ಬಿಹಾರ ಬಿಜೆಪಿ ವಕ್ತಾರನ ಮೇಲೆ ಗುಂಡಿನ ದಾಳಿ
ಪಾಟ್ನಾ, ಜನವರಿ 27: ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಟೀಕೆಗಳು ವ್ಯಕ್ತವಾಗಿರುವ ಬೆನ್ನಲ್ಲೇ ಬಿಹಾರದಲ್ಲಿ ಬುಧವಾರ ಬಿಜೆಪಿ ವಕ್ತಾರನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಬಿಜೆಪಿ ವಕ್ತಾರ ಅಫ್ಜರ್ ಶಂಸಿ ಅವರ ಮೇಲೆ ಜಮಲ್ಪುರದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಶಂಸಿ ಜಮಲ್ಪುರದ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಕೂಡ ಆಗಿದ್ದು, ಕಾಲೇಜಿನಲ್ಲಿ ಮತ್ತೊಬ್ಬ ಪ್ರಾಧ್ಯಾಪಕರೊಂದಿಗೆ ಜಗಳವಾಡಿದ ನಂತರ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು:ಕಳೆದ 21 ದಿನದಲ್ಲಿ 6 ಶೂಟೌಟ್
"ಕಾಲೇಜಿನಲ್ಲಿ ಅಫ್ಜರ್ ಶಂಸಿ ಅವರು ತಮ್ಮ ಚೇಂಬರ್ ಗೆ ಹೋಗುತ್ತಿದ್ದ ಸಂದರ್ಭ ಎರಡರಿಂದ ಮೂರು ಜನ ಗುಂಡು ಹಾರಿಸಿದ್ದಾರೆ. ಅವರಿಗೆ ಸದ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಈ ದಾಳಿ ನಡೆಯುವ ಮುನ್ನ ಪ್ರಾಧ್ಯಾಪಕರೊಬ್ಬರೊಂದಿಗೆ ಜಗಳವಾಗಿದ್ದು, ಅವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದೇವೆ" ಎಂದು ತಿಳಿಸಿದ್ದಾರೆ.
ಸರ್ಕಾರ ಕಟ್ಟುನಿಟ್ಟಿನ ಕಾನೂನು ಪಾಲನೆ ಮಾಡುತ್ತಿಲ್ಲ ಎಂದು ವಿರೋಧ ಪಕ್ಷಗಳು ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಬೆನ್ನಲ್ಲೇ ಇಂಥ ಮತ್ತೊಂದು ಘಟನೆ ನಡೆದಿದೆ. ಇದೇ ಜನವರಿ 12ರಂದು ಇಂಡಿಗೋ ಏರ್ ಪೋರ್ಟ್ ವ್ಯವಸ್ಥಾಪಕ ರೂಪೇಶ್ ಕುಮಾರ್ ಸಿಂಗ್ ಅವರ ಕೊಲೆಯಾಗಿದ್ದು, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಟೀಕೆಗಳು ವ್ಯಕ್ತಗೊಂಡಿದ್ದವು. ರೂಪೇಶ್ ಕುಮಾರ್ ಸಿಂಗ್ ಅವರನ್ನು ಅವರ ನಿವಾಸದ ಎದುರೇ ದುಷ್ಕರ್ಮಿಗಳು ಕೊಲೆ ಮಾಡಿದ್ದರು.