ಗೋವಾ ಚುನಾವಣೆ; ಟಿಎಂಸಿ ಕಿಂಗ್ ಮೇಕರ್ ಆಗಲಿದೆಯೇ?
ಪಣಜಿ, ಮಾರ್ಚ್ 09; ಗೋವಾದ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆದಿತ್ತು. ಚುನಾವಣೋತ್ತರ ಫಲಿತಾಂಶಗಳು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಅಂದಾಜಿಸಿದ್ದು, ರಾಜ್ಯದ ರಾಜಕೀಯ ಲೆಕ್ಕಾಚಾರವನ್ನು ಬದಲಾಯಿಸಿವೆ.
ಗೋವಾದಲ್ಲಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 21. ಸೋಮವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಸೂಚನೆ ನೀಡಿವೆ. ಕಾಂಗ್ರೆಸ್ 14 ರಿಂದ 17, ಬಿಜೆಪಿ 14 ರಿಂದ 17 ಮತ್ತು ಎಎಪಿ 2 ರಿಂದ 4, ಇತರರು 3 ರಿಂದ 6 ಮತ್ತು ಟಿಎಂಸಿ 2-4 ಸ್ಥಾನಗಳಲ್ಲಿ ಜಯಗಳಿಸಬಹುದು ಸಮೀಕ್ಷೆಗಳು ಅಂದಾಜಿಸಿವೆ.
ಇದೇ ಮೊದಲ ಬಾರಿಗೆ ಗೋವಾದಲ್ಲಿ ಚುನಾವಣಾ ಕಣಕ್ಕಿಳಿದಿರುವ ಟಿಎಂಸಿ ಎಂಜಿಪಿ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಒಂದು ವೇಳೆ ಚುನಾವಣಾ ಫಲಿತಾಂಶ ಅಂತಂತ್ರವಾದರೆ ಟಿಎಂಸಿ-ಎಂಜಿಪಿ ಮೈತ್ರಿಕೂಟ ಪ್ರಮುಖ ಪಾತ್ರವಹಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಗೋವಾದಲ್ಲಿ ಟಿಎಂಸಿ ಪ್ರಚಾರದ ನೇತೃತ್ವ ವಹಿಸಿದ್ದ ಅಶೋಕ್ ತನ್ವಾರ್ ಚುನಾವಣೋತ್ತರ ಮೈತ್ರಿ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು, "ರಾಜ್ಯದ ಜನರು ಬದಲಾವಣೆ ಬಯಸಿದ್ದು ನಿಜ. ಆದರೆ ಕಾಂಗ್ರೆಸ್ ಬೆಂಬಲಿಸುತ್ತಾರೆ ಎನಿಸುತ್ತಿಲ್ಲ. ಫಲಿತಾಂಶ ಪ್ರಕಟಣೆ ಬಳಿಕ ಎಂಜಿಪಿ ಯಾವ ಪಕ್ಷ ಸಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅವರು ಬಿಜೆಪಿ ಬೆಂಬಲಿಸಿದರೆ ನಾವು ಎಂದಿಗೂ ಬಿಜೆಪಿ ಜೊತೆ ಹೋಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಮುಂದಿನ ಕಾರ್ಯತಂತ್ರಕ್ಕಾಗಿ ಕಾಂಗ್ರೆಸ್ ಚಿಕ್ಕಪುಟ್ಟ ಪಕ್ಷಗಳ ಜೊತೆ ಮಾತುಕತೆ ನಡೆಸಲಿದೆ. ಕರ್ನಾಟಕ ಕಾಂಗ್ರೆಸ ಅಧ್ಯಕ್ಷ ಡಿ. ಕೆ. ಶಿವಕುಮಾರ್ರನ್ನು ಪಕ್ಷ ಗೋವಾಗೆ ಕಳಿಸಿದೆ. ಬಿಜೆಪಿ ಸಹ ಕಾರ್ಯತಂತ್ರವನ್ನು ಆರಂಭಿಸಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಗೋವಾದಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಆತಂಕವಿರುವುದು ಬಿಜೆಪಿ 2017ರಲ್ಲಿ ಮಾಡಿದಂತೆ ಚಿಕ್ಕಪುಟ್ಟ ಪಕ್ಷಗಳ ಜೊತೆ ಮಾತುಕತೆ ನಡೆಸಬಹುದು ಎಂಬುದು. ಕಳೆದ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಗೆದ್ದರೂ ಸಹ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿತ್ತು.
ದೆಹಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ ಪಕ್ಷ ಈಗಾಗಲೇ ಎಎಪಿ, ಟಿಎಂಸಿ, ಎನ್ಸಿಪಿ ಜೊತೆ ಮಾತುಕತೆ ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಗೆ ಪಕ್ಷೇತರ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸುವ ಹೊಣೆಗಾರಿಕೆ ನೀಡಲಾಗಿದೆ.
ಟಿಎಂಸಿ ಚುನಾವಣಾ ಫಲಿತಾಂಶ ಪ್ರಕಟವಾಗುವ ತನಕ ಕಾದು ನೋಡುವ ತಂತ್ರ ಅನುಸರಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಸಮಾನ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್ ಜೊತೆ ಟಿಎಂಸಿ ಮೈತ್ರಿ ಬಯಸಿತ್ತು. ಆದರೆ ಕಾಂಗ್ರೆಸ್ ಒಪ್ಪಿರಲಿಲ್ಲ.
ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಂ ಮತ್ತು ಡಿ. ಕೆ. ಶಿವಕುಮಾರ್ ಮೂರು ದಿನಗಳ ಕಾಲ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ನಡೆಯುವ ಬೆಳವಣಿಗೆಗಳಿಗೆ ರಾಜ್ಯ ನಾಯಕರಿಗೆ ಸಹಾಯ ಮಾಡಲಿದ್ದಾರೆ.
ಗೋವಾ ಚುನಾವಣಾ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದು ರಾಹುಲ್ ಗಾಂಧಿ ಸಮ್ಮುಖದಲ್ಲಿ ಪ್ರಮಾಣ ಮಾಡಿದ್ದಾರೆ. ಆದರೆ ಅಧಿಕಾರ ಸಿಗಲಿದೆ ಎಂದಾಗ ಶಾಸಕರ ನಡೆ ಬದಲಾಗಲಿದೆ.
ಹೀಗಾಗಿ ಹಿರಿಯ ನಾಯಕರನ್ನು ಗೋವಾಗೆ ಕಾಂಗ್ರೆಸ್ ಕಳಿಸಿದೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ತಕ್ಷಣ ತುರ್ತು ತೀರ್ಮಾನಗಳನ್ನು ಕೈಗೊಳ್ಳಲು ಸಹಾಯಕವಾಗಲು ಈ ವ್ಯವಸ್ಥೆ ಮಾಡಲಾಗಿದೆ. ಹೈಕಮಾಂಡ್ ನಾಯಕರು ಹಿರಿಯ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಅತಂತ್ರ ಫಲಿತಾಂಶ ಬಂದರೆ ಚಿಕ್ಕಪುಟ್ಟ ಪಕ್ಷಗಳು, ಪಕ್ಷೇತರರು ಯಾರಿಗೆ ಬೆಂಬಲ ನೀಡಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications