್ನು ಭೇಟಿಯಾಗುತ್ತಿದ್ದಾರೆ.