ಆರ್ ಜೆಡಿ ಟಿಕೆಟ್ ಕೊಟ್ಟರೂ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಮಾಜಿ ಸಂಸದರ ಪತ್ನಿ
ಪಾಟ್ನಾ, ಅಕ್ಟೋಬರ್.12: ಬಿಹಾರ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕುತ್ತಿರುವ ಒಬ್ಬೊಬ್ಬ ಅಭ್ಯರ್ಥಿಗಳ ಹಿಂದೆಯೂ ಒಂದೊಂದು ಇತಿಹಾಸವಿದೆ. ಸಿವಾನ್ ಜಿಲ್ಲೆಯ ರಘುನಾಥಪುರ್ ವಿಧಾನಸಭಾ ಕ್ಷೇತ್ರವು ಇದೀಗ ಅಂಥದ್ದೇ ವಿಶೇಷತೆಯಿಂದ ಸುದ್ದಿಯಾಗಿದೆ.
ಕೊಲೆ, ಸುಲಿಗೆ, ಅಪಹರ, ಆಸಿಡ್ ದಾಳಿ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಮಾರಾಟ ಆರೋಪದಡಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಬಾಹುಬಲಿ ಶಹಾಬುದ್ದೀನ್ ಅವರ ಪತ್ನಿ ಹೀನಾ ಶಾಹಬ್ ರಿಗೆ ಟಿಕೆಟ್ ನೀಡುವುದಕ್ಕೆ ರಾಷ್ಟ್ರೀಯ ಜನತಾ ದಳ(ERJD) ಮುಂದಾಗಿದೆ.
ಟಿಕೆಟ್ ರೇಸ್: ಮಾಜಿ ಕಾನ್ಸ್ ಟೇಬಲ್ ಮುಂದೆ ಸೋತ ಮಾಜಿ ಡಿಜಿಪಿ
ಆರ್ ಜೆಡಿ ನೀಡಿರುವ ಆಫರ್ ನ್ನು ಹೀನಾ ಶಾಹಬ್ ಅವರು ತಿರಸ್ಕರಿಸಿದ್ದಾರೆ. ಈ ಹಿನ್ನೆಲೆ ಹೀನಾ ಶಾಹಬ್ ಅವರ ಆಪ್ತರು ಎನಿಸಿರುವ ಹರಿಶಂಕರ್ ಯಾದವ್ ಅವರಿಗೆ ರಘುನಾಥಪುರ್ ವಿಧಾನಸಭಾ ಕ್ಷೇತ್ರಗ ಟಿಕೆಟ್ ಘೋಷಿಸಲಾಗಿದೆ.
2009ರಲ್ಲೇ ಪಕ್ಷದಿಂದ ಶಹಾಬುದ್ದೀನ್ ಅಮಾನತು:
ಬಿಹಾರದ ಮಾಜಿ ಸಂಸದ ಬಾಹುಬಲಿ ಶಹಾಬುದ್ದೀನ್ ಒಂದು ಕಾಲದಲ್ಲಿ ಸಮಾನಾಂತರ ಸರ್ಕಾರವನ್ನು ನಡೆಸುತ್ತಿದ್ದರು. ಅಂದಿನ ಕಾಲದಲ್ಲಿ ಸಿವಾನ್ ನಲ್ಲಿ ಶಹಾಬುದ್ದೀನ್ ನ್ಯಾಯಾಲಯವಿದೆ ಎಂದು ಜನರು ಹೇಳುತ್ತಿದ್ದರು. ಈ ಅವಧಿಯಲ್ಲಿ ಕೊಲೆ, ಸುಲಿಗೆ, ಅಪಹರಣ, ಅಕ್ರಮ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಮಾರಾಟ ಮತ್ತು ಆಸಿಡ್ ದಾಳಿ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದು, ಪ್ರಸ್ತುತ ಬಾಹುಬಲಿ ಶಹಾಬುದ್ದೀನ್ ತಿಹಾರ್ ಜೈಲಿನಲ್ಲಿದ್ದಾರೆ.
ತಿಹಾರ ಜೈಲಿನಲ್ಲಿರುವ ಬಾಹುಬಲಿ ಶಹಾಬುದ್ದೀನ್ ರನ್ನು ಕಳೆದ 2009ರಲ್ಲಿ ಆರ್ ಜೆಡಿ ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿತ್ತು. ಅದಕ್ಕೂ ಮೊದಲು 1990ರಲ್ಲಿ ಪಕ್ಷವನ್ನು ಸೇರಿದ್ದ ಬಾಹುಬಲಿ ಶಹಾಬುದ್ದೀನ್ ಎರಡು ಬಾರಿ ಶಾಸಕರಾಗಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ:
ಇನ್ನು, ಕಳೆದ ಸಪ್ಟೆಂಬರ್.25ರಂದು ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿತು. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.