ಬಿಹಾರ ಚುನಾವಣೆ: ಸಿಎಂ ನಿತೀಶ್-ಪ್ರಧಾನಿ ಮೋದಿ ದೂರ ದೂರ!
ಪಾಟ್ನಾ, ಅಕ್ಟೋಬರ್.27: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವು ಗಂಟೆಗಳು ಬಾಕಿ ಇರುವಾಗಲೇ ಭಾರತೀಯ ಜನತಾ ಪಕ್ಷವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ.
ಬಿಹಾರ ಚುನಾವಣಾ ಆಖಾಡದಲ್ಲಿ ಕಳೆದ ವಾರ ಭರ್ಜರಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕೂಡಾ ಎನ್ ಡಿಎ ಮೈತ್ರಿಕೂಟಕ್ಕೆ ಮತ ನೀಡುವಂತೆ ಹೇಳಿಕೊಂಡರು. ತಮ್ಮ ಭಾಷಣದ ಅಂತಿಮ ಭಾಗದಲ್ಲಿ ಮಾತ್ರ ಸಿಎಂ ನಿತೀಶ್ ಕುಮಾರ್ ಬಗ್ಗೆ ಉಲ್ಲೇಖಿಸಿದ್ದರು.
ಕಳೆದ 25 ವರ್ಷಕ್ಕಿಂತ ಹೆಚ್ಚು ಅವಧಿ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಲೋಕ ಜನಶಕ್ತಿ ಪಕ್ಷವು ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವವನ್ನು ವಿರೋಧಿಸಿಯೇ ಎನ್ ಡಿಎ ಮೈತ್ರಿಕೂಟವನ್ನು ತೊರೆದಿತ್ತು. ಇದರ ಮಧ್ಯೆ ಅಕ್ಟೋಬರ್.28ರ ಬುಧವಾರ ಮೊದಲ ಹಂತದ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ನಿತೀಶ್ ಕುಮಾರ್ ಪ್ರಚಾರದಲ್ಲಿ ಬಿಜೆಪಿ ನಾಯಕರು ನಾಪತ್ತೆ
ಬಿಹಾರದಲ್ಲಿ ಕಳೆದ ಎರಡು ವಾರಗಳಿಂದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕರು ಪ್ರಚಾರದ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಎರಡರಿಂದ ಮೂರು ರ್ಯಾಲಿಗಳನ್ನು ಹೊರತುಪಡಿಸಿ ಜೆಡಿಯುನ ಯಾವುದೇ ಪ್ರಚಾರದಲ್ಲಿ ಬಿಜೆಪಿಯ ಪ್ರಮುಖ ನಾಯಕರು ಕಾಣಿಸಿಕೊಳ್ಳುತ್ತಿಲ್ಲ. ಡಿಸಿಎಂ ಸುಶೀಲ್ ಮೋದಿ ಹಾಗೂ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾತ್ರ ನಿತೀಶ್ ಕುಮಾರ್ ಪರವಾಗಿ ಪ್ರಚಾರದ ಅಖಾಡದಲ್ಲಿದ್ದಾರೆ. ಇದೀಗ ಡಿಸಿಎಂ ಸುಶೀಲ್ ಮೋದಿ ಅವರಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಅವರೂ ಕೂಡಾ ಪ್ರಚಾರದಿಂದ ದೂರ ಉಳಿದಿದ್ದಾರೆ.

ಪ್ರಧಾನಿ ಪ್ರಚಾರದ ಬ್ಯಾನರ್ ಗಳಲ್ಲಿ ನಿತೀಶ್ ನಾಪತ್ತೆ
ಬಿಜೆಪಿ ನಡೆಸಿದ ವಿಡಿಯೋ ಪ್ರಚಾರದಲ್ಲೂ ಕೂಡಾ ಸಿಎಂ ನಿತೀಶ್ ಕುಮಾರ್ ಬಗ್ಗೆ ಎಲ್ಲಿಯೂ ಉಲ್ಲೇಖಿಸಿರಲಿಲ್ಲ. ಇತ್ತೀಚಿಗೆ ಬಿಹಾರದ ಮೂರು ಕಡೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಹಾಕಲಾದ ಪೋಸ್ಟರ್ ಗಳಲ್ಲಿ ಪ್ರಧಾನಿ ಫೋಟೋಗಷ್ಟೇ ಆದ್ಯತೆ ನೀಡಲಾಗಿತ್ತು. ಬ್ಯಾನರ್ ಗಳಲ್ಲಿ ಸಿಎಂ ನಿತೀಶ್ ಕುಮಾರ್ ಫೋಟೋ ಕಾಣಿಸಲಿಲ್ಲ. ಪ್ರಧಾನಿ ಪ್ರಚಾರವನ್ನು ಎನ್ ಡಿಎ ಮೈತ್ರಿಕೂಟದ ಪ್ರಚಾರ ಎಂತಲೇ ಬಿಂಬಿಸುವಂತಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರದ ಸಂದರ್ಭಗಳಲ್ಲೂ ಬಹುತೇಕ ಚಿತ್ರಣ ಅದೇ ರೀತಿಯಲ್ಲಿತ್ತು. ಈ ಬಗ್ಗೆ ಸ್ವತಃ ಬಿಜೆಪಿಗರೇ ಮೌನ ವಹಿಸಿದ್ದಾರೆ.

