ಆಗಸ್ಟ್ 9 ರಂದು ದಲಿತ ಸಂಘಟನೆಗಳಿಂದ ಭಾರತ್ ಬಂದ್, ಯಾಕಾಗಿ?
Recommended Video
ನವದೆಹಲಿ, ಆಗಸ್ಟ್ 8: ಪರಿಶಿಷ್ಟ ಜಾತಿ ಮತ್ತು ಪಂಗಡ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಮಂಡಿಸಿರುವುದನ್ನು ವಿರೋಧಿಸಿ, ಆಗಸ್ಟ್ 9 ರಂದು ಭಾರತ್ ಬಂದ್ ಗೆ ವಿವಿಧ ದಲಿತ ಸಂಘಟನೆಗಳು ಕರೆನೀಡಿವೆ.
ಅಖಿಲ ಭಾರತ ಅಂಬೇಡ್ಕರ್ ಮಹಾಸಭಾ(ಎಬಿಎಎಂ) ನೇತೃತ್ವದಲ್ಲಿ ಬಂದ್ ಗೆ ಕರೆ ನೀಡಲಾಗಿದ್ದು, ವಿವಿಧ ದಲಿತ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಲಿದೆ. ಕಳೆದ ಮಾರ್ಚ್ ನಲ್ಲಿ ಸುಪ್ರೀಂ ಕೋರ್ಟ್, ಎಸ್ ಸಿ ಎಸ್ ಟಿ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ನೀಡಿದ್ದ ಸೂಚನೆಯ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಐದಕ್ಕೂ ಹೆಚ್ಚು ಜನ ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಸ್ಸಿ, ಎಸ್ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿ: ಸುಪ್ರೀಂಕೋರ್ಟ್ ಅನುಮತಿ
ಉತ್ತರ ಭಾರತದಾದ್ಯಂತ ಈ ಪ್ರತಿಭಟನೆಯ ಕಾವು ಮುಗಿಲುಮುಟ್ಟಿತ್ತು. ಸುಮಾರು ಒಂದು ವಾರಗಳ ಕಾಲ ಉತ್ತರ ಭಾರತದಲ್ಲಿ ಹಿಂಸಾಚಾರ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪರಾಮರ್ಶಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತಾದರೂ ಆಗಸ್ಟ್ 7 ರಂದು ತಿದ್ದುಪಡಿ ಕಾಯ್ದೆಯನ್ನು ಅಧಿವೇಶನದಲ್ಲಿ ಮಂಡನೆ ಮಾಡಿದೆ.
ಏನಿದು ಎಸ್ಸಿ ಎಸ್ಟಿ ಕಾಯ್ದೆ? ತಿದ್ದುಪಡಿ ಯಾಕೆ?
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ಸಾಮಾಜಿಕವಾಗಿ ಹಿಂದುಳಿದಿದ್ದು, ಅವರ ಮೇಲೆ ನಿರಂತರ ಹಿಂಸೆ ನಡೆಯುತ್ತಿದೆ ಎಂಬುದನ್ನು ಮನಗಂಡಿದ್ದ 1989ರ ಸರ್ಕಾರ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ 1989 ಅನ್ನು ಜಾರಿಗೆ ತಂದಿತ್ತು. ಇದರನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯಾವುದೇ ವ್ಯಕ್ತಿ ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ದೂರು ನೀಡಿದ್ದೇ ಆದಲ್ಲಿ, ಆರೋಪಿಯನ್ನು ಯಾವುದೇ ವಿಚಾರಣೆಯಿಲ್ಲದೆ ಬಂಧಿಸಲಾಗುತ್ತಿತ್ತು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿತ ಸುಪ್ರೀಂ ಕೋರ್ಟ್ ಈ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಕೇಮದ್ರ ಸರ್ಕಾರಕ್ಕೆ ಸೂಚಿಸಿತ್ತು.
ಮಾ.20 ರ ಮಹತ್ವದ ತೀರ್ಪು
ದಲಿತರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಯಾವುದೇ ದೂರು ಬಂದರೂ, ವಿಚಾರಣೆಯ ನಂತರವೇ ಆರೋಪಿಗೆ ಶಿಕ್ಷೆ ನೀಡುವ ಅಥವಾ ಬಂಧಿಸುವ ಕೆಲಸ ಮಾಡಬೇಕು. ದೂರನ್ನು ಆಧರಿಸಿ ತಕ್ಷಣ ಕ್ರಮ ಕೈಗೊಳ್ಳುವಂತಿಲ್ಲ. ಈ ಕಾಯ್ದೆ ಇತ್ತೀಚೆಗೆ ದುರುಪಯೋಗವಾಗುತ್ತಿದೆ, ಅಮಾಯಕರು ಶಿಕ್ಷೆಗೊಳಗಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಹೊಸ ತಿದ್ದುಪಡಿಯಲ್ಲೇನಿದೆ?
ಕಾಯ್ದೆಯಲ್ಲಿ ಮಾಡಲಾದ ಹೊಸ ತಿದ್ದುಪಡಿಯ ಪ್ರಕಾರ ಎಸ್ಸಿ ಎಸ್ಟಿ ಕಾಯ್ದೆಯನ್ವಯ ಯಾರನ್ನಾದರೂ ಬಂಧಿಸಬೇಕಾದರೆ ಪ್ರಾಥಮಿಕ ಡಿಎಸ್ಪಿ ತನಿಖೆಯಾಗಬೇಕು, ನಂತರ ಅಗತ್ಯವಿದ್ದಲ್ಲಿ ಮಾತ್ರವೇ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ, ತಿದ್ದುಪಡಿಗೂ ಮುನ್ನ ಈ ಕಾಯ್ದೆಯಡಿ ಬಂಧಿತರಾದವರಿಗೆ ಜಾಮೀನು ಸಿಗುತ್ತಿರಲಿಲ್ಲ. ತಿದ್ದುಪಡಿಯ ನಂತರ ಜಾಮೀನು ನೀಡಬಹುದಾಗಿದೆ.
ತಿದ್ದುಪಡಿಗೆ ಆಡಳಿತ ಪಕ್ಷದಲ್ಲೇ ವಿರೋಧ?
ಈ ಕಾಯ್ದೆಯಲ್ಲಿ ತಿದ್ದುಪಡಿ ತಂದಿರುವುದನ್ನು ಆಡಳಿತ ಎನ್ ಡಿಎ ಸರ್ಕಾರದ ಕೆಲವರೇ ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ. ಇದು ಮುಂಬರುವ ಚುನಾವಣೆಗಳಲ್ಲಿ ದಲಿತರ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಮತಗಳ ಮೇಲೆ ಭಾರೀ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಇವರದಾಗಿದೆ.
ಬಂದ್ ಅನ್ನು ಬೆಂಬಲಿಸಬೇಡಿ ಎಂದ ಸರ್ಕಾರ
ಯಾವುದೇ ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಬೇಕು, ಅಶಾಂತಿ, ಹಿಂಸಾಚಾರ ಸೃಷ್ಟಿಸುವ ಬಂದ್ ಗೆ ಬೆಂಬಲ ನೀಡಬೇಡಿ. ದಯವಿಟ್ಟು ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಿ ಎಂದು ಸರ್ಕಾರ ಹೇಳಿದೆ. ಯಾವ ಕಾರಣಕ್ಕೂ ಬಂದ್ ಗೆ ತಾನು ಬೆಂಬಲ ನೀಡಲಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.