ಮೋದಿಯ ಇತ್ತೀಚಿನ ಬಲಿಪಶು ಯಡಿಯೂರಪ್ಪ: ಸುರ್ಜೇವಾಲಾ
ನವದೆಹಲಿ, ಜುಲೈ 26: ಯಡಿಯೂರಪ್ಪ ಪ್ರಧಾನಿ ಮೋದಿಯ ಇತ್ತೀಚಿನ ಬಲಿಪಶು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್ಗೆ ಆಹಾರವಾಗಿದೆ. ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ರಾಜೀನಾಮೆ ವಿಷಯವನ್ನು ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಆಯ್ಕೆ ಶಾಸಕರ ಇಚ್ಛೆಯ ಪ್ರಕಾರ ನಡೆಯುವುದಿಲ್ಲ. ಬದಲಾಗಿ ದೆಹಲಿಯ ದಬ್ಬಾಳಿಕೆಯ ಪ್ರಕಾರ ನಡೆಯಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದೇ ಅಕ್ರಮವಾಗಿ, ಭ್ರಷ್ಟಾಚಾರ ಹಾಗೂ ಶಾಸಕರ ಪಕ್ಷಾಂತರದಿಂದ ಬಂದಿದ್ದಾಗಿದೆ ಎಂದು ಸುರ್ಜೆವಾಲ ಆರೋಪಿಸಿದ್ದಾರೆ.

ಹಿರಿಯ ಬಿಜೆಪಿ ನಾಯಕರಿಗೆ ಒತ್ತಾಯಪೂರ್ವಕ ರಾಜೀನಾಮೆ ಕೊಡಿಸುತ್ತಿರುವ ಮೋದಿ ಅವರ ಇತ್ತೀಚಿನ ಬಲಿಪಶು ಯಡಿಯೂರಪ್ಪ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಆರೋಪಿಸಿದ್ದಾರೆ.
ಸುಮಿತ್ರಾ ಮಹಾಜನ್, ಸುಷ್ಮಾ ಸ್ವರಾಜ್, ಉಮಾ ಭಾರತಿ, ಸಿಪಿ ಠಾಕೂರ್, ಎಕೆ ಪಟೇಲ್, ಹರೇನ್ ಪಾಂಡ್ಯ, ಹರೇನ್ ಪಾಠಕ್, ಕಲ್ಯಾಣ್ ಸಿಂಗ್, ಮುಂತಾದವರನ್ನು ಪಕ್ಷದಲ್ಲಿ ಒತ್ತಾಯಪೂರ್ವಕವಾಗಿ ನೇಪಥ್ಯಕ್ಕೆ ಸರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ರವಿಶಂಕರ್ ಪ್ರಸಾದ್, ಹರ್ಷವರ್ಧನ್, ಸುಶೀಲ್ ಮೋದಿ ಅವರನ್ನು ನೇಪಥ್ಯಕ್ಕೆ ಸರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದಾರೆ.
ಮೋದಿ ಅವರು ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನ, ಹಿಂಸೆ ರಾಜೀನಾಮೆ ನೀಡುವುದಕ್ಕೆ ಕಾರಣವಾಗಿದ್ದು ಒತ್ತಾಯಪೂರ್ವಕ ರಾಜೀನಾಮೆ ನೀಡುವ ಸಾಲಿನಲ್ಲಿ ಯಡಿಯೂರಪ್ಪ ಮೋದಿ ಅವರ ಇತ್ತೀಚಿನ ಬಲಿಪಶುವಾಗಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications