ಕರ್ನಾಟಕದ ಗೋಹತ್ಯೆ ನಿಷೇಧ ಮಸೂದೆಗೆ ಗೋವಾದ ವಿರೋಧ!
ಪಣಜಿ, ಡಿಸೆಂಬರ್ 13: ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದ ನಡುವಯೇ 'ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ' ಅನುಮೋದನೆಯಾಗಿದೆ. ಆದರೆ, ವಿಧಾನ ಪರಿಷತ್ನಲ್ಲಿ ಇನ್ನೂ ಮಸೂದೆ ಇನ್ನೂ ಮಂಡನೆಯಾಗಿಲ್ಲ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಗೋಹತ್ಯೆ ನಿಷೇಧ ಮಸೂದೆಗೆ ಪಕ್ಕದ ರಾಜ್ಯ ಗೋವಾ ವಿರೋಧ ವ್ಯಕ್ತಪಡಿಸಿದೆ. ಗೋವಾ ರಾಜ್ಯದ ಮೇಲೆ ಇದು ಪರಿಣಾಮ ಬೀರಲಿದೆ. ಮಸೂದೆಯನ್ನು ಕಾನೂನಾಗಿ ಮಾಡಲು ಮುಂದಾಗಿರುವ ಬಿಜೆಪಿ ಸರ್ಕಾರದ ಕ್ರಮ ಗೋವಾದ ಜನರು ಹಾಗೂ ಮಾಂಸ ವ್ಯಾಪಾರಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಎಲ್ಲಾ ರೀತಿಯ ಜಾನುವಾರು ಹತ್ಯೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ 'ಕರ್ನಾಟಕ ಜಾನುವಾರು ಸಂರಕ್ಷಣಾ ಮಸೂದೆ- 2020' ಬಿಜೆಪಿ ಅಧಿಕಾರದಲ್ಲಿದ್ದಾಗ 2010ರಲ್ಲಿ ಅಂಗೀಕರಿಸಲ್ಪಟ್ಟ ಮಸೂದೆಯ ತಿದ್ದುಪಡಿ ಆವೃತ್ತಿಯಾಗಿದೆ.
ಹೊಸ ಮಸೂದೆಯಲ್ಲಿ ದನ ಸಾಗಣೆ, ಅವುಗಳ ಮಾಂಸ ಮಾರಾಟ ಮತ್ತು ವಧೆಗಾಗಿ ದನ ಖರೀದಿಸುವುದು ಅಥವಾ ವಿಲೇವಾರಿ ಮಾಡುವವರಿಗೆ 3 ರಿಂದ 5 ಐದು ವರ್ಷಗಳ ಜೈಲು ಶಿಕ್ಷೆ ಮತ್ತು 50,000 ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಮಾಂಸದ ಉತ್ಪನ್ನಗಳ ಆಮದು
ಗೋವಾ ರಾಜ್ಯ ಕರ್ನಾಟಕದಿಂದ ಗೋಮಾಂಸ ಸೇರಿದಂತೆ ಶೇಕಡಾ 90ರಷ್ಟು ಮಾಂಸದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಶೇ 40 ಪ್ರತಿಶತದಷ್ಟು ಗೋವಾ ಜನರು ಗೋಮಾಂಸ ತಿನ್ನುವವರಾಗಿದ್ದು, ಗೋವಾದ ಅಂಗಡಿ, ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳಲ್ಲಿ ದಿನಕ್ಕೆ 15-20 ಟನ್ ಗೋಮಾಂಸ ಮಾರಾಟವಾಗುತ್ತದೆ.

ಆರ್ಥಿಕ ಪರಿಣಾಮ ಉಂಟಾಗುತ್ತದೆ
ಕೋವಿಡ್ ಪರಿಸ್ಥಿತಿ ಕಾರಣ ಈಗ ಅನೇಕ ರೆಸ್ಟೋರೆಂಟ್ ಮತ್ತು ಹೋಟೆಲ್ ಮುಚ್ಚಿವೆ. ಇದರಿಂದಾಗಿ ಪ್ರಸ್ತು ಬೇಡಿಕೆ ದಿನಕ್ಕೆ 10 ರಿಂದ 12 ಟನ್ಗಳಷ್ಟಿದೆ. ಆದರೆ, ಇದೀಗ ಕರ್ನಾಟಕದಲ್ಲಿ ಕಾನೂನು ಜಾರಿಗೆ ಬಂದರೆ ಗೋವಾದಲ್ಲಿ ತೀವ್ರ ಆರ್ಥಿಕ ಪರಿಣಾಮ ಉಂಟಾಗಲಿದೆ. ಇದು ಮಾಂಸದ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. 2000ಕ್ಕೂ ಹೆಚ್ಚು ವ್ಯಾಪರಸ್ಥರು ಆರ್ಥಿಕವಾಗಿ ಪರಿಣಾಮ ಎದುರಿಸಬೇಕಾಗುತ್ತದೆ.

