ಆರ್ ಜೆ ಡಿ ಹಿರಿಯ ನಾಯಕ ರಘುವಂಶ್ ಪ್ರಸಾದ್ ರಾಜೀನಾಮೆ
ಪಾಟ್ನಾ, ಸೆ. 10: ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರು ಪಕ್ಷದ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಘುವಂಶ್ ಪ್ರಸಾದ್ ಅವರು ಸದ್ಯ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ರಾಜೀನಾಮೆ ಪತ್ರವನ್ನುಅಲ್ಲಿಂದಲೇ ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರಿಗೆ ಕಳಿಸಿದ್ದಾರೆ.
ಜನ್ನಾಯಕ್ ಕರ್ಪುರಿ ಠಾಕೂರ್ ಅವರ ನಿಧನ ನಂತರ ನಾನು ನಿಮ್ಮ ಬೆಂಬಲಕ್ಕೆ ನಾನು ಕಳೆದ 32ವರ್ಷಗಳಿಂದ ನಿಂತಿದ್ದೇನೆ. ಆದರೆ ಈಗ ನಾನು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಮೇಲಿನ ಅಭಿಮಾನ ಪೂರ್ವಕ ವಂದನೆ ಸಲ್ಲಿಸಿ, ತೊರೆಯುತ್ತಿದ್ದೇನೆ, ಕ್ಷಮಿಸಿ ಎಂಬರ್ಥದಲ್ಲಿ ಪತ್ರ ಬರೆದು ಸಹಿ ಹಾಕಿದಾರೆ.
ಆರ್ ಜೆ ಡಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಕಳೆದ ಜೂನ್ ತಿಂಗಳಿನಲ್ಲೇ ರಾಜೀನಾಮೆ ಸಲ್ಲಿಸಿದ್ದರು. ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿರುವ ರಘುವಂಶ್ ಅವರನ್ನು ಪಾಟ್ನಾದಿಂದ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಗೆ ಸೇರಿಸಲಾಗಿತ್ತು. ಬುಧವಾರದಂದು ಐಸಿಯುಗೆ ಶಿಫ್ಟ್ ಮಾಡಲಾಗಿದೆ.

75 ವರ್ಷ ವಯಸ್ಸಿನ ರಘುವಂಶ್ ಪ್ರಸಾದ್ ಅವರು ತೇಜಸ್ವಿ ಯಾದವ್ ರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಪ್ರತಿಭಟಿಸಿದ್ದರು.

ರಾಜ್ಯಸಭಾ ಟಿಕೆಟ್ ಕಳೆದುಕೊಂಡಿದ್ದ ರಘುವಂಶ್ ಅವರು ತಮ್ಮ ರಾಜಕೀಯ ವೈರಿ ರಾಮಾ ಸಿಂಗ್ ಅವರನ್ನು ಆರ್ ಜೆ ಡಿಗೆ ಸೇರಿಸಿಕೊಳ್ಳುವ ವಿಷಯದ ಬಗ್ಗೆ ಭಾರಿ ಕೋಲಾಹಲ ಮೂಡಿಸಿದ್ದರು. ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್ ಜೆ ಡಿ ಪರ ಪ್ರಭಾವ ಬೀರಬಲ್ಲ ಮುಖಂಡ ಎನಿಸಿಕೊಂಡಿದ್ದ ರಘುವಂಶ್ ಅವರು ರಾಜೀನಾಮೆ ಸಲ್ಲಿಸಿರುವುದು ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ.












Click it and Unblock the Notifications