5 ಸ್ಥಾನದಲ್ಲಿ ಗೆದ್ದು ಅಚ್ಚರಿ ಮೂಡಿಸಿದ ಎಐಎಂಐಎಂ: ಓವೈಸಿ ಕಿಂಗ್ ಮೇಕರ್?
ಪಟ್ನಾ, ನವೆಂಬರ್ 10: ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್ ಇ ಇತೆಹಾದ್ ಉಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಈ ಮೂಲಕ ಬಿಹಾರದಲ್ಲಿ ಸರ್ಕಾರ ರಚನೆಯಲ್ಲಿ ಓವೈಸಿ ಅವರ ಪಕ್ಷ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ.
Recommended Video
2019ರಲ್ಲಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿಹಾರ ವಿಧಾನಸಭೆಯಲ್ಲಿ ತನ್ನ ಖಾತೆ ತೆರೆದಿದ್ದ ಎಐಎಂಐಎಂ, ಈ ಬಾರಿಯ ಚುನಾವಣೆಯಲ್ಲಿ ಅಮೌರ್, ಕೊಚಧಾಮಮ್, ಜೋಕಿಹತ್, ಬೈಸಿ ಮತ್ತು ಬಹದ್ದೂರ್ಗುಂಜ್ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಪಕ್ಷದ ಅಖ್ತರುಲ್ ಇಮಾನ್, ಮುಹಮ್ಮದ್ ಇಜರ್ ಅಸ್ಫಿ, ಶಹನವಾಜ್ ಅಲಂ, ಸಯ್ಯದ್ ರುಕ್ನುದ್ದೀನ್ ಮತ್ತು ಅಜರ್ ನಯೀಮಿ ಕ್ರಮವಾಗಿ ಈಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.
ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ಆರ್ಎಲ್ಎಸ್ಪಿ ಮತ್ತು ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡು 24 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಎಐಎಂಐಎಂ ಮುಸ್ಲಿಂ ಮತದಾರರು ಅಧಿಕವಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿತ್ತು. ಯಾರೂ ಗಂಭೀರವಾಗಿ ಪರಿಗಣಿಸದೆಯೇ ಇದ್ದ ಓವೈಸಿ ಅವರ ಪಕ್ಷ ಐದು ನಿರ್ಣಾಯಕ ಸೀಟುಗಳಲ್ಲಿ ಜಯಗಳಿಸಿದೆ. ಇದರಿಂದ ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬಾರದೆ ಹೋದರೆ ಓವೈಸಿ ಪಕ್ಷ ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಿದೆ. ಮುಂದೆ ಓದಿ.

'ಓವೈಸಿ ಬಿಜೆಪಿಯ ಬಿ ಟೀಮ್'
ಎಐಎಂಐಎಂ ಹೆಚ್ಚು ಮತಗಳನ್ನು ಗಳಿಸಿದಂತೆ ಅದು ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ನೆರವಾಗುತ್ತದೆ. ಏಕೆಂದರೆ ಆರ್ಜೆಡಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬರಬಹುದಾಗಿದ್ದ ಮುಸ್ಲಿಂ ಮತಗಳು ವಿಭಜನೆಯಾಗುತ್ತದೆ. ಹೀಗಾಗಿ ಎಐಎಂಐಎಂ ಬಿಜೆಪಿಯ 'ಬಿ ಟೀಮ್' ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಸೀಮಾಂಚಲದ 24 ಸೀಟುಗಳಲ್ಲಿ ಎಐಎಂಐಎಂ 14ರಲ್ಲಿ ಸ್ಪರ್ಧಿಸಿತ್ತು.

ಕಾಂಗ್ರೆಸ್ ಆರೋಪ
'ಬಿಹಾರದಲ್ಲಿ ನಮ್ಮ ಗೆಲುವು ನಿಶ್ಚಿತವಾಗಿತ್ತು. ಆದರೆ ಕೆಲವು ಸಣ್ಣ ಪಕ್ಷಗಳು ನಮ್ಮ ಮತಗಳನ್ನು ವಿಭಜನೆ ಮಾಡಿವೆ. ಓವೈಸಿ ಅವರ ಪಕ್ಷವು ನಮ್ಮ ಮತಗಳನ್ನು ಒಡೆದಿದೆ. ನಮ್ಮ ವಿರುದ್ಧ ದಾಳವಾಗಿ ಓವೈಸಿಯನ್ನು ಬಿಜೆಪಿ ಬಳಸಿಕೊಂಡಿದೆ' ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪ ಮಾಡಿದ್ದರು.

ತಕ್ಕ ಉತ್ತರ ಸಿಕ್ಕಿದೆ
ಆದರೆ ಮಹಾಘಟಬಂಧನದ ಆರೋಪವನ್ನು ಎಐಎಂಐಎಂ ತಿರಸ್ಕರಿಸಿದೆ. ನಮ್ಮನ್ನು ಮತ ವಿಭಜಕರು ಎಂದು ಕರೆಯುತ್ತಿದ್ದವರಿಗೆ ತೀಕ್ಷ್ಣವಾದ ಪ್ರತಿಕ್ರಿಯೆ ಸಿಕ್ಕಿದೆ. ಭವಿಷ್ಯದಲ್ಲಿಯೂ ಅವರ ಬಾಯಿ ಮುಚ್ಚಿಕೊಂಡಿರಲಿದೆ' ಎಂದು ಐದು ಸೀಟುಗಳಲ್ಲಿ ಗೆದ್ದ ಬಳಿಕ ಪಕ್ಷದ ವಕ್ತಾರ ಅಸೀಮ್ ವಖಾರ್ ಹೇಳಿದ್ದಾರೆ.

ಬಿಜೆಪಿಗೆ ಬೆಂಬಲವಿಲ್ಲ
'ಅತಂತ್ರ ವಿಧಾನಸಭೆಯಾದರೆ ಯಾರನ್ನು ಬೆಂಬಲಿಸಬೇಕು ಎಂಬ ನಿರ್ಧಾರವನ್ನು ಅಸಾದುದ್ದೀನ್ ಓವೈಸಿ ಅವರು ತೆಗೆದುಕೊಳ್ಳಲಿದ್ದಾರೆ. ಆದರೆ ವಾಸ್ತವವೆಂದರೆ ನಮ್ಮ ಹೋರಾಟ ಇರುವುದು ಬಿಜೆಪಿ ವಿರುದ್ಧ ಹಾಗೂ ದೇಶಕ್ಕಾಗಿ. ಹೀಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ' ಎಂದಿದ್ದಾರೆ.












Click it and Unblock the Notifications