ವಿಆರ್ಎಸ್ ಪಡೆದ ಬಿಹಾರ ಡಿಜಿಪಿ: ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ?
ಪಟ್ನಾ, ಸೆಪ್ಟೆಂಬರ್ 23: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಬಿಹಾರದ ಪೊಲೀಸ್ ಪ್ರಧಾನ ನಿರ್ದೇಶಕ (ಡಿಜಿಪಿ) ಗುಪ್ತೇಶ್ವರ ಪಾಂಡೆ ಮಂಗಳವಾರ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ಅವರು ತಮ್ಮ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಪಾಂಡೆ ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಗುಪ್ತೇಶ್ವರ ಪಾಂಡೆ ಅವರ ವಿಆರ್ಎಸ್ ಮಂಗಳವಾರದಿಂದ ಅನ್ವಯವಾಗಿದ್ದು, ಅದನ್ನು ರಾಜ್ಯಪಾಲ ಫಗು ಚೌಹಾಣ್ ಅಂಗೀಕರಿಸಿದ್ದಾರೆ. ನಾಗರಿಕ ರಕ್ಷಣೆ ಮತ್ತು ಅಗ್ನಿಶಾಮಕ ಸೇವೆಗಳ ಪ್ರಧಾನ ನಿರ್ದೇಶಕ ಸಂಜೀವ್ ಕುಮಾರ್ ಅವರಿಗೆ ಮುಂದಿನ ಆದೇಶದವರೆಗೂ ಹೆಚ್ಚುವರಿಯಾಗಿ ಡಿಜಿಪಿ ಜವಾಬ್ದಾರಿ ನೀಡಲಾಗಿದೆ.
ವಿಧಾನಸಭೆ ಚುನಾವಣೆ; ಬಿಹಾರಕ್ಕೆ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ಮುಂಬೈನಲ್ಲಿ ಮೃತಪಟ್ಟ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯಲ್ಲಿ ಗುಪ್ತೇಶ್ವರ ಪಾಂಡೆ ಹೆಚ್ಚು ಸುದ್ದಿಯಾಗಿದ್ದರು. ಮುಂಬೈ ಪೊಲೀಸರು ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸುತ್ತಿಲ್ಲ. ಹಾಗೆಯೇ ಬಿಹಾರದಿಂದ ತೆರಳಿದ್ದ ತಂಡವು ತನಿಖೆ ನಡೆಸಲು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.
ವಿವಾದ ಸೃಷ್ಟಿಸಿದ್ದ ಪಾಂಡೆ
ಮುಖ್ಯಮಂತ್ರಿ ನಿತೀಶ್ ಕುಮಾರ್ ಕುರಿತು ಹೇಳಿಕೆ ನೀಡಲು ನಟಿ ರಿಯಾ ಚಕ್ರವರ್ತಿಗೆ ಯೋಗ್ಯತೆ ಇಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಬಳಿಕ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದರು. ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್ಸಿಬಿ) ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದು ಬಿಹಾರಕ್ಕೆ ದೊಡ್ಡ ಜಯ ಎಂದು ಬಣ್ಣಿಸಿದ್ದರು.
ಬಿಜೆಪಿಯಿಂದ ಟಿಕೆಟ್ ಭರವಸೆ
ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅವರು ಬುಕ್ಸರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರಿಗೆ ಟಿಕೆಟ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ ಎಂದು ಹೇಳಲಾಗಿದೆ. 1987ರಿಂದ ಐಪಿಎಸ್ನಲ್ಲಿರುವ ಅವರು ಕಳೆದ ವರ್ಷ ಬಿಹಾರ ಡಿಜಿಪಿಯಾಗಿ ನೇಮಕವಾಗಿದ್ದರು.
ನಿತೀಶ್ ನಾಯಕತ್ವದ ಬಗ್ಗೆ ನಡ್ಡಾ ಘೋಷಣೆ, ಚಿರಾಗ್ ಕಿಡಿ
ಹಿಂದೆಯೂ ವಿಆರ್ಎಸ್ ಕೇಳಿದ್ದರು
2014ರ ಲೋಕಸಭೆ ಚುನಾವಣೆಗೂ ಮುನ್ನ ಕೂಡ ಪಾಂಡೆ ಅವರು ವಿಆರ್ಎಸ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬುಕ್ಸರ್ ಲೋಕಸಭೆ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ವಿಆರ್ಎಸ್ ಹಿಂಪಡೆದಿದ್ದರು. ವಿಆರ್ಎಸ್ ಪಡೆಯಲು ಮೂರು ತಿಂಗಳ ನೋಟಿಸ್ ಅವಧಿಯಲ್ಲಿ ಇರಬೇಕೆಂಬ ನಿಯಮವನ್ನು ಸರ್ಕಾರ ಸಡಿಲಿಸಿರುವುದರಿಂದ ಪಾಂಡೆ ಅವರ ಮನವಿಯನ್ನು ಬೇಗ ಅಂಗೀಕರಿಸಲಾಗಿದೆ.
ಸಿಬಿಐ ವಿಚಾರಣೆ
ಪಾಂಡೆ ಅವರು 2021ರ ಫೆಬ್ರವರಿ 28ರಂದು ನಿವೃತ್ತರಾಗಬೇಕಿತ್ತು. 2012ರಲ್ಲಿ ಮುಜಫ್ಫರ್ಪುರ ಜಿಲ್ಲೆಯ ತಿರ್ಹುತ್ನ ಐಜಿಪಿಯಾಗಿದ್ದ ಸಂದರ್ಭದಲ್ಲಿ 12 ವರ್ಷದ ಬಾಲಕಿ ನವ್ರುನಾ ಚಕ್ರವರ್ತಿ ಎಂಬಾಕೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಅವರು ವಿಚಾರಣೆಗೆ ಒಳಪಟ್ಟಿದ್ದರು. ಜುಲೈನಲ್ಲಿ ನಿವೃತ್ತರಾದ ಮತ್ತೊಬ್ಬ ಐಪಿಎಸ್ ಅಧಿಕಾರಿ ಸುನಿಲ್ ಕುಮಾರ್ ಕೂಡ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.