ಗೋವಾ ರಾಜಕೀಯದಲ್ಲಿ ಮತ್ತೊಂದು ಶಾಕಿಂಗ್ ಬೆಳವಣಿಗೆ
ಪಣಜಿ, ಮಾರ್ಚ್ 27: ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಗೋವಾ ರಾಜಕೀಯದಲ್ಲಿ ದಿನೇ ದಿನೇ ಅಚ್ಚರಿಯ ಬೆಳವಣಿಗೆಗಳು ಸಂಭವಿಸುತ್ತಿದ್ದು, ಉಪಮುಖ್ಯಮಂತ್ರಿ ಸುದಿನ್ ದವಾಲಿಕರ್ ಅವರನ್ನು ಕೈಬಿಡಲು ಗೋವಾ ಸರ್ಕಾರ ನಿರ್ಧರಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳವಾರ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ ಇಬ್ಬರು ಶಾಸಕರು ಬಿಜೆಪಿ ಸೇರಿ, ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಮೊನ್ನೆ ತಾನೇ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದ ದವಾಲಿಕರ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಾರೆ.
ಸುದಿನ್ ಧವಾಲಿಕರ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕುವಂತೆ ಗೋವಾ ರಾಜ್ಯಪಾಲರದಾದ ಮೃದುಲಾ ಸಿನ್ಹಾ ಅವರಿಗೆ ಮಾಡಿದ ಶಿಫಾರಸ್ಸುಗಳನ್ನು ರಾಜ್ಯಪಾಲರು ಸ್ವೀಕರಿಸಿದ್ದು, ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೈಬಿಡಲಾಗಿದೆ.

ಗೋವಾ ರಾಜಕೀಯ ಚಿತ್ರಣ ಬದಲಿಸಿದ ಪರಿಕ್ಕರ್ ಮರಣ
ಗೋವಾದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಗೋವಾ ರಾಜಕೀಯದಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆಗಳಾದವು. ಪರಿಕ್ಕರ್ ಅವರು ಬದುಕಿದ್ದಾಗ ಗಟ್ಟಿ ನಾಯಕತ್ವದಿಂದಾಗಿ ಪಕ್ಷದೊಳಗೆ ಮತ್ತು ಮೈತ್ರಿ ಸರ್ಕಾರದಲ್ಲಿ ಯಾವುದೇ ಬಿರುಕು ಮೂಡದಂತೆ ನೋಡಿಕೊಂಡಿದ್ದರು. ಆದರೆ ಅವರು ತೀರಿಕೊಳ್ಳುತ್ತಿದ್ದಂತೆಯೇ ಗೋವಾ ರಾಜಕೀಯದಲ್ಲಿ ಹಗ್ಗ ಜಗ್ಗಾಟ ಆರಂಭವಾಗಿತ್ತು.

ಪರಿಕ್ಕರ್ ಅಂತ್ಯಸಂಸ್ಕಾರವಾಗಿ ಕೆಲವೇ ಗಂಟೆಗಳಲ್ಲಿ....
ಮಾರ್ಚ್ 17 ರಂದು ಭಾನುವಾರ ನಿಧನರಾದ ಮನೋಹರ್ ಪರಿಕ್ಕರ್ ಅವರ ಅಂತ್ಯ ಸಂಸ್ಕಾರ ಸೋಮವಾರ ನಡೆದಿತ್ತು. ಅಂತ್ಯ ಸಂಸ್ಕಾರವಾದ ಕೆಲವೇ ಗಂಟೆಗಳಲಲ್ಲಿ, ತಡರಾತ್ರಿಯಲ್ಲೇ ಬಿಜೆಪಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಮನವಿಯನ್ನಿಟ್ಟಿದ್ದರು. ನಂತರ ಆಗಿನ ವಿಧಾನಸಭೆ ಸ್ಪೀಕರ್ ಆಗಿದ್ದ ಪ್ರಮೋದ್ ಸಾವಂತ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ
ಗೋವಾದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ನಡೆಸುವಷ್ಟು ಬಹುಮತ ಹೊಂದಿಲ್ಲದ ಕಾರಣ ಜಿ ಎಫ್ ಯು ಮತ್ತು ಎಂಜಿಪಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಪರಿಕ್ಕರ್ ಸಾವಿನ ನಂತರ ಈ ಪಕ್ಷದ ನಾಯಕರು ಬಂಡಾಯ ಏಳುವ ಸೂಚನೆ ಕಾಣಿಸಿಸದ್ದರಿಂದ ಜಿಎಫ್ ಪಿಯ ವಿಜಯ್ ಸರ್ದೇಸಾಯಿ ಮತ್ತು ಎಮ್ ಜಿಪಿಯ ಸುದಿನ್ ಧಾವಾಲಿಕರ್ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು.

ರಾತ್ರೋರಾತ್ರಿ ಶಾಕಿಂಗ್ ಬೆಳವಣಿಗೆ
ಆದರೆ ಮಂಗಳವಾರ ತಡರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ ಮನೋಹರ್ ಅಜಗಾಂವ್ಕರ್ ಮತ್ತು ದೀಪಕ್ ಪಾವಸ್ಕರ್ ಸ್ಪೀಕರ್ ಮೈಕಲ್ ಲೊಬೊ ಅವರಿಗೆ ತಡರಾತ್ರಿ 1:45 ರ ಸುಮಾರಿಗೆ ಪತ್ರವೊಂದನ್ನು ನೀಡಿ, ಬಿಜೆಪಿಯೊಂದಿಗೆ ಎಂಜಿಪಿಯನ್ನು ವಿಲೀನಗೊಳಿಸುವಂತೆ ಮನವಿ ಮಾಡಿಬಿಟ್ಟರು. ಆ ಪತ್ರಕ್ಕೆ ಸುದಿನ್ ಧವಾಲಿಕರ್ ಅವರು ಸಹಿ ಮಾಡಿರಲಿಲ್ಲ. ನಂತರ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ.












Click it and Unblock the Notifications