ನಾವು ಹಸುಗಳನ್ನು ಕೊಲ್ಲುವುದಿಲ್ಲ
ಗೋವಾ ಖುರೈಶಿಯ ಮಾಂಸ ವ್ಯಾಪಾರಿಗಳ ಸಂಘ (ಕ್ಯೂಎಂಟಿಎ) ಅಧ್ಯಕ್ಷ ಮನ್ನಾ ಬೆಪಾರಿ ಈ ಕುರಿತು ಮಾತನಾಡಿದ್ದಾರೆ. "ನಾವು ಹಸುಗಳನ್ನು ವಧಿಸುವುದಿಲ್ಲ. ಯಾವುದಕ್ಕೂ ಉಪಯೋಗಕ್ಕೆ ಬರದ ಹಸುಗಳನ್ನು ನಾವು ಪಡೆಯುತ್ತೇವೆ. ನ್ಯಾಯಾಲಯ ಅಥವಾ ಸರ್ಕಾರದ ಎಲ್ಲಾ ನಿರ್ದೇಶನಗಳನ್ನು ಪಾಲನೆ ಮಾಡುತ್ತೇವೆ" ಎಂದು ಹೇಳಿದ್ದಾರೆ.

ಪ್ರಧಾನ ಆಹಾರ ಗೋ ಮಾಂಸ
ಕರ್ನಾಟಕದಲ್ಲಿ ಕಾನೂನು ಜಾರಿಗೆ ಬಂದರೆ ಅದು ಗೋವಾದ ಮಾಂಸ ಉದ್ಯಮವನ್ನು ಹಾಳು ಮಾಡುತ್ತದೆ. ಬಹುತೇಕ ಗೋವಾದ ಜನರ ಪ್ರಧಾನ ಆಹಾರ ಗೋಮಾಂಸ. ಮಾರ್ಗಾವೊ ಗೋಮಾಂಸದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿದೆ. ಸೋಮವಾರ ಸಂಘವು ಸಭೆ ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದೆ. ನಾವು ವಿವಿಧ ಶಾಸಕರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇವೆ ಮತ್ತು ಮುಖ್ಯಮಂತ್ರಿಯವರೇ ಪಶುಸಂಗೋಪನಾ ಸಚಿವರಾಗಿರುವುದರಿಂದ ಕರ್ನಾಟಕ ಸರ್ಕಾರದೊಂದಿಗೆ ಮಾತನಾಡಲು ವಿನಂತಿಸುತ್ತೇವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಚಿಕನ್ ದರ ಹೆಚ್ಚಾಗಲಿದೆ
ವ್ಯಾಪಾರಿಗಳು ಬಿಜೆಪಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಗೋಮಾಂಸ ಸೇವಿಸಬಾರದು ಎಂದು ಬಿಜೆಪಿ ಸರ್ಕಾರ ಬಯಸಿದೆ. ಅದಕ್ಕಾಗಿಯೇ ಅವರು ಕಾನೂನುಗಳನ್ನು ತರುತ್ತಿದ್ದಾರೆ. ಅವರು ನಮ್ಮ ವ್ಯವಹಾರವನ್ನು ಗುರಿಯಾಗಿಸಿಕೊಂಡು ನಮ್ಮ ಮೇಲೆ ನೇರವಾಗಿ ದಾಳಿ ಮಾಡುತ್ತಿದ್ದಾರೆ. ಒಂದು ವೇಳೆ ಈ ಮಸೂದೆ ಕಾನೂನು ಆದರೆ ಮಟನ್ ಮತ್ತು ಚಿಕನ್ ದರ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications