ದೆಹಲಿ: ನೆರೆ ಹೊರೆಯವರ ಜಗಳಕ್ಕೆ ಬಾಲಕ ಬಲಿ
ನವದೆಹಲಿ, ನವೆಂಬರ್ 25 : ನೆರೆಹೊರೆ ಮಹಿಳೆಯರ ಜಗಳ, ಎರಡು ವರ್ಷದ ಹಸುಳೆಯ ಜೀವಕ್ಕೆ ಎರವಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಉತ್ತಮ್ ನಗರದಲ್ಲಿ ನಿವಾಸಿಯಾದ ದೀಪಮಾಲಾ ತನ್ನ ಪಕ್ಕದ ಮನೆಯ ಮಹಿಳೆ ಖುಷ್ಬು ಜೊತೆ ಯಾವುದೊ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ. ಆದರೆ ಆ ಜಗಳ ಅಂತ್ಯ ಕಂಡಿದ್ದು ಮಾತ್ರ ಸಾವಲ್ಲಿ.
ತೀರಾ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದ ದೀಪಮಾಲಾ ಮತ್ತು ಖುಷ್ಬುರ ನಡುವೆ ಸಣ್ಣ ದ್ವೇಷ ಪ್ರಾರಂಭವಾಗಿದೆ. ಜಗಳವನ್ನು ಅಲ್ಲಿಗೆ ಬಿಡದ ದೀಪಮಾಲ ಖುಷ್ಬು ಅವರ 2 ವರ್ಷದ ಮಗ ನಿಖಿಲ್ ನನ್ನು ತನ್ನ ಮನೆಗೆ ಆಡಲು ಕರೆದಿದ್ದಾಳೆ. ಮಗು ಆಡುತ್ತಿರಬೇಕಾದರೆ ಮಹಿಳೆ ಆತನ ತಲೆಯನ್ನು ಗೋಡೆಗೆ ಜಜ್ಜಿ ಹಲ್ಲೆ ಮಾಡಿದ್ದಾಳೆ.
ರಕ್ತ ಕಾರುತ್ತಾ ಬಿದ್ದಿದ್ದ ನಿಖಿಲ್ ನ ದೇಹವನ್ನು ಒಂದು ಮೂಟೆಯಲ್ಲಿ ಹಾಕಿದ ದೀಪಮಾಲಾ ದೂರ ಬಿಸಾಡಲು ಯೋಜಿಸಿ ಕತ್ತಲಾಗಲು ಕಾಯುತ್ತಾ ಕೂತಿದ್ದಳು.
ಇತ್ತ ಮಗ ನಿಖಿಲ್ ನನ್ನು ಕಾಣದೆ ಕಂಗಾಲಾದ ಖುಷ್ಬು ಎಲ್ಲಡೆ ಹುಡುಕಿ ಕೊನೆಗೆ ತನ್ನ ಪಕ್ಕದ ಮನೆಯಲ್ಲೆ ತಲೆಗೆ ಗಾಯ ಮಾಡಿಕೊಂಡು ರಕ್ತದ ಮಡುವಿನಲ್ಲಿ ಮೂಟೆಯೊಳಗೆ ಬಂಧಿಯಾಗಿದ್ದ ಮಗನನ್ನು ಕಂಡು ಹೌಹಾರಿದ್ದಾಳೆ. ಕೂಡಲೆ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಆತ ದಾರಿಯಲ್ಲೇ ಅಸುನೀಗಿದ್ದಾನೆ.
ದ್ವೇಷಕ್ಕಾಗಿ ಮಗುವನ್ನು ಕೊಂದ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಯಾವ ಕಾರಣಕ್ಕೆ ನೆರೆಹೊರೆಯವರಿಬ್ಬರೂ ಜಗಳ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿಲ್ಲ.