ಭಾಷಣದ ಕೊನೆಯಲ್ಲಿ ನಿತೀಶ್ ಬಗ್ಗೆ ಮೋದಿ ಮಾತು
ಕಳೆದ ವಾರ ಬಿಹಾರದ ಮೂರು ಕಡೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಿ ಭಾಷಣ ಮಾಡಿದರು. ಸಸಾರಂನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಎನ್ ಡಿಎ ಮೈತ್ರಿಕೂಟಕ್ಕೆ ಮತ ನೀಡುವಂತೆ ಬಾರಿ ಬಾರಿ ಹೇಳಿದರು. ತಮ್ಮ ಭಾಷಣದ ಕೊನೆಕೊನೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರಿಗೆ ಮತ ನೀಡುವಂತೆ ಒಮ್ಮೆ ಹೇಳಿರುವುದು ಕಂಡು ಬಂದಿತ್ತು. ಪ್ರಧಾನಿ ಮೋದಿಯವರ ಭಾಷಣವೇ ಬಿಜೆಪಿ ಹಾಗೂ ಜೆಡಿಯು ನಡುವಿನ ಅಂತರವನ್ನು ಗುರುತಿಸುವಂತಿತ್ತು.

ಮುಖ್ಯಮಂತ್ರಿ ನಿತೀಶ್ ವಿರುದ್ಧ ಎಲ್ಲೆಡೆ ಅಸಮಾಧಾನ
ಬಿಹಾರದ ಬಹುತೇಕ ಕಡೆಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಈ ಬಗ್ಗೆ ಬಿಜೆಪಿ ಮಾಹಿತಿ ಪಡೆದುಕೊಂಡ ಬಳಿಕವೇ ನಾಯಕರು ಉದ್ದೇಶಪೂರ್ವಕವಾಗಿ ನಿತೀಶ್ ಜೊತೆಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೊರೊನಾವೈರಸ್ ಹಾವಳಿ ನಡುವೆ ಲಾಕ್ ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಿ ಸಿಎಂ ಆಡಳಿತದಲ್ಲಿ ಅಸಡ್ಡೆ ತೋರಿದ್ದಾರೆ. ಅನ್ಯರಾಜ್ಯಗಳಲ್ಲಿ ಸಿಲುಕಿದ ಬಿಹಾರಿಗಳನ್ನು ಸ್ವರಾಜ್ಯಕ್ಕೆ ಕರೆ ತೋರುವಲ್ಲಿ ಮತ್ತು ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ಬೇಜವಾಬ್ದಾರಿತನವನ್ನು ವಿರೋಧ ಪಕ್ಷ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.

ನಿತೀಶ್ ಕುಮಾರ್ ಕೈಗೆ ಅಧಿಕಾರ ನೀಡಲು ಹಿಂದೇಟು
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದಕ್ಕೆ ಸ್ವತಃ ಬಿಜೆಪಿ ನಾಯಕರಿಗೂ ಇಷ್ಟವಿಲ್ಲ. ಎನ್ ಡಿಎ ಮೈತ್ರಿಕೂಟ ತೊರೆದ ಎಲ್ ಜೆಪಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡಾ ಈ ಕಾರಣದಿಂದ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದರು. ರಾಜ್ಯದ 135 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ ಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಹಾರ ಫಸ್ಟ್, ಬಿಹಾರಿ ಫಸ್ಟ್ ಧ್ಯೇಯವಾಕ್ಯವನ್ನು ಇಟ್ಟುಕೊಂಡಿರುವ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು, ಸಿಎಂ ನಿತೀಶ್ ಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅದಕ್ಕಾಗಿಯೇ ಬಿಜೆಪಿಯು ಎನ್ ಡಿಎ ಮೈತ್ರಿಕೂಟ ಹಾಗೂ ಪ್ರಧಾನಿ ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿದೆ ಎಂದು ಚಿರಾಗ್ ಪಾಸ್ವಾನ್ ದೂಷಿಸಿದ್ದಾರೆ.












Click it and Unblock the Notifications