ನೀರಿಗಾಗಿ 3 ಕಿ. ಮೀ. ಕಾಲುವೆ ತೋಡಿದ ಆಧುನಿಕ ಭಗೀರಥ!
ಪಾಟ್ನಾ, ಸೆಪ್ಟೆಂಬರ್ 13: ತಮ್ಮ ಗ್ರಾಮದ ಜಮೀನುಗಳಿಗೆ ನೆರವಾಗಲಿ ಎಂದು ರೈತರೊಬ್ಬರು 3 ಕಿ. ಮೀ. ದೂರದ ಕಾಲುವೆ ತೋಡಿ ನೀರು ತಂದಿದ್ದಾರೆ. ದನ ಮೇಯಿಸಲು ಹೋಗುತ್ತಿದ್ದಾತ 30 ವರ್ಷಗಳ ಕಾಲ ಕಾಲುವೆ ತೋಡುವ ಕೆಲಸ ಮಾಡಿದ್ದಾರೆ.
ಲೌಂಗಿ ಭಯಿಯಾನ್ ಗ್ರಾಮಸ್ಥರಿಗೆ ಸಹಾಯಕವಾಗಲಿ ಎಂದು ಕಾಲುವೆ ತೋಡಿದ ಸಾಹಸಿಗರು. ಗಯಾದ ಲುಥುವಾ ಪ್ರದೇಶದಲ್ಲಿ ಬರುವ ಕೊಥಿಲವಾ ಗ್ರಾಮದ ನಿವಾಸಿಯಾದ ಲೌಂಗಿ ದನ ಮೇಯಿಸುವ ಕೆಲಸ ಮಾಡುತ್ತಾರೆ.
ಗ್ರಾಮದಲ್ಲಿನ ನೀರಿನ ಅಭಾವವನ್ನು ಕಂಡಿದ್ದ ಲೌಂಗಿ ಭಯಿಯಾನ್ ಸಮೀಪದಲ್ಲಿನ ಬೆಟ್ಟದ ಇಳಿಜಾರಿಗೆ ಅನುಗುಣವಾಗಿ 3 ಕಿ. ಮೀ. ಕಾಲುವೆ ತೋಡಿದ್ದಾರೆ. ಇದರಿಂದಾಗಿ ಬೆಟ್ಟದಿಂದ ಹರಿಯುವ ನೀರು ಗ್ರಾಮದ ಸಮೀಪದ ಕೆರೆಯಲ್ಲಿ ಶೇಖರಣೆಯಾಗುತ್ತದೆ.

"ಗ್ರಾಮದ ಜನರು ನೀರಿನ ಕೊರತೆ ಕಾರಣ ನಗರಗಳತ್ತ ಹೋಗಿದ್ದಾರೆ. 30 ವರ್ಷಗಳಿಂದ ದನ ಮೇಯಿಸಲು ಹೋಗುತ್ತಿದ್ದ ನಾನು, ದಿನ ಸ್ವಲ್ಪ ಸ್ವಲ್ಪ ಕಾಲುವೆಯನ್ನು ಅಗೆಯುತ್ತಿದ್ದೆ. ಈ ವೇಳೆ ಯಾರೂ ನನಗೆ ಸಹಾಯ ಮಾಡಲಿಲ್ಲ" ಎಂದು ಲೌಂಗಿ ಭಯಿಯಾನ್ ಹೇಳಿದ್ದಾರೆ.
ಸುತ್ತಲೂ ದಟ್ಟವಾದ ಕಾಡು, ಪರ್ವತಗಳಿಂದ ಕೂಡಿರುವ ಪ್ರದೇಶ ಕೊಥಿಲವಾ ಗ್ರಾಮ. ಕೃಷಿ ಮತ್ತು ಪಶುಸಂಗೋಪನೆ ಇಲ್ಲಿನ ಜನರ ಪ್ರಮುಖ ಕಸುಬು. ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಕೆರೆಗೆ ಸೇರುವಂತೆ ಮಾಡಿದ ಲೌಂಗಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.

ಗ್ರಾಮಕ್ಕೆ, ಪ್ರಾಣಿಗಳಿಗೆ ನೆರವಾಗಲಿ ಎಂದು ಲೌಂಗಿ ಭಯಿಯಾನ್ ಕಾಲುವೆ ನಿರ್ಮಿಸಿದ್ದಾರೆ. ಈಗ ಮಳೆ ನೀರು ಕಾಲುವೆ ಮೂಲಕ ಹರಿದು ಕೆರೆಯಲ್ಲಿ ಶೇಖರಣೆಯಾಗುತ್ತಿದೆ. ಗ್ರಾಮಸ್ಥರು ಲೌಂಗಿ ಭಯಿಯಾನ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.












Click it and Unblock the Notifications