ಕಾಂಗ್ರೆಸ್ ಕೆಲಸ ಮಾಡಿದ್ದರೆ, ನಾನು ರಾಜಕೀಯಕ್ಕೇ ಬರುತ್ತಿರಲಿಲ್ಲ: ಕೇಜ್ರಿವಾಲ್
ಪಣಜಿ, ಫೆಬ್ರವರಿ 4: ದೇಶದಲ್ಲಿ ಕಾಂಗ್ರೆಸ್ ಉತ್ತಮ ಕೆಲಸ ಮಾಡಿದ್ದರೆ ನಾನು ರಾಜಕೀಯಕ್ಕೆ ಬರುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಕೇಜ್ರಿವಾಲ್ ಅವರನ್ನು ಛೋಟಾ ಮೋದಿ ಎಂದು ಕರೆದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಗೋವಾರದಲ್ಲಿ ಫೆಬ್ರವರಿ 14ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಹಾಗೆಯೇ ಸುರ್ಜೇವಾಲಾ ಅವರನ್ನು ಉಲ್ಲೇಖಿಸಿ ಮಾತನಾಡಿದ್ದ ಕೇಜ್ರಿವಾಲ್, ಅವರು ಏನು ಬೇಕಾದರೂ ಹೇಳಿಕೊಳ್ಳಲಿ ಇದರಿಂದ ಏನೂ ವ್ಯತ್ಯಾಸ ಆಗದು ಎಂದಿದ್ದಾರೆ.

ವಾಸ್ತವವಾಗಿ ಸುರ್ಜೇವಾಲಾ ಅವರ ಕನಸಿನಲ್ಲಿಯೂ ನನ್ನನ್ನು ದೆವ್ವದಂತೆ ಕಾಣುತ್ತಾರೆ, ದಿನದ 24 ಗಂಟೆಯೂ ನಾನು ಅವರ ಮನಸ್ಸಿನಲ್ಲಿದ್ದೇನೆ.
ಎಲ್ಲರ ಬಗ್ಗೆ ಕೆಟ್ಟದಾಗಿ ಮಾತನಾಡುವ ಬದಲು ಕಾಂಗ್ರೆಸ್ ಜನರ ಪರವಾಗಿ ಕೆಲಸ ಮಾಡಬೇಕಿತ್ತು, ಅವರು ಜನರಿಗಾಗಿ ಕೆಲಸ ಮಾಡಿದ್ದರೆ ರಾಜಕೀಯದಲ್ಲಿ ಕೇಜ್ರಿವಾಲ್ರ ಅಗತ್ಯವಿರಲಿಲ್ಲ ಎಂದರು.
ಸುರ್ಜೇವಾಲಾ ಮಾತನಾಡಿ, ಕೇಜ್ರಿವಾಲ್ ಒಬ್ಬ ವೇಷಧಾರಿ, ಆರ್ಎಸ್ಎಸ್ ಹಾಗೂ ಬಿಜೆಪಿ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ, ಗೋವಾ ಹಾಗೂ ಉತ್ತರಾಖಂಡದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಿಜೆಪಿಗೆ ಕಿಡಿ ಹೊತ್ತಿಸಿಕೊಳ್ಳಲು ನೆರವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ಕೆಲವು ದಿನಗಳ ಹಿಂದಷ್ಟೇ ಪಂಜಾಬ್ ಜನತೆಗೆ ಆಮ್ ಆದ್ಮಿ ಪಕ್ಷ ಕೆಲವು ಭರವಸೆಯನ್ನು ನೀಡಿತ್ತು. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಯಾವುದೇ ಹೊಸ ತೆರಿಗೆಯ ಹೊರೆಯನ್ನು ಜನತೆಯ ಮೇಲೆ ಹೇರುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಆಶ್ವಾಸನೆ ನೀಡಿದ್ದಾರೆ.
ಜಲಂಧರ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ರಚಿಸಬೇಕು. ಧರ್ಮವು ಖಾಸಗಿ ವಿಷಯವಾಗಿದೆ. ದೇವರನ್ನು ಪೂಜಿಸುವ ಹಕ್ಕು ಎಲ್ಲರಿಗೂ ಇದೆ. ಧಾರ್ಮಿಕ ಮತಾಂತರದ ವಿರುದ್ಧ ಖಂಡಿತ ಕಾನೂನನ್ನು ರಚಿಸಬೇಕು. ಆದರೆ ಈ ಮೂಲಕ ಯಾವ ವ್ಯಕ್ತಿಗೂ ಕಿರುಕುಳ ನೀಡಬಾರದು. ಬೆದರಿಕೆಯೊಡ್ಡಿ ಮತಾಂತರ ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ಮನೆ ಬಾಗಿಲಿಗೆ ಸೇವೆ ಒದಗಿಸುವ ಮೊಹಲ್ಲಾ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು. ಪಂಜಾಬ್ನಲ್ಲಿ 16000 ಕ್ಲಿನಿಕ್ಗಳನ್ನು ನಿರ್ಮಿಸುತ್ತೇವೆ ಮತ್ತು ಆಸ್ಪತ್ರೆಗಳನ್ನು ನವೀಕರಿಸುತ್ತೇವೆ. ದೆಹಲಿಯಂತೆ ಪಂಜಾಬ್ ಕೂಡ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳಿದರು.
ಕೈಗಾರಿಕೋದ್ಯಮಿಗಳನ್ನು ದೆಹಲಿಯಲ್ಲಿ ಬಿಜೆಪಿಯ ಮತಬ್ಯಾಂಕ್ ಎಂದು ಪರಿಗಣಿಸಲಾಗಿದೆ. ಆದರೆ ದೆಹಲಿಯ ಉದ್ಯಮಿಗಳು ಮೊದಲು ನನಗೆ ಮತ ಹಾಕಲಿಲ್ಲ. ನಾನು ಅವರ ಹೃದಯ ಗೆದ್ದ ನಂತರ ಮತ ಹಾಕಲು ಪ್ರಾರಂಭಿಸಿದರು. ನಮಗೆ 5 ವರ್ಷ ಕಾಲಾವಕಾಶ ನೀಡಿ, ನಾವು ನಿಮ್ಮ ಹೃದಯವನ್ನೂ ಗೆಲ್ಲುತ್ತೇವೆ ಎಂದು ಅವರು ಹೇಳಿದರು.
117 ಸದಸ್ಯ ಬಲವಿರುವ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications