ಬಿಹಾರ ರಾಜಕೀಯ ಬಿಕ್ಕಟ್ಟು: ಇಂದು ನಿತೀಶ್ ಕುಮಾರ್ ಮಹತ್ವದ ಸಭೆ, ಇಂದೇ ಮೈತ್ರಿ ಅಂತ್ಯ?
ಪಾಟ್ನಾ, ಆಗಸ್ಟ್ 9: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಜನತಾ ದಳ (ಸಂಯುಕ್ತ) ಶಾಸಕರು ಮತ್ತು ಸಂಸದರ ಸಭೆಯನ್ನು ಕರೆದಿದ್ದು, ಬಿಜೆಪಿಯೊಂದಿಗೆ ಮೈತ್ರಿಗೆ ಅಂತ್ಯ ಹಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಇಂದು ಬಹುತೇಕ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.
ಜೆಡಿಯು ಪಕ್ಷದ ಸಭೆ ನಡುವೆಯೇ, ಇಂದು ಆರ್ ಜೆಡಿ, ಕಾಂಗ್ರೆಸ್ ಕೂಡ ಪ್ರತ್ಯೇಕವಾಗಿ ಸಭೆ ನಡೆಸಲಿವೆ. ಆರ್ ಜೆಡಿ ಈಗಾಗಲೇ ಜೆಡಿಯುಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದೆ. ನಿತೀಶ್ ಕುಮಾರ್ ಕೂಡ ಸೋನಿಯಾ ಗಾಂಧಿ ಅವರಿಗೆ ಭಾನುವಾರವೇ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ತನ್ನ ಎಲ್ಲಾ ಶಾಸಕರು, ಸಂಸದರಿಗೆ ಪಾಟ್ನಾಗೆ ಬರುವಂತೆ ಸೋಮವಾರವೇ ಸೂಚನೆ ನೀಡಿದೆ.
ಆಡಳಿತಾರೂಢ ಜೆಡಿ(ಯು)-ಬಿಜೆಪಿ ಮೈತ್ರಿಯಲ್ಲಿನ ಗೊಂದಲದ ನಡುವೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಪ್ರತಿಪಕ್ಷ ಆರ್ಜೆಡಿ ಮಂಗಳವಾರ ಪಾಟ್ನಾದಲ್ಲಿ ತಮ್ಮ ಶಾಸಕರ ಪ್ರತ್ಯೇಕ ಸಭೆಗಳನ್ನು ಕರೆದಿವೆ. ಎನ್ಡಿಎಯ ಅಂಗವಾಗಿರುವ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ಕಾಂಗ್ರೆಸ್ ಮಂಗಳವಾರ ತಮ್ಮ ಶಾಸಕರ ಸಭೆಗಳನ್ನು ನಡೆಸುತ್ತಿವೆ.

ಜೆಡಿಯುಗೆ ಕಾಂಗ್ರೆಸ್, ಆರ್ ಜೆಡಿ ಬೇಷರತ್ ಬೆಂಬಲ?
ನಿತೀಶ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಹಿನ್ನೆಲೆಯಲ್ಲಿ ಈ ಸಭೆಗಳನ್ನು ಕರೆಯಲಾಗಿದೆ. ಮತ್ತೊಂದೆಡೆ ಜೆಡಿಯು ನಾಯಕರು ಆರ್ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರೊಂದಿಗೆ ಈ ಹಿಂದೆ ಮಾತನಾಡಿದ್ದರು ಎಂದು ಹೇಳಲಾಗಿದೆ.
ಆರ್ಜೆಡಿ ಕೂಡ ಮಂಗಳವಾರ ತನ್ನ ಶಾಸಕರ ಸಭೆಯನ್ನು ಕರೆದಿದೆ ಎಂದು ಹೇಳಿದೆ, ಆದರೆ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆ ಬಗ್ಗೆಯಲ್ಲ ಅದೆಲ್ಲ ವದಂತಿ ಮಾತ್ರ ಎಂದು ಹೇಳಿಕೊಂಡಿದೆ. ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್, ನಿತೀಶ್ ಕುಮಾರ್ ಅವರಿಗೆ ನಾವು ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ, ಎಲ್ಲವೂ ಊಹಾಪೋಹ" ಎಂದೇ ಹೇಳಿಕೊಂಡಿದ್ದಾರೆ.

ಆದರೆ ಆರ್ಜೆಡಿ ಮೂಲಗಳ ಪ್ರಕಾರ ಮೈತ್ರಿ ಮಾಡಿಕೊಳ್ಳಲು ಬಹುತೇಕ ಒಪ್ಪಂದವಾಗಿದೆ ಮತ್ತು ನಾಯಕತ್ವ ಮತ್ತು ಸಚಿವ ಸ್ಥಾನ ವಿತರಣೆಯ ವಿಷಯದಲ್ಲಿ ಕೆಲವೇ ಕೆಲವು ಅಡಚಣೆಗಳಿವೆ" ಎಂದು ಹೇಳಲಾಗಿದೆ. ಆರ್ಜೆಡಿ ನಾಯಕ ತೇಜಸ್ವಿ ಕೂಡ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮತ್ತೊಂದೆಡೆ, ಬಿಜೆಪಿಯು ತನ್ನ ವಕ್ತಾರರಿಗೆ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಂತೆ ಸೂಚನೆ ನೀಡಿದೆ ಎನ್ನಲಾಗಿದೆ.












Click it and Unblock the Notifications